ಮುಡಿಪು :‘ಫಾರ್ಮಾ ಪಾರ್ಕ್" ನಿರ್ಮಾಣಕ್ಕೆ ರೂಪುರೇಷೆ: ಸ್ಥಳ ಪರಿಶೀಲನೆ

ಕೊಣಾಜೆ: ಇರಾ ಗ್ರಾಮದಲ್ಲಿರುವ ಕೆಐಎಡಿಬಿಯ ವಿಶಾಲವಾದ ನೂರು ಎಕರೆ ಜಾಗದಲ್ಲಿ "ಫಾರ್ಮಾ ಪಾರ್ಕ್ ನಿರ್ಮಾಣ ಯೋಜನೆಗೆ ಸಂಬಂಧಿಸಿದಂತೆ ಶನಿವಾರ ಕರ್ನಾಟಕ ಡ್ರಗ್ಸ್ ಆಂಡ್ ಫಾರ್ಮಾಸೆಟಿಕಲ್ ಮ್ಯಾನುಫ್ಯಾಕ್ಚರಿಂಗ್ ಅಸೋಸಿಯೇಶನ್ನ ಆಲೋಪತಿ ,ಆಯರ್ವೇದ ಮತ್ತು ಹೋಮೀಯೋಪಥಿಕ್ ವಿಭಾಗದ ಸಹನಿರ್ದೇಶಕ ಗೋಕುಲ್ದಾಸ್ ನೇತೃತ್ವದ ನಿಯೋಗವು ಮುಡಿಪು ಸಮೀಪದ ಇರಾ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿತು.
ಕರ್ನಾಟಕ ಡ್ರಗ್ಸ್ ಆಂಡ್ ಫಾರ್ಮಾಸೆಟಿಕಲ್ ಮ್ಯಾನುಫ್ಯಾಕ್ಚರಿಂಗ್ ಅಸೋಸಿಯೇಶನ್ನ ಸಹನಿರ್ದೇಶಕ ಗೋಕುಲ್ದಾಸ್ ಮಾತನಾಡಿ, ದ.ಕ ಜಿಲ್ಲೆಯಲ್ಲೇ ಮೊದಲ ಫಾರ್ಮಾ ಪಾರ್ಕ್ ಒಂದನ್ನು ಸ್ಪಾಪಿಸಬೇಕೆಂಬ ಆರೋಗ್ಯ ಸಚಿವ ಯು.ಟಿ ಖಾದರ್ ಅವರ ಚಿಂತನೆಯಂತೆ ಈ ಬಗ್ಗೆ ಸಭೆ ನಡೆಸಿ ನಿಗಧಿ ಪಡಿಸಿದ ಸ್ಥಳದಲ್ಲಿ ಗುಂಪಾಗಿ ಒಂದೆಡೆ ಔಷಧ ಉತ್ಪಾದನಾ ಕೇಂದ್ರವನ್ನು ಸ್ಥಾಪಿಸಿದಲ್ಲಿ ಸರಕಾರದಿಂದ ಸಿಗುವ ಯೋಜನೆಗಳನ್ನು ಸದುಪಯೋಗಪಡಿಸುವ ಅವಕಾಶ ಸಿಗುವುದು . ಆ ನಿಟ್ಟಿನಲ್ಲಿ ಕೆನರಾ ಕೈಗಾರಿಕಾ ಪ್ರದೇಶದ ನೂರು ಎಕರೆ ವಿಶಾಲ ಜಾಗವನ್ನು ಗುರುತಿಸಿದ್ದು, ಫಾರ್ಮಾ ರಚನೆಗೆ ಬೇಕಾದ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದರೆ ,ಔಷಧ ಉತ್ಪಾದನಾ ಚಟುವಟಿಕೆಗೆ ಅನುಕೂಲ ವಾತಾವರಣ ಸೃಷ್ಟಿಯಾಗಲಿದ್ದು ,ಯಾರೆಲ್ಲ ಬಂಡವಾಳ ಹೂಡುವರೆಂಬ ಪಟ್ಟಿ ತಯಾರಿಸಿ ಆರೋಗ್ಯ ಸಚಿವರು ,ಉಸ್ತುವಾರಿ ಸಚಿವರ ಸಮಕ್ಷಮದಲ್ಲಿ ಸಭೆ ನಡೆಸಿ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಿದ್ದೇವೆಂದು ಹೇಳಿದರು ಡ್ರಗ್ಸ್ ಕಂಟ್ರೋಲ್ ಆಫೀಸರ್ ರಘುರಾಮ ಭಂಡಾರಿ ಮಾತನಾಡಿ ಭಾರತ ದೇಶದಿಂದ ಸುಮಾರು 1 ಲಕ್ಷ ಕೋಟಿ ರೂಪಾಯಿಗಿಂತಲೂ ಹೆಚ್ಚಿನ ಔಷಧಗಳು ವಿದೇಶಗಳಿಗೆ ರಫ್ತಾಗುತ್ತಿದ್ದು, ಕೇಂದ್ರ ಸರಕಾರವು ಔಷಧ ಉತ್ಪಾದನಾ ವಿಭಾಗ ನಿರ್ಮಾಣಕ್ಕೆ ಹೆಚ್ಚಿನ ಒತ್ತು ಕೊಡುವ ಮಹತ್ವದ ನಿರ್ಧಾರ ತೆಗೆದುಕೊಂಡಿದೆ .ಈ ಪ್ರದೇಶದಲ್ಲಿ ಔಷಧ ಉತ್ಪಾದನೆಯ ಸುಮಾರು ಹತ್ತು ಯೂನಿಟ್ಗಳ ನಿರ್ಮಾಣದ ಗುರಿ ಹೊಂದಿದ್ದು, ವಿವಿಧ ಕಂಪೆನಿಯ ಪ್ರತಿನಿಧಿಗಳು ಪ್ರಾಥಮಿಕ ಸ್ಥಳ ಸಮೀಕ್ಷೆಗೆ ಬಂದಿದ್ದು , ಅಗತ್ಯ ಮೂಲಭೂತ ಸೌಲಭ್ಯ ಒದಗಿಸಿದಲ್ಲಿ ಒಂದು ವರುಷದಲ್ಲೇ ಯೂನಿಟ್ ಸ್ಥಾಪಿಸಲು ಅವರೆಲ್ಲರೂ ಉತ್ಸುಕ್ತರಾಗಿದ್ದಾರೆಂದು ಹೇಳಿದರು.
ಇರಾ ಗ್ರಾಮ ಪಂಚಾಯಿತಿ ಅಧ್ಯಕ್ಷ ರಝಾಕ್ ಕುಕ್ಕಾಜೆ ಮಾತನಾಡಿ, ಸಚಿವ ಖಾದರ್ ಅವರ ಮಹತ್ವಾಕಾಂಕ್ಷೆಯ ಫಾರ್ಮಾಪಾರ್ಕ್ ನಿರ್ಮಾಣಗೊಂಡಲ್ಲಿ ಇರಾ ಗ್ರಾಮದ ಆಸುಪಾಸಿನ ಯುವಕರಿಗೆ ಉದ್ಯೋಗಾವಕಾಶಗಳು ಲಭಿಸಲಿದೆ ಅಲ್ಲದೆ ಗ್ರಾಮದ ಅಭಿವೃದ್ದಿ ಸಾಧ್ಯವಾಗಲಿದೆ ಎಂದು ಹೇಳಿದರು.
ಕರ್ನಾಟಕ ಡ್ರಗ್ಸ್ ಆಂಡ್ ಫಾರ್ಮಾಸೆಟಿಕಲ್ ಮ್ಯಾನುಫ್ಯಾಕ್ಚರಿಂಗ್ ಅಸೋಸಿಯೇಶನ್ನ ಕಾರ್ಯದರ್ಶಿ ಹರೀಶ್, ಕೆನರಾ ಪ್ಲಾಸ್ಟಿಕ್ ಮ್ಯಾನುಫ್ಯಾಕ್ಚರ್ಸ್ ಆಂಡ್ ಟ್ರೇಡರ್ಸ್ ಅಸೋಸಿಯೇಶನ್ನ ಅಧ್ಯಕ್ಷ ಬಿ.ಎ ನಝೀರ್ , ಸುಳ್ಯ ಕೆವಿಜೆ ಆಯುರ್ವೇದ ಫಾರ್ಮಸಿಯ ಆಡಳಿತಾಧಿಕಾರಿ ಡಾ.ಲೀಲಾಧರ್ , ಕೆನರಾ ಚೇಂಬರ್ಸ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಸ್ ಅಧ್ಯಕ್ಷ ರಾಮ್ ಮೋಹನ್ ಪೈ , ಸದಸ್ಯರಾದ ಸುರೇಶ್ ನಾಯಕ್, ಮುಡಿಪು ಬ್ಲಾಕ್ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಅಬ್ದುಲ್ ಜಲೀಲ್ ಮೋಂಟುಗೋಳಿ, ಮಾಜಿ ತಾಲೂಕು ಪಂಚಾಯತ್ ಸದಸ್ಯ ಉಮರ್ ಪಜೀರ್ , ಕಾಂಗ್ರೆಸ್ ಮುಖಂಡ ನಾಸಿರ್ ನಡುಪದವು ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.







