ದೇವರು,ದೈವಗಳಿಗಾಗಿ ಮನುಷ್ಯರನ್ನು ಬಲಿತೆಗೆದುಕೊಳ್ಳುವ ಸಂಸ್ಕೃತಿ ನಮ್ಮದಲ್ಲ
ಪ್ರಾಚೀನ ಕಾಲದಿಂದಲೂ ನಮ್ಮ ದೇಶದ ಕರಾವಳಿ ಜಿಲ್ಲೆಗಳು ಜಾಗತೀಕರಣಕ್ಕೆ ಮುಖಾಮುಖಿಯಾಗಿ ತನ್ನದೇ ರೀತಿಯಲ್ಲಿ ಕೊಡುಕೊಳ್ಳುವ ಸಂಬಂಧವನ್ನು ಬೆಳೆಸಿಕೊಂಡಿವೆ. ಪಶ್ಚಿಮ ಕರಾವಳಿಯಂತೂ ಕ್ರಿಸ್ತಪೂರ್ವದಿಂದಲೇ ವಾಣಿಜ್ಯ ಸಂಪರ್ಕವನ್ನು ಪಶ್ಚಿಮ ದೇಶಗಳೊಂದಿಗೆ ಬೆಳೆಸುತ್ತಾ ಬಂದಿದೆ. ಗ್ರೀಕರು, ರೋಮನರು, ಅರಬರು ಕರಾವಳಿಯೊಂದಿಗೆ ಸಂಪರ್ಕವಿರಿಸಿಕೊಂಡಿರುವುದಕ್ಕೆ ಚಾರಿತ್ರಿಕ ಸಾಕ್ಷಿಗಳಿವೆ. ವಾಣಿಜ್ಯ ಸಂಗತಿಯ ಉದ್ದೇಶದಿಂದಲೇ ಇಲ್ಲಿನ ಜನರೊಂದಿಗೆ ಬೆರೆಯಲು ಬಂದ ವ್ಯಾಪಾರಿಗಳಲ್ಲದೆ ಪ್ರವಾಸದ ಉದ್ದೇಶದಿಂದಲೂ ಬೇರೆ ಬೇರೆ ದೇಶಗಳ ಜನರು ಈ ಕರಾವಳಿಯ ಜಿಲ್ಲೆಗಳೊಂದಿಗೆ ಸಂಪರ್ಕ ಇರಿಸಿಕೊಂಡಿದ್ದರು. ಎಚ್ ಎಲ್ ನಾಗೇಗೌಡರು ಸಂಪಾದಿಸಿದ ‘ಪ್ರವಾಸಿ ಕಂಡ ಇಂಡಿಯಾ’ ಎಂಬ ಕೃತಿಯಲ್ಲಿ ಈ ವಿದೇಶೀಯರು ಇಲ್ಲಿನ ಹೆಣ್ಣುಮಕ್ಕಳನ್ನು ಮದುವೆಯಾದ ಅನೇಕ ಕತೆಗಳು ಇವೆ. ಹಾಗೆಯೇ ಬಲಾತ್ಕಾರದಿಂದ ಮದುವೆಯಾದ ಕತೆಗಳೂ ಇವೆ. ಆಗ, ವಿದೇಶೀಯರು ಶ್ರೀಮಂತರಾದರೆ ಉಸಿರೆತ್ತದೆ ಸಮ್ಮತಿಸಿದ ಸಮಾಜವಿತ್ತು. ಹಾಗಲ್ಲದಿದ್ದರೆ ಹೆಣ್ಣನ್ನೇ ತಮ್ಮ ಕುಟುಂಬದಿಂದ ಬಹಿಷ್ಕರಿಸಿದ ಕತೆಗಳೂ ಇದ್ದವು.
ವಿವಾಹವ್ಯವಸ್ಥೆ ಆರಂಭವಾದ ಮೇಲೆ ಎಲ್ಲ ದೇಶಗಳಲ್ಲೂ ನಡೆದ ಕಥಾನಕಗಳಿವು. ಒಂದು ನೂರೈವತ್ತು ವರ್ಷಗಳ ಹಿಂದೆ ನನ್ನದೇ ಕುಟುಂಬದ ಹಿರಿಯರ ಮನೆಯ ಹೆಣ್ಣು ಮಗಳೊಬ್ಬಳು ತಾನು ಪ್ರೀತಿಸಿದ ಮುಸ್ಲಿಂ ಹುಡುಗನೊಂದಿಗೆ ಓಡಿ ಹೋಗಿ ಮದುವೆಯಾದಳು. ಆಗ ಮನೆಯಲ್ಲಿ ಅವಳ ಹೆತ್ತವರು, ‘ಅವಳು ತಮ್ಮ ಪಾಲಿಗೆ ಸತ್ತಳು’ ಎಂದು ಬೊಜ್ಜದೂಟ ಮಾಡಿ ಅವಳನ್ನು ಮರೆಯಲು ಪ್ರಯತ್ನಿಸಿದರು. ಆದರೆ ಅದೇ ಹೆಣ್ಣುಮಗಳು ಕಡಿದ ಸಂಬಂಧವನ್ನು ತನ್ನಮಕ್ಕಳ ಕಾಲದಲ್ಲಿ ತನ್ನ ತವರಿನೊಂದಿಗೆ ಬೆಸೆದು ಕೊಂಡಳು. ಹೋಗುವುದು, ಬರುವುದು, ಹೊಕ್ಕುಬಳಕೆಯೆಲ್ಲವೂ ಸಾಧ್ಯವಾಯಿತು. ‘ಇದು ನನ್ನ ತವರು ಮನೆ’ ಎಂಬ ಅಭಿಮಾನವನ್ನು ಆ ಹೆಣ್ಣುಮಗಳು ಉಳಿಸಿಕೊಂಡಿದ್ದಳು. ಈ ಹೆಣ್ಣುಮಗಳು ನಮ್ಮ ಕುಟುಂಬದ ಕುಡಿಯೆಂಬ ಪ್ರೀತಿಯನ್ನು ತವರಿನವರೂ ಉಳಿಸಿಕೊಂಡಿದ್ದರು. ಆದರೆ ಮೂರನೇ ತಲೆಮಾರಿನಲ್ಲಿ ಇದೇ ಪ್ರೀತಿಯ ಧಾರೆ ಹರಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಇದು ವಿಪರ್ಯಾಸ!
ನನ್ನ ಅಜ್ಜಿ ಮನೆಯ ಪಕ್ಕದಲ್ಲಿದ್ದ ಬೀರ ಮೊಯ್ದಿನ್ ಎಂಬವರು ನಮ್ಮ ಕಟುಂಬದ ಹಿತೈಷಿಗಳಾಗಿ ಕಷ್ಟಕಾಲದಲ್ಲಿ ಪರಸ್ಪರ ಆರ್ಥಿಕ ನೆರವು ನೀಡಿ ಸಲಹಿದ ಸಹೃದಯರು. ಎರಡನೇ ತಲೆಮಾರಿಗೆ ಆ ಮಮತೆ, ಪ್ರೀತಿ ನೆನಪಿನಲ್ಲಿ ಹಸಿರಾಗಿತ್ತು. ಮೂರನೇ ತಲೆಮಾರಿಗೆ ಆ ನೆನಪು ಮಾಡಿಕೊಳ್ಳುವುದು ಅವಮಾನವೋ, ನಾಚಿಕೆಯೋ ಆಗಿ ಕಾಡುತ್ತಿದೆಯೇನೋ ಎಂಬ ಗುಮಾನಿ ನನ್ನಲ್ಲಿ ಮೂಡುತ್ತಿದೆ. ಈ ಮಾನಸಿಕ ಬದಲಾವಣೆ ಹೇಗೆ ಸಾಧ್ಯವಾಯಿತು? ಎರಡನೇ ತಲೆಮಾರು ಮೊದಲ ತಲೆಮಾರಿಗಿಂತ ಸುಶಿಕ್ಷಿತ ಮತ್ತು ಆರ್ಥಿಕ ಸ್ಥಿತಿವಂತರೂ ಆಗಿದ್ದರೂ ಈ ಭಾವನಾತ್ಮಕ ಸಂಬಂಧಗಳನ್ನು ಗಟ್ಟಿಗೊಳಿಸುವಲ್ಲಿ ಅವರು ವಿಫಲರಾದರು. ತಮ್ಮ ಮಕ್ಕಳಾದ ಮೂರನೇ ತಲೆಮಾರಿಗೆ ಸೌಹಾರ್ದದ ಸಂಬಂಧಗಳನ್ನು ಹೇಗೆ ಗಟ್ಟಿಗೊಳಿಸಬಹುದೆಂಬುದನ್ನು ಮಾದರಿಯಗಿ ತೋರಿಸುವುದರಲ್ಲಿ ಸೋತರು. ವಿಭಕ್ತ ಕುಟುಂಬಗಳಲ್ಲಿ ಸಂಬಂಧಗಳು ಕನಿಷ್ಠಗೊಳ್ಳುತ್ತಾ ಹೋದಂತೆಲ್ಲಾ ಮಕ್ಕಳಲ್ಲಿ ಸಂಕುಚಿತ ಮನೋಭಾವ ಬೆಳೆಯುವಂತಾಯಿತೇನೋ? ಇದು ನನ್ನ ಅನಿಸಿಕೆ.
ಹಾಗೆ ನೋಡಿದರೆ ಈ ಪ್ರಾಚೀನ ಸಂಸ್ಕೃತಿಯಲ್ಲಿ ಒಂದು ವಿಶೇಷತೆಯಿದೆ. ಯಾವ ಮತದವನೇ ಆಗಿರಲಿ ಆತ ಬಾಲ್ಯದಲ್ಲಿ ಮತಧರ್ಮದ ಹಂಗಿಲ್ಲದೆ ಬೆಳೆಯುವ ವಾತವರಣ ಹಿಂದೆ ಇತ್ತು. ನೂರು ವರ್ಷಗಳ ಹಿಂದೆ ನೇಮ, ಬಯಲಾಟ, ಜಾತ್ರೆ, ಉರೂಸು, ಮೊಹರಂ, ಸಾಂತಮಾರಿಗಳನ್ನು ಎಲ್ಲರೂ ‘ಇದು ನನ್ನೂರಿನ ಹಬ್ಬ’ ವೆಂದು ಒಗ್ಗಟ್ಟಿನಿಂದ ಆಚರಿಸುವ ಕ್ರಮವಿತ್ತು. ನನ್ನ ತಂದೆಯ ಕುಟುಂಬದ ಮನೆಯ ಆರಾಧ್ಯ ದೈವವೇ ಆಲಿಭೂತ. ಈ ಆರಾಧನೆ ನಮ್ಮ ಕರಾವಳಿಯ ಹಲವು ಕುಟುಂಬಗಳಲ್ಲಿದೆ. ಬಂಗ್ರ ಮಂಜೇಶ್ವರದ ಕಡಪ್ಪರದಲ್ಲಿ ಬಬ್ಬರ್ಯನ ದೈವಸ್ಥಾನವಿದೆ. ಈ ದೈವ ಮೀನುಗಾರರಿಗೆ ಕಡಲತೀರದ ನಿವಾಸಿಗಳಿಗೆ ರಕ್ಷಣೆ ನೀಡುವ ದೈವವೆಂದು ನಂಬಿಕೆ ಇದೆ. ಯಾವುದೋ ಕ್ಷುಲ್ಲಕ ಕಾರಣಕ್ಕೆ ಈ ಬಬ್ಬರ್ಯನ ಆರಾಧನೆ ಕೆಲ ಕಾಲ ನಿಂತುಹೋಗಿತ್ತು. ಆಗ ಅಲ್ಲಿನ ಬೆಸ್ತರಿಗೆ ಮತ್ತು ಊರವರಿಗೆ ಏನೇನೋ ವಿಪತ್ತುಗಳು ಕಾಣಿಸಿಕೊಂಡಿತೆಂದು ಹೆದರಿದ ಜನರು ನಾಲ್ಕು ವರ್ಷಗಳ ಹಿಂದೆ ಎಲ್ಲರೂ ಸೇರಿ ಮತ್ತೆ ಬಬ್ಬರ್ಯನನ್ನು ಆರಾಧಿಸಲು ಆರಂಭಿಸಿದರು.
ಇಲ್ಲಿನ ಎರಡು ಕೋಮಿನವರನ್ನು ಪ್ರೀತಿಯ ಬೆಸುಗೆಗಳಲ್ಲಿ ಬಂಧಿಸುವಂತೆ ಮಾಡಿದ ಬಬ್ಬರ್ಯನ ಕಾರಣಿಕವೋ, ಜನರ ನಂಬಿಕೆಯೋ, ಒಟ್ಟಿನಲ್ಲಿ ಊರಿನಲ್ಲಿ ಶಾಂತಿ ನೆಮ್ಮದಿಯನ್ನು ತಂದುದಂತೂ ಸತ್ಯವಲ್ಲವೇ? ಬಬ್ಬರ್ಯನೆಂಬ ನಮ್ಮೂರ ಅತಿ ಸಣ್ಣ ದೈವವೊಂದು ಕೋಮು ಸೌಹಾರ್ದ ಮಾಡಬಲ್ಲುದಾದರೆ ರಾಮನೆಂಬ ದೇವರು ಯಾಕೆ ವಿಫಲನಾದ? ಈ ಪ್ರಶ್ನೆ ಸದಾ ನನ್ನನ್ನು ಕಾಡುತ್ತದೆ. ದೈವಗಳ ಶಕ್ತಿಯನ್ನು ಮಾತ್ರ ಅರಿಯುವ ಶಕ್ತಿ ಇರುವ ನಮಗೆ ದೇವರ ಶಕ್ತಿಯನ್ನು ಅರಿಯುವ ಶಕ್ತಿ ಇಲ್ಲದಾಯಿತೆ? ಈ ನಾಡಿನ ಬಹುದೊಡ್ಡ ಸಮುದಾಯವನ್ನು ದೇವರೇ ಅಸ್ಪೃಶ್ಯರಂತೆ ದೂರ ಇಟ್ಟಿದ್ದಾನಲ್ಲಾ! ಹಾಗಾಗಿಯೇ ಇರಬೇಕು ವಿಭಜಿಸುವ ದೇವರಿಗಿಂತ ಸಮಾಜವನ್ನು ಬಂಧಿಸುವ ದೈವಗಳು ನಮಗೆ ಹತ್ತಿರವಾಗಿವೆ. ದೈವಗಳು ನಮ್ಮೂರ ಸತ್ಯಗಳು ಎಂಬ ನಂಬಿಕೆ ಇದೆ. ದೇವರಾಗಲಿ ದೈವವಾಗಲಿ ಮನುಷ್ಯರಿಗಾಗಿ ಮನುಷ್ಯರಿಂದ ಸೃಷ್ಟಿಯಾಗಿವೆ. ‘ದೇವರು ದೈವಗಳಿಗಾಗಿ ಮನುಷ್ಯರನ್ನು ಬಲಿತೆಗೆದುಕೊಳ್ಳುವ ಸಂಸ್ಕೃತಿ ನಮ್ಮದಲ್ಲ’. ಅದನ್ನು ಮರೆಯದಿರೋಣ.
--------