ಬೆಂಗಳೂರು;ರಾಜ್ಯದಲ್ಲಿ ನವೋದ್ಯಮ [ ಸ್ಟಾರ್ಟ್ಅಪ್ ] ನೀತಿ ಜಾರಿಗೆ
ಬೆಂಗಳೂರು.ಫೆ.3:ರಾಜ್ಯದಲ್ಲಿ ನವೋದ್ಯಮ [ ಸ್ಟಾರ್ಟ್ಅಪ್ ] ನೀತಿ ಜಾರಿಗೆ ತರಲಾಗಿದ್ದು, 2015ರ ಜಾಗತಿಕ 20 ಪರಿಸರ ಸ್ನೇಹಿ ನವೋದ್ಯಮರ್ಯಾಂಕಿಂಗ್ ವರದಿಯಲ್ಲಿ ಇಡೀ ದೇಶದಲ್ಲಿ ಕರ್ನಾಟಕ ಮಾತ್ರ ಸ್ಥಾನ ಪಡೆದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾದ ಇನ್ವೆಸ್ಟ್ ಕರ್ನಾಟಕ–2016 ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದ ನವೋದ್ಯಮ ನೀತಿ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಉತ್ಪಾದನಾ ವಲಯವನ್ನು ಒಳಗೊಂಡಿದೆ.ಮೊತ್ತ ಮೊದಲ ನವೋದ್ಯಮವನ್ನು ನ್ಯಾಸ್ಕಾಂನೊಂದಿಗೆ ಸೇರಿ ಆರಂಭಿಸಲಾಗಿದ್ದು, ಇದರ ಪರಿಣಾಮ 64 ಸ್ಟಾರ್ಟ್ಅಪ್ ಉದ್ಯಮಗಳ ಉದಯಕ್ಕೆ ನಾಂದಿಯಾಯಿತು ಎಂದರು.
ರಾಜ್ಯದಲ್ಲಿ ಉದ್ದಿಮೆಗಳ ಸ್ಥಾಪನೆಯನ್ನುಉತ್ತೇಜಿಸುವ ಸಂಬಂಧದ ಪ್ರಕ್ರಿಯೆಗಳನ್ನು ಸರಳಗೊಳಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದನ್ನು ಮತ್ತಷ್ಟು ಪರಿಣಾಮಕಾರಿಗೊಳಿಸಲು ಕೈಗಾರಿಕೆ - ಸರ್ಕಾರಿ ಸಹಭಾಗಿತ್ವದ ಘಟಕ ಸ್ಥಾಪಿಸಲು ಪರಿಶೋಧಿಸಲಾಗುತ್ತಿದೆ ಎಂದು ಹೇಳಿದರು. ಸರ್ಕಾರಕ್ಕೆ ಸ್ಪಷ್ಟ ನಿಲುವಿದ್ದು, ಉತ್ತಮ ಸಮರ್ಥನೀಯ ಮಾರ್ಗನಕ್ಷೆ ಹೊಂದಿದೆ.ದೇಶದ ಅಭಿವೃದ್ದಿಗೆ ಕರ್ನಾಟಕ ಗಣನೀಯ ಕೊಡುಗೆ ನೀಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ20 ಶತಕೋಟಿ ಡಾಲರ್ ಮೊತ್ತದ 500 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.ಕರ್ನಾಟಕ ಉನ್ನತ ಬೆಳವಣಿಗೆಯತ್ತ ಹೆಜ್ಜೆಯಿಟ್ಟಿದೆ.ಕರ್ನಾಟಕವನ್ನು ಸಮೃದ್ಧ ರಾಜ್ಯವನ್ನಾಗಿ ಮಾಡುವ ಗುರಿ ಹೊಂದಲಾಗಿದೆ ಎಂದರು
.
ರಾಜ್ಯದಲ್ಲಿ ಯೂರಿಯಾ ಘಟಕ ಸ್ಥಾಪಿಸಲು ಅಗತ್ಯ ಭೂಮಿ ಮಂಜೂರಾತಿ ಮಾಡಬೇಕು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತ್ಕುಮಾರ್ ಅವರ ಪ್ರಸ್ತಾಪಕ್ಕೆ ಪ್ರತಿಕ್ರಯಿಸಿದ ಸಿದ್ದರಾಮಯ್ಯ, ಉತ್ತರ ಕರ್ನಾಟಕ ಭಾಗದ ಬಿಜಾಪುರ, ಬಾಗಲಕೋಟೆ, ಧಾರವಾಡ, ರಾಯಚೂರು ಜಿಲ್ಲೆಗಳ ಪೈಕಿ ಒಂದರಲ್ಲಿ 500 ಎಕರೆ ಭೂಮಿ ನೀಡಲು ಸರ್ಕಾರ ಸಿದ್ಧವಾಗಿದೆ. ಮೈಸೂರು ಇಲ್ಲವೆ ತಾವು ಕೇಳುವ ಪ್ರದೇಶಗಳಲ್ಲಿ ಔಷಧ ಪಾರ್ಕ್ ಸ್ಥಾಪಿಸಲು 100 ಎಕರೆ ಭೂಮಿ ಮಂಜೂರು ಮಾಡಲಾಗುವುದು.ಅಷ್ಟೇಕೆ ರಾಜ್ಯದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಮುಂದಾಗುವ ಕೈಗಾರಿಕೆಗಳಿಗೆ ಎಷ್ಟೇ ಪ್ರಮಾಣದ ಭೂಮಿ ಮಂಜೂರಾತಿ ಮಾಡಲು ಸಿದ್ದವಾಗಿರುವುದಾಗಿ ಪ್ರಕಟಿಸಿದರು.
ರಾಜ್ಯದಲ್ಲಿ ಕೈಗಾರಿಕೆಗಳ ಪ್ರಗತಿಯನ್ನುಉತ್ತೇಜಿಸಲು ಕಳೆದ ಎರಡೂವರೆ ವರ್ಷಗಳ ಅವಧಿಯಲ್ಲಿ ಹಲವಾರು ನೀತಿಗಳನ್ನು ಜಾರಿಗೆತರಲಾಗಿದೆ. ಕರ್ನಾಟಕ ಸಮೃದ್ಧತೆಯ ನೆಲೆಯಾಗಿದೆ. ಹಲವಾರು ಭಾರತೀಯ ಕಂಪೆನಿಗಳು ರಾಜ್ಯದಲ್ಲಿವೆ. ಇನ್ಪೋಸಿಸ್, ವಿಪ್ರೋ, ಬಯೋಕಾನ್, ಟಾಟಾ, ಮಹೀಂದ್ರ, ರಿಲಯನ್ಸ್,ಏಷ್ಯನ್ ಪೇಂಟ್ಸ್, ಟಿ.ವಿ.ಎಸ್. ಜೆ.ಎಸ್.ಡಬ್ಲ್ಯೊ, ಇನ್ನೂ ಹಲವಾರು ಕಂಪೆನಿಗಳಿವೆ. ಇದಲ್ಲದೇ ಸಣ್ಣ ಮತ್ತು ಮಧ್ಯಮ ಕಂಪೆನಿಗಳು, ನವೋದ್ಯಮಗಳಿಗೂ ಕೂಡ ರಾಜ್ಯ ಪ್ರಶಸ್ತ ಸ್ಥಳವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಬೆಂಗಳೂರು ನಗರ ಹಲವಾರು ಆರ್ಥಿಕ ಚಟುವಟಿಕೆಗಳ ಕೇಂದ್ರವಾಗಿದೆ.ರಾಜ್ಯದಲ್ಲಿ ಜಾಗತಿಕ ಮನ್ನಣೆ ಪಡೆದ ನಾವೀನ್ಯ ಕೇಂದ್ರಗಳು, 400ಕ್ಕೂ ಹೆಚ್ಚು ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳಿವೆ. ಜಗತ್ತಿನ ಬೇರೆ ಯಾವುದೇ ಭಾಗದಲ್ಲಿ ಇಂತಹ ಪರಿಸ್ಥಿತಿ ಇಲ್ಲ. ವಿಶ್ವ ಆರ್ಥಿಕ ಒಕ್ಕೂಟ ಗುರುತಿಸಿರುವಂತೆ ವಿಶ್ವದ ನಾಲ್ಕು ನಾವೀನ್ಯತೆಯ ಕೇಂದ್ರಗಳಲ್ಲಿ ಕರ್ನಾಟಕ ಸಹ ಒಂದಾಗಿದೆ. ಸಿಲಿಕಾನ್ ವ್ಯಾಲಿ, ಬೋಸ್ಟನ್ ಮತ್ತು ಲಂಡನ್ ನಂತರ ಬೆಂಗಳೂರು ಜಾಗತಿಕ ತಂತ್ರಜ್ಞಾನ ಕೇಂದ್ರವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಕರ್ನಾಟಕ 120 ಶತಕೋಟಿ ಡಾಲರ್ ಮೌಲ್ಯದ ಆರ್ಥಿಕತೆ ಹೊಂದಿರುವ ದೇಶವಾಗಿದೆ. ಬರುವ 2035ರ ವೇಳೆಗೆ 700 ಶತಕೋಟಿ ಡಾಲರ್ ಆರ್ಥಿಕ ಸಾಮರ್ಥ್ಯ ಹೊಂದಿರುವ ದೇಶವಾಗಿ ರೂಪುಗೊಳ್ಳಲಿದೆ.ಭಾರತ ಶೇ 9 ರಷ್ಟುಆರ್ಥಿಕ ಬೆಳವಣಿಗೆ ಸಾಧಿಸುವ ನಿರೀಕ್ಷೆ ಹೊಂದಿದ್ದರೆ ಕರ್ನಾಟಕ ಶೆ 10ರ ಬೆಳವಣಿಗೆ ಸಾಧಿಸುವ ನಿಟ್ಟಿನಲ್ಲಿ ಸಾಗಲಿದೆಎಂದು ಸಿದ್ದರಾಮಯ್ಯ ಹೇಳಿದರು.







