5 ಪ್ರಥಮಗಳ ಜೊತೆಗೆ ಆಕರ್ಷಕ ಪರೇಡ್

ಹೊಸದಿಲ್ಲಿ, ಜ.26: ಹೊಸದಿಲ್ಲಿಯ ರಾಜಪಥದಲ್ಲಿ ಮಂಗಳವಾರ ನಡೆದ 67ನೆ ಗಣರಾಜ್ಯೋತ್ಸವ ಪರೇಡ್ ಭಾರತದ ಸೇನಾ ಶಕ್ತಿ ಹಾಗೂ ಶ್ರೀಮಂತ ಸಾಂಸ್ಕೃತಿಕ ಬಹುತ್ವಗಳ ಆಕರ್ಷಕ ಪ್ರದರ್ಶನವಾಗಿತ್ತು. ಫ್ರಾನ್ಸ್ನ ಅಧ್ಯಕ್ಷ ಫ್ರಾಂಕೊಯಿಸ್ ಹೊಲ್ಲಾಂಡೆ ಮುಖ್ಯ ಅತಿಥಿಯಾಗಿದ್ದ ಈ ಕಾರ್ಯಕ್ರಮ ಕೆಲವು ಪ್ರಥಮಗಳಿಗೂ ಸಾಕ್ಷಿಯಾಯಿತು.
1. ಫ್ರೆಂಚ್ ಸೇನಾ ದಳ ಪರೇಡ್ನಲ್ಲಿ ಭಾಗವಹಿಸಿದ ಪ್ರಥಮ ವಿದೇಶಿ ಸೈನಿಕರ ಗುಂಪು ಎನಿಸಿತು. ಫ್ರಾನ್ಸ್ನ ಅತ್ಯಂತ ಹಳೆಯ ಸಕ್ರಿಯ ರೆಜಿಮೆಂಟ್ಗಳಲ್ಲಿ ಒಂದೆನಿಸಿರುವ 35ನೆ ಪದಾತಿ ದಳ, ತನ್ನ ಭಾರತೀಯ ಸೋದ್ಯೋಗಿಗಳೊಂದಿಗೆ ಪಥ ಸಂಚಲನದಲ್ಲಿ ಹೆಜ್ಜೆ ಹಾಕಿತು. 2009ರಲ್ಲಿ ಬಾಸ್ಟಿಲ್ ಡೇಯಂದು ಭಾರತೀಯ ಪಡೆಗಳು ಪ್ಯಾರಿಸ್ನ ಚಾಂಪ್ ಎಲಿಸೀಸ್ನಲ್ಲಿ ಹೆಜ್ಜೆ ಹಾಕಿದ್ದವು.
2. ಸೇನೆಯ ಶ್ವಾನದಳ 26 ವರ್ಷಗಳ ಬಳಿಕ ಮರಳಿದೆ. ಭಾರತೀಯ ಭೂಸೇನೆಯ, ಪರಾಕು ಬಯಸದ ಹೀರೊಗಳು 26 ವರ್ಷಗಳ ಬಳಿಕ ಪೆರೇಡ್ಗೆ ಬಂದಿದ್ದವು. ಭೂ ಸೇನೆಯ ರಿವೌಂಟ್ ವೆಟರ್ನರಿ ಸ್ಕ್ವಾಡ್ನಿಂದ ಆಯ್ದ, ಮರೂನ್ ಬಣ್ಣದ ಬಂಗಾರದ ಪಟ್ಟಿಗಳಿದ್ದ ಕೋಟುಗಳನ್ನು ತೊಡಿಸಲಾಗಿದ್ದ ಶ್ವಾನದಳವೊಂದು ತನ್ನ ನಿಯಂತ್ರಕರೊಂದಿಗೆ ಪಥ ಸಂಚಲನದಲ್ಲಿ ಹೆಜ್ಜೆ ಹಾಕಿತು. ಲ್ಯಾಬ್ರಡೋರ್ ಹಾಗೂ ಜರ್ಮನ್ ಶೆಫರ್ಡ್ ತಳಿಗಳ ನಾಯಿಗಳನ್ನೊಳಗೊಂಡಿರುವ ಈ ಪಡೆ ಗಲಭೆಗ್ರಸ್ತ ಕಾಶ್ಮೀರದಲ್ಲಿ ಸ್ಫೋಟಕಗಳು, ನೆಲಬಾಂಬ್ಗಳನ್ನು ಪತ್ತೆ ಹಚ್ಚುತ್ತಿದ್ದು, ಹಿಮಪಾತದ ಮುನ್ಸೂಚನೆ ನೀಡುತ್ತದೆ. 1,200 ಸೇನಾ ನಾಯಿಗಳಲ್ಲಿ ಕೇವಲ 36ನ್ನು ಆರಿಸಿ, ಅನೇಕ ವಾರಗಳ ಕಾಲ ಪಥ ಸಂಚಲನದ ತರಬೇತಿ ನೀಡಲಾಗಿತ್ತು.
3. ಮಾಜಿ ಯೋಧರ ಪರೇಡ್ಗೆ ಬದಲಾಗಿ ಸ್ತಬ್ಧ ಚಿತ್ರ.
ಇದು ಪರಂಪರೆಯನ್ನು ಮುರಿದ ಉದಾಹರಣೆಯಾಗಿದೆ. ಸಾಮಾನ್ಯವಾಗಿ ಪರೇಡ್ನಲ್ಲಿ ಹೆಜ್ಜೆಹಾಕುತ್ತಿದ್ದ ಮಾಜಿ ಯೋಧರಿಗೆ ಬದಲಾಗಿ, ಪರೇಡ್ನ ಮೊದಲ ಭಾಗದಲ್ಲಿ ಅವರಿಗೆ ಸಮರ್ಪಿಸಲಾದ ಸ್ತಬ್ಧ ಚಿತ್ರವಿತ್ತು.
4. ವಿವಿಐಪಿಗಳಿಗೆ ಯಂತ್ರಚಾಲಿತ ಜಾರುಗಾಜಿನ ಮೇಲ್ಫಾವಣಿ. ಕಳೆದ ವರ್ಷ ಗಣರಾಜ್ಯೋತ್ಸವ ಪರೇಡ್ನ ವೇಳೆ ಮಳೆ ಬಂದಿತ್ತು. ಅದರಿಂದಾಗಿ ಅಂದು ಮುಖ್ಯ ಅತಿಥಿಯಾಗಿದ್ದ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ದೊಡ್ಡ ಕೊಡೆಯೊಂದರ ಕೆಳಗೆ ಆಶ್ರಯ ಪಡೆಯಬೇಕಾಯಿತು. ಇದು ಸಂಘಟಕರಿಗೆ ಮುಜುಗರವನ್ನುಂಟು ಮಾಡಿತ್ತು. ಅದಕ್ಕಾಗಿ, ಈ ಬಾರಿ ವಿವಿಐಪಿಗಳಿದ್ದ ಆವರಣಕ್ಕೆ ಮಳೆಬಂದರೆ, ಯಂತ್ರಚಾಲಿತವಾಗಿ ಗಾಜಿನ ಛಾವಣಿ ಆವರಿಸುವಂತೆ ವ್ಯವಸ್ಥೆ ಮಾಡಲಾಗಿತ್ತು. ವಾಯುದಳದ ಪ್ರದರ್ಶನದ ವೇಳೆ ಸ್ಪಷ್ಟವಾಗಿ ಕಾಣುವಂತೆ ಈ ಛಾವಣಿಯನ್ನು ಮಡಚಲಾಗಿತ್ತು.
5. ಶೌರ್ಯ ಪ್ರಶಸ್ತಿ ಪುರಸ್ಕೃತ ಮಕ್ಕಳು ಪಥಸಂಚಲನದ ಕೊನೆಯಲ್ಲಿ ಹೆಜ್ಜೆ ಹಾಕಿದರು. ಪರಂಪರೆ ಮುರಿದ ಇನ್ನೊಂದು ಘಟನೆಯಿದು. ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಪುರಸ್ಕೃತ ಮಕ್ಕಳು, ಕೇವಲ ಪರೇಡ್ನ ಕೊನೆಗೆ ಸೇರಿಕೊಂಡರು. ಈ ಹಿಂದೆ ಗಣರಾಜ್ಯೋತ್ಸವ ಪರೇಡ್ಗಳಲ್ಲಿ ಮಕ್ಕಳು ಆನೆಗಳ ಮೇಲೆ ಕುಳಿತು ಸವಾರಿ ಮಾಡುತ್ತಿದ್ದರು. ಇದು ಪರೇಡ್ನ ಒಂದು ಮುಖ್ಯ ಆಕರ್ಷಣೆಯಾಗಿರುತ್ತಿತ್ತು.
23 ಸ್ತಬ್ಧಚಿತ್ರಗಳು ಭಾಗಿ
ಮಂಗಳವಾರ ಇಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್ನಲ್ಲಿ ಗಿರ್ ಸಿಂಹಧಾಮ,ಮಧ್ಯಪ್ರದೇಶದ ವೈಟ್ ಟೈಗರ್ ಸಫಾರಿ,ಬಿ.ಆರ್.ಅಂಬೇಡ್ಕರ್ ಅವರ ಕಾರ್ಯಗಳು ಹಾಗೂ ಸ್ವಚ್ಛ ಭಾರತ ಮತ್ತು ಡಿಜಿಟಲ್ ಇಂಡಿಯಾದಂತಹ ಉಪಕ್ರಮಗಳನ್ನು ಆಧರಿಸಿದ ಸ್ತಬ್ಧಚಿತ್ರಗಳು ಸೇರಿದಂತೆ ಒಟ್ಟು 23 ಸ್ತಬ್ಧಚಿತ್ರಗಳು ಭಾಗವಹಿಸಿದ್ದು, ಈ ಪೈಕಿ 17 ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೇರಿದ್ದವು. ಕೇಂದ್ರದ ಆರು ವಿವಿಧ ಸಚಿವಾಲಯಗಳ ಸ್ತಬ್ಧಚಿತ್ರಗಳೂ ಭಾಗಿಯಾಗಿದ್ದವು.
ಕರ್ನಾಟಕ, ಬಿಹಾರ, ಅಸ್ಸಾಂ, ಗೋವಾ,ಸಿಕ್ಕಿಂ, ರಾಜಸ್ಥಾನ, ಚಂಡಿಗಡ, ತ್ರಿಪುರಾ, ಒಡಿಶಾ, ಪ.ಬಂಗಾಳ, ಮಧ್ಯಪ್ರದೇಶ, ಛತ್ತೀಸ್ಗಡ,ತಮಿಳುನಾಡು,ಉತ್ತರಾಖಂಡ್, ಜಮ್ಮು-ಕಾಶ್ಮೀರ, ಉತ್ತರ ಪ್ರದೇಶ ಮತ್ತು ಗುಜರಾತ್ಗಳ ಸ್ತಬ್ಧಚಿತ್ರಗಳು ತಮ್ಮ ಹಾಜರಾತಿಯನ್ನು ದಾಖಲಿಸಿವೆ.
ರಾಷ್ಟ್ರ ರಾಜಧಾನಿ ದಿಲ್ಲಿ ಸತತ ಮೂರನೆ ವರ್ಷವೂ ಸ್ತಬ್ಧಚಿತ್ರವನ್ನು ಕಳುಹಿಸಿರಲಿಲ್ಲ.







