ವಿಟ್ಲ : ರಕ್ಷಿತಾರಣ್ಯವೊಂದಕ್ಕೆ ಆಕಸ್ಮಿಕವಾಗಿ ಬೆಂಕಿ

ವಿಟ್ಲ : ರಕ್ಷಿತಾರಣ್ಯವೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಹೊತ್ತಿ ಉರಿದ ಘಟನೆ ಇಲ್ಲಿನ ಸಮೀಪದ ಉಕ್ಕುಡ-ಕನ್ಯಾನ ರಸ್ತೆಯ ಆನೆಪದವು ಎಂಬಲ್ಲಿನ ಕಳಂಜಿಮಲೆ ರಕ್ಷಿತಾರಣ್ಯದಲ್ಲಿ ಭಾನುವಾರ ರಾತ್ರಿ ನಡೆದಿದೆ. ಸುಮಾರು 35 ಹೆಕ್ಟೇರ್ ವಿಸ್ತೀರ್ಣದ ಈ ರಕ್ಷಿತಾರಣ್ಯದಲ್ಲಿ 8.7 ಎಕ್ರೆ ಕಾಡಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಹೊತ್ತಿ ಉರಿದಿದೆ. ಘಟನೆಯ ಸುದ್ದಿ ತಿಳಿಯುತ್ತಲೇ ತಕ್ಷಣ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸಾರ್ವಜನಿಕರು 5 ತಾಸಿನ ಸತತ ಕಾರ್ಯಾಚರಣೆಯ ಬಳಿಕ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕನ್ಯಾನದಿಂದ ವಿಟ್ಲ ಕಡೆಗೆ ಸಾಗುತ್ತಿದ್ದ ವಾಹನ ಚಾಲಕರೊಬ್ಬರು ಆನೆಪದವು ಸಮೀಪ ರಸ್ತೆ ಬದಿಯಲ್ಲಿ ಬೆಂಕಿ ಉರಿಯುತ್ತಿರುವ ಬಗ್ಗೆ ಉಕ್ಕುಡ ಅರಣ್ಯ ಇಲಾಖೆ ಚೆಕ್ ಪೋಸ್ಟ್ನಲ್ಲಿ ಮಾಹಿತಿ ನೀಡಿದ್ದಾರೆ. ತಕ್ಷಣ ವಿಟ್ಲ ಉಪವಲಯ ಅರಣ್ಯಾಧಿಕಾರಿ ಎಸ್.ಎನ್. ಲೋಕೇಶ್, ಅರಣ್ಯ ರಕ್ಷಕರಾದ ಪದ್ಮನಾಭ, ರವಿ ಅವರು ಕಾರ್ಯಾಚರಣೆಗೆ ಇಳಿದಿದ್ದಾರೆ. ಬೆಂಕಿ ನಂದಿತು ಎನ್ನುವಷ್ಟರಲ್ಲಿ ಗಾಳಿಯ ವೇಗ ಹೆಚ್ಚಾಗಿ ಬೆಂಕಿಯ ಕಿಡಿಗಳು ಹಾರಿ ಹಲವು ಕಡೆಯಲ್ಲಿ ಒಣಗಿದ ಮುಳಿ ಹುಲ್ಲಿನ ಮೇಲೆ ಬಿದ್ದಿದೆ. ಇದರಿಂದ ಹಲವು ಕಡೆಗಳಲ್ಲಿ ಬೆಂಕಿ ಉರಿಯಲಾರಂಭಿಸಿತು. ಗುಡ್ಡಕ್ಕೆ ಬೆಂಕಿ ಬಿದ್ದ ಮಾಹಿತಿ ತಿಳಿದ ಸಾರ್ವಜನಿಕರು ಸ್ಥಳಕ್ಕೆ ಬಂದು ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಸಹಕರಿಸಿದರು.
ಬೆಂಕಿಯ ಕೆನ್ನಾಲಗೆ ಗುಡ್ಡದ ಮೇಲ್ಬಾಗದವರೆಗೂ ವ್ಯಾಪಿಸಿತ್ತು. ಬಳಿಕ ಬಂಟ್ವಾಳ ಹಾಗೂ ಪುತ್ತೂರು ಅಗ್ನಿಶಾಮಕ ಸಿಬ್ಬಂದಿಗಳನ್ನೂ ಸ್ಥಳಕ್ಕೆ ಕರೆಸಲಾಯಿತು.









