ಪ್ರಾಣಿ-ಮಾನವರ ನಡುವಿನ ಸಂಘರ್ಷ; ಸರಕಾರಕ್ಕೆ ಹೈಕೋರ್ಟ್ ನೋಟಿಸ್
ಬೆಂಗಳೂರು, ಜ.29: ಕಾಡು ಪ್ರಾಣಿಗಳು ನಗರ ಮತ್ತು ಗ್ರಾಮೀಣ ಪ್ರದೇಶಗಳನ್ನು ಪ್ರವೇಶಿಸಿ ಜನರನ್ನು ಗಾಯಗೊಳಿಸಿ, ಕೊಲ್ಲುತ್ತಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲವೆಂದು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಈ ಸಂಬಂಧ ಡಾ.ಜಿ.ಎಸ್.ಸ್ವಪ್ನಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯನ್ಯಾಯ ಮೂರ್ತಿ ಎಸ್.ಕೆ.ಮುಖರ್ಜಿ ಮತ್ತು ನ್ಯಾಯಮೂರ್ತಿ ರವಿ ಮಳೀಮಠ ಅವರಿದ್ದ ವಿಭಾಗೀಯ ಪೀಠ, ಈ ಆದೇಶ ನೀಡಿದೆ.
ಅರ್ಜಿದಾರರ ಪರವಾಗಿ ವಾದ ಮಂಡಿಸಿದ ವಕೀಲರು ಕಾಡು ಪ್ರಾಣಿಗಳು ಹಾಗೂ ಮಾನವನ ನಡು ವಿನ ಸಂಘರ್ಷದಲ್ಲಿ ರಾಜ್ಯದಲ್ಲಿ 300 ಜನರು ಮೃತರಾಗಿದ್ದು, 700 ಜನರು ಗಾಯಗೊಂಡಿದ್ದಾರೆ. ಕೊಳ್ಳೇಗಾಲ ಅರಣ್ಯ ವಿಭಾಗದಲ್ಲಿ 2004-05 ಮತ್ತು 2013-14ರಲ್ಲಿ 27 ಜನರು ಸಾವನ್ನಪ್ಪಿದ್ದು, 40 ಜನರು ಗಾಯಗೊಂಡಿದ್ದಾರೆ. ಆದರೂ ಅರಣ್ಯ ಇಲಾಖೆಯು ಸರಿಯಾದ ಕ್ರಮಗಳನ್ನು ಕೈಗೊಂಡಿಲ್ಲವೆಂಬ ವಾದವನ್ನು ಮಂಡಿಸಿದರು. ನ್ಯಾಯಾಲಯ ವಾದ ಪ್ರತಿವಾದವನ್ನು ಆಲಿಸಿ ಸರಕಾರಕ್ಕೆ ನೋಟಿಸ್ ಜಾರಿ ಮಾಡಿತು.
Next Story





