ಕರಾವಳಿ ಉತ್ಸವ: ಫಲಪುಷ್ಪ ಪ್ರದರ್ಶನ ಉದ್ಘಾಟನೆ

ಮಂಗಳೂರು, ಜ.23: ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ನಡೆಯುವ ಕರಾವಳಿ ಉತ್ಸವದ ಅಂಗವಾಗಿ ಕದ್ರಿಪಾರ್ಕ್ನಲ್ಲಿ ಆಯೋಜಿಸಲಾದ ಫಲಪುಷ್ಪ ಪ್ರದರ್ಶನವನ್ನು ಇಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿ ಸಿದರು.
ಫಲಪುಷ್ಪ ಪ್ರದರ್ಶನದ ಮಳಿಗೆಯನ್ನು ಸಾಹಿತಿ ಏರ್ಯ ಲಕ್ಷ್ಮೀನಾರಾಯಣ್ ಆಳ್ವ, ಹೂವಿನಿಂದ ಅಲಂಕೃತವಾದ ಯಕ್ಷಗಾನದ ಪ್ರದರ್ಶನದ ಮಾದರಿಯನ್ನು ಶಾಸಕ ಜೆ. ಆರ್.ಲೋಬೋ ಉದ್ಘಾಟಿಸಿದರು.
ಅಪರ ಜಿಲ್ಲಾಧಿಕಾರಿ ಕುಮಾರ್, ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ಚಂದ್ರ ಶೆಟ್ಟಿ, ಐವನ್ ಡಿಸೋಜ ಮನಪಾ ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ಮುಡಾ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್, ರಿಜಿಸ್ಟ್ರಾರ್ ಉಮ್ಮರಬ್ಬ, ಮನಪಾ ಸಚೇತಕ ಶಶಿಧರ್ ಹೆಗ್ಡೆ ಮುಂತಾದವರು ಉಪಸ್ಥಿತರಿದ್ದರು.
22 ಸಾವಿರ ಹೂವುಗಳಿಂದ ನಿರ್ಮಾಣಗೊಂಡ ಯಕ್ಷಗಾನ ಮಾದರಿ
ಕದ್ರಿ ಪಾರ್ಕ್ನಲ್ಲಿ ಆಯೋಜಿಸಲಾಗಿದ್ದ ಫಲಪುಷ್ಪ ಪ್ರದರ್ಶನದಲ್ಲಿ ವಿವಿಧ ಮಳಿಗೆಗಳ ನಡುವೆ ಯಕ್ಷಗಾನ ಪ್ರದರ್ಶನದ ಮಾದರಿಯೊಂದು ಗಮನಸೆಳೆಯುತ್ತಿದೆ. ಮೈಸೂರು ಉಮಾಶಂಕರ್ ಮತ್ತು ಬಳಗದವರು ನಿರ್ಮಿಸಿರುವ ಈ ಮಾದರಿ ಎಲ್ಲರ ಗಮನಸೆಳೆಯುತ್ತಿದೆ. ಯಕ್ಷಗಾನ ಪ್ರದರ್ಶನದ ಮಾದರಿಯಲ್ಲಿ 11 ಅಡಿ ಎತ್ತರದ ಅರ್ಜುನ ಪಾತ್ರಧಾರಿ ಮತ್ತು 10.5 ಅಡಿ ಎತ್ತರದ ಕೃಷ್ಣ ಪಾತ್ರಧಾರಿಯ ಮಾದರಿ, ಭಾಗವತ ಪಾತ್ರಧಾರಿ, ಚೆಂಡೆ ಬಾರಿಸುವ ಪಾತ್ರಧಾರಿ ಮತ್ತು ಮೃದಂಗ ಬಾರಿಸುವ ಪಾತ್ರಧಾರಿಯ ಮಾದರಿಯಿದೆ. ಇದರಲ್ಲಿ ಕೃಷ್ಣ ಮತ್ತು ಅರ್ಜುನ ಪಾತ್ರಧಾರಿಯನ್ನು 22 ಸಾವಿರ ಹೂವಿನಿಂದ ನಿರ್ಮಿಸಲಾಗಿದೆ. 12 ಸಾವಿರ ಗುಲಾಬಿ ಹೂವು, 2 ಸಾವಿರ ಸೇವಂತಿಗೆ, 40 ಗೊಂಚಲು ಆರ್ಕಿಡ್, 50 ದಸೀನಾ ಎಲೆಯನ್ನು ಬಳಸಲಾಗಿದೆ. ತೆಂಕುತಿಟ್ಟು ಯಕ್ಷಗಾನದ ಈ ಪ್ರದರ್ಶನ ಎಲ್ಲರ ಗಮನಸೆಳೆಯುತ್ತಿದೆ.
ಅದೇ ರೀತಿಯಲ್ಲಿ 20 ಸಾವಿರ ಗುಲಾಬಿಯನ್ನು ಉಪಯೋಗಿಸಿ ಗಿಟಾರ್, ತಬಲ, ವೀಣೆ, 2 ಸಾವಿರ ಗುಲಾಬಿ ಮತ್ತು 30 ಗೊಂಚಲು ಆಸ್ಪರೇಗನ್ ಬಳಸಿ ಡಾಲ್ಫಿನ್, 3 ಸಾವಿರ ಗುಲಾಬಿ ಮತ್ತು 50 ಗೊಂಚಲು ಆಸ್ಪರೇಗನ್ ಬಳಸಿ ಪೆಂಗ್ವಿನ್ ಮಾದರಿ, 5 ಸಾವಿರ ಗುಲಾಬಿಯನ್ನು ಬಳಸಿ ನಿರ್ಮಿಸಿರುವ ಐಸ್ಕ್ರೀಮ್ ಮಾದರಿ ಆಕರ್ಷಕವಾಗಿದೆ.







