110 ಕೆವಿ ವಿದ್ಯುತ್ ಮಾರ್ಗ ವಾರದಲ್ಲಿ ಕ್ರಮದ ಭರವಸೆ

ಸುಳ್ಯ, ಜ.21: ಸುಳ್ಯದ 110 ಕೆವಿ ವಿದ್ಯುತ್ ಮಾರ್ಗದ ಕುರಿತು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆಯನ್ನು ರದ್ದು ಮಾಡ ಲಾಗಿದ್ದು, ವಾರದಲ್ಲೇ ವಿದ್ಯುತ್ ಮಾರ್ಗದ ಅಡಚಣೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ತಿಳಿಸಿದ್ದಾರೆ.
ಸುಳ್ಯದಲ್ಲಿ ಗುರುವಾರ ನಡೆದ ಜನತಾ ದರ್ಶನದಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಅವರು ಮಾತನಾಡುತ್ತಿದ್ದರು. ಕೊಳ್ತಿಗೆ ಹಾಗೂ ಸುಳ್ಯದ ವಿದ್ಯುತ್ ಉಪಕೇಂದ್ರ ಮತ್ತು ಮಾರ್ಗದ ಸಮಸ್ಯೆ ಪರಿಹಾರಕ್ಕೆ ಸಭೆ ನಡೆಸಿ ಚರ್ಚಿಸುವ ಬದಲು ನೇರವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು. ಜಯನಗರದಲ್ಲಿ 38 ಎಕರೆ ಪ್ರದೇಶವನ್ನು ಮಿಲಿಟ್ರಿ ಗ್ರೌಂಡ್ ಹೆಸರಿನಲ್ಲಿ ಕಾಯ್ದಿರಿಸಿದ್ದು, ಅದನ್ನು ಸ್ಥಳೀಯರು ಅತಿಕ್ರಮಿಸಿ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಮಿಲಿಟ್ರಿ ಗ್ರೌಂಡ್ನ್ನು ರದ್ದು ಮಾಡಿ ಅತಿಕ್ರಮಿಸಿದವರಿಗೆ ಹಕ್ಕು ಪತ್ರ ನೀಡಲು ಕ್ರಮ ಕೈಗೊಳ್ಳ ಬೇಕು ಎಂದು ಶಾಸಕ ಎಸ್.ಅಂಗಾರ ಹಾಗೂ ನಗರ ಪಂಚಾಯತ್ ಅಧ್ಯಕ್ಷ ಪ್ರಕಾಶ್ ಹೆಗ್ಡೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಮಿಲಿಟ್ರಿ ಗ್ರೌಂಡ್ನ್ನು ರದ್ದು ಮಾಡುವುದು ಅಷ್ಟು ಸುಲಭವಲ್ಲ. ಈ ಕುರಿತು ಹಂತಹಂತಗಳಲ್ಲಿ ಪ್ರಯತ್ನಗಳು ನಡೆಯಬೇಕು ಎಂದರು.





