ಪೇಜಾವರ ಪರ್ಯಾಯಕ್ಕೆ 'ಪುತ್ತಿಗೆ' ವಿವಾದದ ಕಾರ್ಮೋಡ

ಉಡುಪಿ, ಜ.15: ಇದೇ ಜ.18ರ ಮುಂಜಾನೆ ಪೇಜಾವರ ಮಠಾಧೀಶರ ದಾಖಲೆಯ ಐದನೇ ಪರ್ಯಾಯ ಪೀಠಾರೋಹಣ ಸಮಾರಂಭದ ಅಂಗವಾಗಿ ನಡೆಯುವ ಪರ್ಯಾಯ ದರ್ಬಾರ್ನಲ್ಲಿ ತಾವು ಭಾಗವಹಿಸಿ ಪೇಜಾವರ ಶ್ರೀಗೆ ಪುತ್ತಿಗೆ ಮಠದ ವತಿಯಿಂದ 'ಅಭಿನವ ಶ್ರೀಸುಧೀಂದ್ರ ತೀರ್ಥ' ಬಿರುದು ಪ್ರದಾನ ಮಾಡುವುದಾಗಿ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಇಂದು ಘೋಷಿಸುವ ಮೂಲಕ ಪ್ರಶಾಂತವಾಗಿದ್ದ ಪರ್ಯಾಯ ಸಂಭ್ರಮದಲ್ಲಿ ವಿವಾದದ ಕಂಪನಗಳನ್ನೆಬ್ಬಿಸಿದರು.
ಶ್ರೀಮಧ್ವಾಚಾರ್ಯರು ಸ್ಥಾಪಿಸಿದ ಶ್ರೀಕೃಷ್ಣ ಮಠದ ಯತಿಗಳಿಗೆ ನಿಷಿದ್ಧ ವಾಗಿರುವ 'ಸಾಗರೋಲ್ಲಂಘನೆ' ಮಾಡಿರುವ ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಪುತ್ತಿಗೆ ಮಠದ ಸ್ವಾಮೀಜಿ ಇಂದು ತನ್ನ ಮಠದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಡಿದ ಈ ಘೋಷಣೆ ಈ ಸಲವೂ ಪರ್ಯಾಯದಲ್ಲಿ ವಿವಾದದ ಹೊಗೆ ಏಳುವಂತೆ ಮಾಡಿದೆ.
ಪೇಜಾವರ ಮಠಾಧೀಶ ಶ್ರೀವಿಶ್ವೇಶತೀರ್ಥರು ಜ.18ರಂದು ಮುಂಜಾನೆ ಪರ್ಯಾಯ ಪೀಠಾರೋಹಣ ಮಾಡಲಿದ್ದಾರೆ. ಉಡುಪಿಯ ಅಷ್ಟಮಠಗಳಲ್ಲಿ ಮೊದಲನೆಯವರಾಗಿ ಸಾಗರೋಲ್ಲಂಘನೆ ಮಾಡಿ 'ವಿದೇಶ'ಗಳಿಗೆ ತೆರಳಿದ ಪುತ್ತಿಗೆಶ್ರಿ, ಆ ಬಳಿಕ ಕೆಲವು ಮಠಗಳಿಗೆ ಅಮಾನ್ಯರಾಗಿದ್ದಾರೆ. 2008-10ರಲ್ಲಿ ನಡೆದ ಪುತ್ತಿಗೆ ಶ್ರೀ ಮೂರನೆ ಪರ್ಯಾಯ ಸಂದರ್ಭದಲ್ಲಿ ಪರ್ಯಾಯ ಮೆರವಣಿಗೆ ಹಾಗೂ ದರ್ಬಾರ್ನ್ನು ಹೆಚ್ಚಿನೆಲ್ಲಾ ಸ್ವಾಮಿಗಳು ಬಹಿಷ್ಕರಿಸಿದ್ದರು. ಆ ಬಳಿಕ ನಡೆದ ಸೋದೆ ಹಾಗೂ ಕಾಣಿಯೂರು ಪರ್ಯಾಯಗಳ ದರ್ಬಾರ್ಗೆ ಪುತ್ತಿಗೆಶ್ರೀಗೆ ಆಹ್ವಾನವಿರಲಿಲ್ಲ.
'ಉಡುಪಿ ಶ್ರೀಕೃಷ್ಣ ಮಠದ ಇತಿಹಾಸದಲ್ಲಿ ಐತಿಹಾಸಿಕ ದಾಖಲೆಯೊಂದು ನಿರ್ಮಾಣಗೊಳ್ಳುತ್ತಿದೆ. ಈ 800 ವರ್ಷಗಳಲ್ಲಿ ಯಾರೊಬ್ಬರೂ ಐದು ಪರ್ಯಾಯಗಳನ್ನು ನಡೆಸಿಲ್ಲ. ಇದಕ್ಕಾಗಿ ಇಡೀ ನಾಡಿನ ಜನತೆಯೇ ಪೇಜಾವರ ಶ್ರೀಗಳನ್ನು ಅಭಿನಂದಿಸುತ್ತಿದೆ. ಈ ಸಂದರ್ಭದಲ್ಲಿ ನಮ್ಮ ನಡುವಿನ ಹಿರಿಯ ಶ್ರೀಗಳನ್ನು ಅಭಿನಂದಿಸುವುದು ಅಷ್ಟಮಠಗಳಲ್ಲೊಂದಾದ ಪುತ್ತಿಗೆ ಮಠದ ಕರ್ತವ್ಯವಾಗಿದೆ' ಎಂದು ಪುತ್ತಿಗೆ ಶ್ರೀ ತಿಳಿಸಿದರು.
ನಮ್ಮ ಮಠದ ದೇಶ ಮತ್ತು ವಿದೇಶಗಳ ಭಕ್ತರ ಹಾಗೂ ಅಭಿಮಾನಿಗಳ ಒತ್ತಾಸೆಯಂತೆ ತಾವು ಪುತ್ತಿಗೆ ಮಠದ ಪರಮ ಗುರುಗಳಾದ ಶ್ರೀಸುಧೀಂದ್ರ ತೀರ್ಥರ ನೆನಪಿನಲ್ಲಿ ಪೇಜಾವರ ಶ್ರೀಗಳಿಗೆ ದರ್ಬಾರ್ ಸಭೆಯಲ್ಲಿ 'ಅಭಿನವ ಶ್ರೀಸುಧೀಂದ್ರ ತೀರ್ಥ' ಬಿರುದು ನೀಡಲು ನಿರ್ದರಿಸಿದ್ದೇವೆ ಎಂದರು.
ಶ್ರೀಸುಧೀಂದ್ರ ತೀರ್ಥರಿಗೆ 100 ವರ್ಷ ತುಂಬಿದಾಗ ಶ್ರೀವಿದ್ಯಾಮಾನ್ಯ ತೀರ್ಥರು ಹಾಗೂ ಶ್ರೀವಿಶ್ವೇಶತೀರ್ಥರ ನೇತೃತ್ವದಲ್ಲಿ ಶತಮಾನೋತ್ಸವ ಹಾಗೂ ಅಪೂರ್ವವಾದ ಕನಕಾಭಿಷೇಕವನ್ನು ನಡೆಸಲಾಗಿತ್ತು. ಅದಮಾರು ಶ್ರೀಗಳು ಅಂದು ಅವರ ಹೆಸರಿನಲ್ಲಿ ರಜತಥವನ್ನು ಅರ್ಪಿಸಿದ್ದರು. ಹೀಗೆ ಇಂಥ ಐತಿಹಾಸಿಕ ಕ್ಷಣಗಳನ್ನು ಎಲ್ಲರೂ ಸೇರಿ ಆಚರಿಸಿದ ಉದಾಹರಣೆ ಶ್ರೀಕೃಷ್ಣ ಮಠದಲ್ಲಿದ್ದು, ಈ ಬಾರಿ ತಾವೂ ಪುತ್ತಿಗೆ ಮಠದ ವತಿಯಿಂದ ಪೇಜಾವರ ಶ್ರೀಗಳ ಐತಿಹಾಸಿಕ ಸಾಧನೆಯನ್ನು ಬಿರುದು ನೀಡಿ ಆಚರಿಸುತ್ತೇವೆ ಎಂದರು.

ತಮಗೆ ಈ ಬಾರಿ ಪರ್ಯಾಯದಲ್ಲಿ ಭಾಗವಹಿಸುವಂತೆ ಪೇಜಾವರ ಶ್ರೀಗಳು 15ದಿನಗಳ ಹಿಂದೆ ತೀರ್ಥಹಳ್ಳಿಯ ತಮ್ಮ ಶಾಖಾ ಮಠಕ್ಕೆ ಬಂದು ಆಹ್ವಾನಿಸಿದ್ದಾರೆ. ಅಷ್ಟಮಠದ ಒಂದು ಭಾಗವಾಗಿ ತಮಗೆ ಪ್ರತ್ಯೇಕ ಆಹ್ವಾನದ ಅಗತ್ಯವಿಲ್ಲ. ತಾವು ಈ ಬಾರಿ ಪರ್ಯಾಯ ಮೆರವಣಿಗೆ ಮತ್ತು ದರ್ಬಾರ್ ಗಳಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದರು.
ಪೇಜಾವರ ಶ್ರೀ ಸ್ಪಷ್ಟನೆ
'ತಾವು ಪುತ್ತಿಗೆ ಶ್ರೀಗಳಿಗೆ ಪರ್ಯಾಯಕ್ಕೆ ಆಹ್ವಾನ ನೀಡುವಾಗ ಕಳೆದ ಕಾಣಿಯೂರು ಪರ್ಯಾಯದ ವೇಳೆ ಭಾಗವಹಿಸಿದ ರೀತಿಯಲ್ಲೇ ಈ ಬಾರಿ ಭಾಗವಹಿಸಿ ಸಹಕರಿಸಿ' ಎಂದು ಹೇಳಿದ್ದೆ ಎಂದು ಪೇಜಾವರ ಮಠದ ಶ್ರೀವಿಶ್ವೇಶತೀರ್ಥರು ಸ್ಪಷ್ಟಪಡಿಸಿದ್ದಾರೆ.







