ಹೊಸದಿಲ್ಲಿ: ರೈಲ್ವೆ ಯೋಜನೆಗಳಿಗಾಗಿ ರಾಜ್ಯಗಳೊಂದಿಗಿನ ಜಂಟಿ ಉದ್ಯಮಗಳಿಗೆ ಸಂಪುಟದ ಒಪ್ಪಿಗೆ
ಹೊಸದಿಲ್ಲಿ,ಫೆ.3: ರಾಜ್ಯಗಳ ಹೆಚ್ಚಿನ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸುವ ಉದ್ದೇಶದಿಂದ ರೈಲ್ವೆ ಯೋಜನೆಗಳ ತ್ವರಿತ ಅನುಷ್ಠಾನಕ್ಕಾಗಿ ಸಂಪನ್ಮೂಲಗಳನ್ನು ಕ್ರೋಢೀಕರಿಸಲು ರಾಜ್ಯ ಸರಕಾರಗಳೊಂದಿಗೆ ಜಂಟಿ ಉದ್ಯಮಗಳನ್ನು ಸ್ಥಾಪಿಸಲು ರೈಲ್ವೆ ಇಲಾಖೆಗೆ ಕೇಂದ್ರ ಸಂಪುಟವು ಬುಧವಾರ ಒಪ್ಪಿಗೆಯನ್ನು ನೀಡಿದೆ. ವಿವಿಧ ರಾಜ್ಯಗಳಲ್ಲಿ ರೈಲ್ವೆ ಮಾರ್ಗಗಳಿಗೆ ಹೆಚ್ಚುತ್ತಿರುವ ಬೇಡಿಕೆಗಳು ಮತ್ತು ಅವುಗಳನ್ನು ಕಾರ್ಯಗತಗೊಳಿಸಲು ಭಾರೀ ಮೊತ್ತದ ಹಣಕಾಸಿನ ಅಗತ್ಯವನ್ನು ಪರಿಗಣಿಸಿ ಜಂಟಿ ಉದ್ಯಮಗಳು ಈಗ ಯೋಜನೆಗಳ ಗುರುತಿಸುವಿಕೆ,ಭೂ ಸ್ವಾಧೀನ ಮತ್ತು ಸರಕಾರದ ಆರ್ಥಿಕ ನೆರವಿನ ಜೊತೆಗೆ ಸಂಭಾವ್ಯ ಹೂಡಿಕೆಗಳು ಮತ್ತು ಉಸ್ತುವಾರಿ ಹೊಣೆಗಾರಿಕೆಗಳನ್ನು ಹೊಂದಿರಲಿವೆ.
ರೈಲ್ವೆ ಸಚಿವಾಲಯ ಮತ್ತು ಸಂಬಂಧಿತ ರಾಜ್ಯ ಸರಕಾರಗಳ ಸಮಾನ ಸಹಭಾಗಿತ್ವದಲ್ಲಿ ಜಂಟಿ ಪ್ರವರ್ತನೆಯ ಕಂಪನಿಗಳನ್ನು ಸ್ಥಾಪಿಸಲು ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯು ನಿರ್ಧರಿಸಿತು.
ಪ್ರತಿ ಜಂಟಿ ಉದ್ಯಮವು ಅದು ಕೈಗೆತ್ತಿಕೊಳ್ಳುವ ಯೋಜನೆಗಳ ಗಾತ್ರವನ್ನು ಆಧರಿಸಿ 100 ಕೋಟಿ ರೂ.ಗಳ ಆರಂಭಿಕ ಪಾವತಿಯಾದ ಬಂಡವಳವನ್ನು ಹೊಂದಿರಲಿದೆ.
ಪ್ರತಿ ರಾಜ್ಯಕ್ಕೆ ರೈಲ್ವೆಯ ಆರಂಭಿಕ ಪಾವತಿಯಾದ ಬಂಡವಳ 50 ಕೋ.ರೂ.ಗೆ ಸೀಮಿತವಾಗಿರುತ್ತದೆ. ಯೋಜನೆ ಮತ್ತು ಸೂಕ್ತ ಸಕ್ಷಮ ಪ್ರಾಧಿಕಾರಿಯ ಮಟ್ಟದಲ್ಲಿ ಅದಕ್ಕೆ ಹಣಕಾಸು ಪೂರೈಕೆಗೆ ಅನುಮತಿಯ ಬಳಿಕ ಇನ್ನಷ್ಟು ಹೂಡಿಕೆಯನ್ನು ಮಾಡಲಾಗುತ್ತದೆ ಎಂದು ಅಧಿಕೃತ ಹೇಳಿಕೆಯು ತಿಳಿಸಿದೆ.
ಕೇರಳ ಮತ್ತು ಆಂಧ್ರ ಪ್ರದೇಶಗಳಲ್ಲಿ ರೈಲ್ವೆ ಯೋಜನೆಗಳ ತ್ವರಿತ ಅನುಷ್ಠಾನಕ್ಕಾಗಿ ಜಂಟಿ ಉದ್ಯಮಗಳ ಸ್ಥಾಪನೆಗಾಗಿ ರೈಲ್ವೆಯು ಇತ್ತೀಚಿಗೆ ಆಯಾ ರಾಜ್ಯ ಸರಕಾರಗಳೊಂದಿಗೆ ಒಡಂಬಡಿಕೆಗಳನ್ನು ಮಾಡಿಕೊಂಡಿದೆ.
ಹಿಂದಿನ ಮುಂಗಡಪತ್ರದಲ್ಲಿ ಪ್ರಕಟಿಸಿರುವಂತೆ ರಾಜ್ಯ ಸರಕಾರಗಳೊಂದಿಗೆ ಸಹಭಾಗಿತ್ವ ಸದಾ ಅಗತ್ಯವಾಗಿದೆ ಎನ್ನುವುದು ರೈಲ್ವೆಯ ಅಭಿಪ್ರಾಯವಾಗಿದೆ. ಈ ಹಿಂದೆ ಒಡಿಶಾ ಮತ್ತು ಮಹಾರಾಷ್ಟ್ರಗಳೂ ಇಂತಹುದೇ ಒಪ್ಪಂದಗಳಿಗೆ ಸಹಿ ಹಾಕಿವೆ.







