ವಿಕಲಚೇತನರ ಕಲ್ಯಾಣಕ್ಕೆ ಪ್ರತ್ಯೇಕ ಸಚಿವಾಲಯ: ಕೆ.ಎಸ್.ರಾಜಣ್ಣ

ಟ್ಯಾಲೆಂಟ್ ದಶಮಾನೋತ್ಸವ ಸಂಭ್ರಮದಲ್ಲಿ ‘ಸ್ವಾಭಿಮಾನ್’ ಕಾರ್ಯಕ್ರಮ ಉದ್ಘಾಟನೆ
ಮಂಗಳೂರು: ರಾಜ್ಯದಲ್ಲಿ ಸುಮಾರು 1 ಕೋಟಿ ವಿಕಲಚೇತನ, ಮಂಗಳಮುಖಿ ಮತ್ತು ಹಿರಿಯ ನಾಗರಿಕರಿದ್ದು, ಇವರ ಕಲ್ಯಾಣಕ್ಕಾಗಿ ಪ್ರತ್ಯೇಕ ಸಚಿವಾಲಯದ ಅಗತ್ಯವಿದೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗಿದೆ ಎಂದು ರಾಜ್ಯ ವಿಕಲಚೇತನ ಇಲಾಖೆಯ ಆಯುಕ್ತ ಕೆ.ಎಸ್.ರಾಜಣ್ಣ ಹೇಳಿದರು.
ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವಿಕಲಚೇತನರಿಗೆ ಸ್ಪೂರ್ತಿ ನೀಡಲು ನಗರದ ಪುರಭವನದಲ್ಲಿ ಶನಿವಾರ ಆಯೋಜಿಸಿದ ‘ಸ್ವಾಭಿಮಾನ್’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದ ಹಲವೆಡೆ , ವಿವಿಧ ಇಲಾಖೆಗಳಲ್ಲಿ ವಿಕಲಚೇತನರಿಗೆ ಕಿರುಕುಳ ನೀಡುತ್ತಿರುವುದು ಗಮನಕ್ಕೆ ಬಂದಿದೆ. ಇಂತಹ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ರಾಜಣ್ಣ ತಿಳಿಸಿದರು.
ಮುಖ್ಯ ಅತಿಥಿ ಭಾಷಣ ಮಾಡಿದ ಚರ್ಮರೋಗ ತಜ್ಞೆ ಡಾ.ಮಹಾಜಬೀನ್ ಮದರ್ಕರ್, ಪ್ರಸಕ್ತ ಹಲವಾರು ಕ್ಷೇತ್ರಗಳಲ್ಲಿರುವ ಸ್ಪರ್ಧೆಗೆ ಹಿಂಜರಿಯದೆ ಸವಾಲು ಎದುರಿಸಿ ಸಾಧನೆ ಮಾಡಬೇಕು ಎಂದು ಕರೆ ನೀಡಿದರು.
ಸಮಾರಂಭದಲ್ಲಿ ರಾಜ್ಯ ವಿಕಲಚೇತನ ಇಲಾಖೆಯ ಸಹಾಯಕ ಆಯುಕ್ತ ಪದ್ಮನಾಭ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಜಿಲ್ಲಾ ಅಧಿಕಾರಿ ಎ. ಉಸ್ಮಾನ್, ದ.ಕ. ಮತ್ತು ಉಡುಪಿ ಜಿಲ್ಲಾ ವಿಕಲಚೇತನರ ಅಸೋಸಿಯೇಶನ್ ಅಧ್ಯಕ್ಷ ಡಾ.ಮುರಳೀಧರ ನಾಕ್, ಆಳ್ವಾಸ್ ಎಜುಕೇಶನ್ ಟ್ರಸ್ಟ್ನ ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಸಬಿತಾ ಮೋನಿಸ್, ಕೆಪಿಸಿ ಕಾರ್ಮಿಕ ಸಂಘಟನೆ ಅಧ್ಯಕ್ಷ ಹೊಂಬೆಗೌಡ, ಪಿಎಫ್ಐ ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ, ಉದ್ಯಮಿ ಜಿ.ಕೆ. ಶರೀಫ್, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸ್ಥಾಪಕಾಧ್ಯಕ್ಷ ಅಬ್ದುರ್ರವೂಫ್ ಪುತ್ತಿಗೆ, ಸುಲೈಮಾನ್ ಶೇಕ್ ಬೆಳುವಾಯಿ, ಶೇಕ್ ಅಬ್ದುಲ್ ಮಜೀದ್, ದಿನೇಶ್ ಶೆಟ್ಟಿ, ಫತೆ ಮುಹಮ್ಮದ್, ನೂರುನ್ನಿಸಾ ಉಪಸ್ಥಿತರಿದ್ದರು.







