ಪೆರೋಲ್ ಅವಧಿಯಲ್ಲಿ ಪತ್ರಕರ್ತೆಗೆ ಹಲ್ಲೆ ನಡೆಸಿದ ಗುಜರಾತ್ ಗಲಭೆಯ ಅಪರಾಧಿ
ಅಹ್ಮದಾಬಾದ್: ಪತ್ರಕರ್ತೆ ರೇವತಿ ಲಾಲ್ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಸದ್ಯ ಪೆರೋಲ್ನಲ್ಲಿ ಜೈಲಿನಿಂದ ಹೊರಗೆ ಬಂದಿದ್ದ ಗುಜರಾತ್ ದಂಗೆಗಳ ದೋಷಿ ಸುರೇಶ ಚಾರಾ ಎಂಬಾತನನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.
2002ರ ನರೋಡಾ ಪಾಟಿಯಾ ನರಮೇಧ ಪ್ರಕರಣದ ದೋಷಿಗಳ ಕುರಿತು ಪುಸ್ತಕವೊಂದನ್ನು ಬರೆಯುತ್ತಿರುವ ಲಾಲ್ ಬುಧವಾರ ಇಳಿಸಂಜೆಯಲ್ಲಿ ಚಾರಾನ ಸಂದರ್ಶನಕ್ಕಾಗಿ ಆತನ ಮನೆಗೆ ತೆರಳಿದ್ದರು. ತನ್ನ ಗತಜೀವನದ ಮಾಹಿತಿಯನ್ನು ನೀಡುವಂತೆ ಆಕೆ ಮೃದುವಾಗಿಯೇ ಚಾರಾನನ್ನು ಕೋರಿಕೊಂಡಿದ್ದರು. ಈ ವೇಳೆ ಆತ ಆಕೆಗೆ ತಪರಾಕಿಗಳನ್ನು ನೀಡಿದ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ನನ್ನ ಪುಸ್ತಕಕ್ಕೆ ಸಂಬಂಧಿಸಿದಂತೆ ನಾನು ಚಾರಾನ ಕುಟುಂಬ ಸದಸ್ಯರ ಸಂಪರ್ಕವಿಟ್ಟುಕೊಂಡಿದ್ದೇನೆ. ಕಳೆದ ವರ್ಷ ಜುಲೈನಲ್ಲಿ ನನಗೆ ದೂರವಾಣಿ ಕರೆ ಮಾಡಿದ್ದ ಚಾರಾನ ಪತ್ನಿ ಪೆರೋಲ್ನಲ್ಲಿ ಹೊರಗೆ ಬಂದಿರುವ ಆತ ತನ್ನ ಮೇಲೆ ಅತ್ಯಚಾರವೆಸಗಿದ್ದಾನೆ ಎಂದು ತಿಳಿಸಿದ್ದಳು. ವಕೀಲರನ್ನು ಭೇಟಿಯಾಗಲು ಮತ್ತು ಪೊಲೀಸ್ ದೂರನ್ನು ಸಲ್ಲಿಸಲು ನಾನಾಕೆಗೆ ನೆರವಾಗಿದ್ದೆ ಎಂದು ಲಾಲ್ ತಿಳಿಸಿದರು.
2002ರ ಕೋಮುಗಲಭೆ ಸಂದರ್ಭ 97 ಜೀವಗಳು ಬಲಿಯಾಗಿದ್ದ ನರೋಡಾ ಪಾಟಿಯಾ ನರಮೇಧ ಪ್ರಕರಣದಲ್ಲಿ ಚಾರಾಗೆ 31 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ.







