ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಸಂಬಳ ವಿಳಂಬ: ಕೆಲಸ ಸ್ಥಗಿತಗೊಳಿಸಿ ಪ್ರತಿಭಟಿಸಿದ ಕಾರ್ಮಿಕರು
ಪುತ್ತೂರು, ಜ.28: ಪುತ್ತೂರಿನ ಸಾರ್ವಜನಿಕ ಸರ ಕಾರಿ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡು ತ್ತಿದ್ದ 9 ಮಂದಿ ಕಾರ್ಮಿಕರು ಸಂಬಳ ವಿತರಣೆಯಲ್ಲಿ ಆಗುತ್ತಿರುವ ವಿಳಂಬ ವಿರೋಧಿಸಿ ಗುರುವಾರ ದಿಢೀರ್ ಕರ್ತವ್ಯ ಸ್ಥಗಿತಗೊಳಿಸಿ ಮನೆಗೆ ತೆರಳಿದ್ದು, ಸಂಬಳ ಸಿಗುವ ತನಕ ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಇದು ಆಸ್ಪತ್ರೆಯ ಶುಚಿತ್ವಕ್ಕೆ ಹಾಗೂ ರೋಗಿಗಳ ಪಾಲಿಗೆ ಬಹುದೊಡ್ಡ ಸಮಸ್ಯೆಯಾಗಿದೆ. ಪುತ್ತೂರಿನ ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿ ಒಟ್ಟು 12 ಮಂದಿ ಕಾರ್ಮಿಕರು ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಗುತ್ತಿಗೆದಾರರು ಸಮಯಕ್ಕೆ ಸರಿಯಾಗಿ ತಿಂಗಳ ಸಂಬಳ ನೀಡದೆ ಸತಾಯಿಸುತ್ತಿದ್ದಾರೆ ಎನ್ನುವುದು ಇವರ ಆರೋಪವಾಗಿದೆ.
12 ಮಂದಿ ಕಾರ್ಮಿಕರ ಪೈಕಿ ಅಡುಗೆ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗಣೇಶ್ ಅವರಿಗೆ ಕಳೆದ ಎಪ್ರಿಲ್ ತಿಂಗಳಿನಿಂದ ಸಂಬಳ ಸಿಕ್ಕಿಲ್ಲ. ಮತ್ತೊಬ್ಬ ಗಣೇಶ್ ಅವರಿಗೆ ಕಳೆದ ಮೂರು ತಿಂಗಳಿನಿಂದ ಸಂಬಳ ಬಂದಿಲ್ಲ. ಉಳಿದ ಮಂದಿಗೂ ಎರಡು-ಮೂರು ತಿಂಗಳ ಸಂಬಳ ಬರಲು ಬಾಕಿಯಿದ್ದು, ಸಂಬಳವನ್ನು ಸಮಯಕ್ಕೆ ಸರಿಯಾಗಿ ನೀಡದೆ ಸತಾಯಿಸುತ್ತಿರುವ ಗುತ್ತಿಗೆದಾರರ ಧೋರಣೆಯನ್ನು ವಿರೋಧಿಸಿ 9 ಮಂದಿ ಕಾರ್ಮಿಕರು ಗುರುವಾರ ಕರ್ತವ್ಯ ಸ್ಥಗಿತಗೊಳಿಸಿ ಮನೆಗೆ ತೆರಳುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಪೈಕಿ ಗಣೇಶ್, ಹೊನ್ನಮ್ಮ, ಸುಶೀಲಾ ಎ., ಬೇಬಿ, ತಿಮ್ಮಕ್ಕ, ಗಣೇಶ್, ಸಂಜೀವ, ಪುರಂದರ ಮತ್ತು ಸುಶೀಲಾ ಈ ನಿರ್ಧಾರ ಕೈಗೊಂಡಿದ್ದಾರೆ. ‘‘ಆಸ್ಪತ್ರೆಯ ಉದ್ಯೋಗವನ್ನೇ ನಂಬಿ ಬದುಕುತ್ತಿರುವ ನಮಗೆ ತಿಂಗಳ ಸಂಬಳ ಸರಿಯಾದ ವೇಳೆಗೆ ಸಿಗದ ಕಾರಣ ಸಮಸ್ಯೆಯಾಗುತ್ತಿದೆ. ಜೀವನ ನಿರ್ವಹಣೆ ಕಷ್ಟವಾಗುತ್ತಿದೆ ಎಂದು ಆರೋಪಿಸಿರುವ ಕಾರ್ಮಿಕರು ತಮಗೆ ನೀಡಲು ಬಾಕಿಯಿರುವ ಸಂಬಳವನ್ನು ಗುರು ವಾರ ಬೆಳಗ್ಗೆ 10 ಗಂಟೆಯ ಮೊದಲು ನೀಡಬೇಕೆಂದು ಮೇಲ್ವಿಚಾರಕ ಯೋಗಾನಂದ ಅವರ ಮೂಲಕ ಗುತ್ತಿಗೆದಾರರಿಗೆ ಗಡುವು ನೀಡಿದ್ದರು. ಗುರುವಾರ ಬೆಳಗ್ಗೆ 10:30ರ ತನಕ ಸಂಬಳ ನೀಡುವ ವ್ಯವಸ್ಥೆ ಆಗದೇ ಇರುವುದರಿಂದ ಬೇಸತ್ತ ಕಾರ್ಮಿಕರು ಪ್ರತಿಭಟನೆ ವ್ಯಕ್ತಪಡಿಸಿ ಮನೆಗೆ ತೆರಳಿದ್ದಾರೆ.
ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ 12 ಕಾರ್ಮಿಕರ ಪೈಕಿ ಇಬ್ಬರಿಗೆ ಮಾತ್ರ ಸಂಬಳವಾಗಿಲ್ಲ. ಉಳಿದವರಿಗೆ ಪಾವತಿಯಾಗಿದೆ. ಸಿಕ್ಕದ ಇಬ್ಬರ ಬೆಂಬಲಾರ್ಥವಾಗಿ ಉಳಿದವರು ಮುಷ್ಕರ ನಡೆಸಿದ್ದಾರೆ. ಬೆಂಗಳೂರಿನ ಗುತ್ತಿಗೆದಾರರು ಇದನ್ನು ವಹಿಸಿಕೊಂಡಿದ್ದು, ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿ ತಕ್ಷಣ ಸಂಬಳ ಪಾವತಿಸುವಂತೆ ಸೂಚನೆ ನೀಡಿದ್ದೇನೆ. ಅವರು ತಾಂತ್ರಿಕ ಕಾರಣ ಮುಂದಿಟ್ಟಿದ್ದಾರೆ. ಇವತ್ತು ಹಣ ಖಾತೆಗೆ ಪಾವತಿಸದಿದ್ದರೆ ಶುಕ್ರವಾರ ಖುದ್ದಾಗಿ ಬಂದು ಹಣ ನೀಡುವಂತೆ ತಾಕೀತು ಮಾಡಿದ್ದೇನೆ. ಈ ಗುತ್ತಿಗೆದಾರರ ಅವಧಿ ಫೆ.1ಕ್ಕೆ ಮುಗಿಯಲಿದೆ.
-ಡಾ.ಪ್ರದೀಪ್, ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ







