ರಾಜ್ಯದ ರಸ್ತೆ ಅಭಿವೃದ್ಧಿಗೆ 1ಲಕ್ಷ ಕೋಟಿ ರೂ.: ಸಚಿವ ಗಡ್ಕರಿ

‘ಇನ್ವೆಸ್ಟ್-ಕರ್ನಾಟಕ’ ಹೂಡಿಕೆದಾರರ ಸಮಾವೇಶ ಶುಭಾರಂಭ
ಬೆಂಗಳೂರು, ಫೆ.3: ರಾಜ್ಯದ ರಸ್ತೆಗಳ ಯೋಜನೆಗಳಿಗೆ ಪ್ರಸಕ್ತ ಸಾಲಿನ ಡಿಸೆಂಬರ್ ಅಂತ್ಯಕ್ಕೆ 60 ಸಾವಿರ ಕೋಟಿ ರೂ. ಹಾಗೂ ಮುಂದಿನ ವರ್ಷ 40 ಸಾವಿರ ಕೋಟಿ ರೂ. ಸೇರಿ ಒಂದು ಕೋಟಿ ರೂ. ಖರ್ಚು ಮಾಡಲಾಗುವುದು. ಯೋಜನೆಯಡಿ ಈಗಾಗಲೇ ಬೆಂಗಳೂರು-ಮೈಸೂರು ರಸ್ತೆ ಅಗಲೀಕರಣ, ಶಿರಾಡಿಘಾಟ್ ರಸ್ತೆ ಅಭಿವೃದ್ಧಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಬುಧವಾರ ನಗರದ ಅರಮನೆ ಆವರಣದಲ್ಲಿ ಇನ್ವೆಸ್ಟ್ ಕರ್ನಾಟಕ-2016ರ ಅಂಗವಾಗಿ ಏರ್ಪಡಿಸಲಾಗಿರುವ ವಸ್ತು ಪ್ರದರ್ಶನ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಅಭಿವೃದ್ಧಿಯ ಇಂಜಿನ್ ಆಗಿರುವ ಕರ್ನಾಟಕದಲ್ಲಿ ಅಭಿವೃದ್ಧಿಯ ಪರ್ವ ಸುಗಮವಾಗಿ ಸಾಗಲಿ ಎಂದು ಹಾರೈಸಿದರು.
ದೇಶದ ಪ್ರಗತಿ ಹಾಗೂ ಅಭಿವೃದ್ಧಿ ನಮ್ಮ ಗುರಿ ಯಾಗಬೇಕು. ಯುವ ಸಮೂಹಕ್ಕೆ ಉದ್ಯೋಗದ ಅವಕಾಶಗಳನ್ನು ಹೆಚ್ಚಿಸುವ ಮೂಲಕ ಬಡತನವನ್ನು ನಿರ್ಮೂಲನೆ ಮಾಡಲು ಪ್ರಾಮಾಣಿಕ ಪ್ರಯತ್ನ ನಮ್ಮಿಂದಾಗಬೇಕು ಎಂದು ನಿತಿನ್ ಗಡ್ಕರಿ ಕರೆ ನೀಡಿದರು.
ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಗೆ ಆದ್ಯತೆ ನೀಡಬೇಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಕಾರ ನೀಡಿದರೆ, ಕೇಂದ್ರ ಸರಕಾರ ಈ ಸಂಬಂಧ ಬೃಹತ್ ಪ್ರಮಾಣದ ಯೋಜನೆಗಳನ್ನು ಜಾರಿಗೆ ತರಲು ಸಿದ್ಧವಿದೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ 9,632 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಇದೆ. ಮುಂದಿನ ದಿನಗಳಲ್ಲಿ ಇನ್ನೂ ನಾಲ್ಕು ಸಾವಿರ ಕಿ.ಮೀ ರಸ್ತೆಯನ್ನು 60 ಸಾವಿರ ಕೋಟಿ ರೂ.ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿಯಾಗಿ ಅಭಿವೃದ್ಧಿ ಪಡಿಸಲಾಗುವುದು. ಪ್ರತಿನಿತ್ಯ 18 ಕಿ.ಮೀ. ರಸ್ತೆಯನ್ನು ನಿರ್ಮಿಸಲಾಗುತ್ತಿದೆ. ಈ ಪ್ರಮಾಣವನ್ನು 30 ಕಿ.ಮೀ.ಗೆ ಹೆಚ್ಚಿಸುವ ಕುರಿತು ಸಂಬಂಧಪಟ್ಟ ತಾಂತ್ರಿಕ ತಜ್ಞರ ಜೊತೆ ಚರ್ಚೆ ನಡೆಸಲಾಗುತ್ತಿದೆ ಎಂದರು.
ರಾಜ್ಯದಲ್ಲಿ ಆರು ಬಂದರುಗಳಿದ್ದು, ನವ ಮಂಗಳೂರು ಬಂದರನ್ನು ಸುಮಾರು 10 ಸಾವಿರ ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿಗೊಳಿಸುವುದಲ್ಲದೆ, ಅದರ ಸಾಮರ್ಥ್ಯ ದ್ವಿಗುಣಗೊಳಿಸಲಾಗುವುದು. ಅಲ್ಲದೆ, ಖಾಸಗಿ ಸಹಭಾಗಿತ್ವದಲ್ಲಿ 200 ಕೋಟಿ ರೂ. ವೆಚ್ಚದಲ್ಲಿ ನಾಲ್ಕು ಲೈಟ್ ಹೌಸ್ಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಅವರು ಹೇಳಿದರು. ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳನ್ನು ನಿವಾರಿಸುವ ಭರವಸೆಯನ್ನು ರಾಜ್ಯ ಸರಕಾರ ನೀಡಿದರೆ, ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಬೇಕಾಗಿರುವ ಎಲ್ಲ ರೀತಿಯ ಯೋಜನೆಗಳಿಗೆ ತ್ವರಿತ ಮಂಜೂರಾತಿ, ಅಗತ್ಯ ಅನುದಾನ ಎಲ್ಲವನ್ನೂ ಕಲ್ಪಿಸಿಕೊಡಲಾಗುವುದು ಎಂದು ನಿತಿನ್ ಗಡ್ಕರಿ ತಿಳಿಸಿದರು.
ರಾಜ್ಯವು ಕೇವಲ ದೇಶದಷ್ಟೇ ಅಲ್ಲ, ವಿಶ್ವದ ಮಾಹಿತಿ ತಂತ್ರಜ್ಞಾನದ ರಾಜಧಾನಿಯಾಗಿ ಹೊರಹೊಮ್ಮಲಿದೆ. ಕೇಂದ್ರ ಸರಕಾರದ ಮೇಕ್ ಇನ್ ಇಂಡಿಯಾ ಮಾದರಿಯನ್ನು ರಾಜ್ಯದಲ್ಲಿ ಆರಂಭಿಸಲಾಗಿದೆ ಎಂದು ಅವರು ಹೇಳಿದರು.
ಬೆಂಗಳೂರು-ಮೈಸೂರು ನಡುವೆ ಷಟ್ಪಥ ರಸ್ತೆ
ಬೆಂಗಳೂರು, ಫೆ.3: ಬೆಂಗಳೂರು-ಮೈಸೂರು ನಡುವೆ ಆರು ಪಥದ ರಸ್ತೆಯನ್ನು ಎಂಟು ಸಾವಿರ ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು ಎಂದು ಕೇಂದ್ರ ಭೂ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಬುಧವಾರ ನಗರದಲ್ಲಿ ‘ನಮ್ಮ ಬೆಂಗಳೂರು’ ಪ್ರತಿಷ್ಠಾನದ ವತಿಯಿಂದ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಡಿಸೆಂಬರ್ ಅಂತ್ಯಕ್ಕೆ ರಸ್ತೆ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದರು.
ಕೇಂದ್ರ ಸರಕಾರವು ಬೆಂಗಳೂರಿನಿಂದ ದಿಂಡಿಗಲ್ವರೆಗೆ 850 ಕೋಟಿ ರೂ., ನೆಲಮಂಗಲದಿಂದ ತುಮಕೂರುವರೆಗೆ 2 ಸಾವಿರ ಕೋಟಿ ರೂ., ಹೊಸಕೋಟೆ ಯಿಂದ ದಾಬಸ್ಪೇಟೆ ವರೆಗೆ ಒಂದು ಸಾವಿರ ಕೋಟಿ ರೂ.ವೆಚ್ಚದಲ್ಲಿ ರಸ್ತೆ ಅಗಲೀಕರಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಿದೆ ಎಂದು ಅವರು ಹೇಳಿದರು.
ಉದ್ಯಮಿಗಳ ಅನಿಸಿಕೆ....
ಬೆಂಗಳೂರು, ಫೆ.3: ಬಂಡವಾಳ ಹೂಡಿಕೆಗೆ ಕರ್ನಾಟಕ ಪ್ರಶಸ್ತ ತಾಣ. ಯಾರನ್ನೂ ಮೆಚ್ಚಿಸಲು ಈ ಮಾತನ್ನು ಹೇಳುತ್ತಿಲ್ಲ. ನನ್ನ ಅನುಭವದಿಂದಲೇ ಈ ಮಾತನ್ನು ಹೇಳುತ್ತಿದ್ದೇನೆ. ವಿಶ್ವದ ವಿವಿಧ ದೇಶಗಳಿಂದ ಆಗಮಿಸಿರುವ ಪ್ರತಿನಿಧಿಗಳು ಬಂಡವಾಳ ಹೂಡಿಕೆಗೆ ಕರ್ನಾಟಕವನ್ನು ಆಯ್ಕೆ ಮಾಡಿಕೊಳ್ಳಿ ಎಂದು ಟಾಟಾ ಟ್ರಸ್ಟ್ ಮುಖ್ಯಸ್ಥ ರತನ್ ಟಾಟಾ ಕರೆ ನೀಡಿದರು.
ನಾರಾಯಣಮೂರ್ತಿ: 1983ರಲ್ಲಿ ನಮ್ಮ ಸಂಸ್ಥೆ ಆರಂಭಿಸಲು 50 ಲಕ್ಷ ರೂ. ಸಾಲ ನೀಡಲು ಯಾವುದೇ ಬಹು ರಾಷ್ಟ್ರೀಯ ಬ್ಯಾಂಕುಗಳು ಮುಂದೆ ಬಂದಿಲ್ಲ. ಆದರೆ ರಾಜ್ಯದ ಹಣಕಾಸು ಸಂಸ್ಥೆಗಳು ನಮ್ಮ ನೆರವಿಗೆ ಬಂದವು ಎಂದು ಇನ್ಫೋಸಿಸ್ ಮುಖ್ಯಸ್ಥ ಎನ್.ಆರ್.ನಾರಾಯಣಮೂರ್ತಿ ಸ್ಮರಿಸಿಕೊಂಡರು. ಅಲ್ಲದೆ, ಶೀಘ್ರದಲ್ಲೇ ಹುಬ್ಬಳ್ಳಿಯಲ್ಲಿ ಇನ್ಫೋಸಿಸ್ ತನ್ನ ಶಾಖೆಯನ್ನು ಆರಂಭಿಸಲಿದೆ ಎಂದು ಅವರು ಹೇಳಿದರು. ಅನಿಲ್ ಅಂಬಾನಿ: ಬಾಹ್ಯಾಕಾಶ ತಂತ್ರಜ್ಞಾನ (ಏರೋಸ್ಪೇಸ್)ವು ಜಾಗತಿಕ ಮಟ್ಟದಲ್ಲಿ ಹೆಚ್ಚು ಅವಕಾಶಗಳನ್ನು ಕಲ್ಪಿಸುತ್ತಿದೆ. ಈ ಹಿನ್ನೆಲೆಯಲ್ಲಿ ವೈಟ್ಫೀಲ್ಡ್ನಲ್ಲಿ ಅಂತಾರಾಷ್ಟ್ರೀಯ ದರ್ಜೆಯ ಏರೋ ಸ್ಪೇಸ್ ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರವನ್ನು ಆರಂಭಿಸಲಾಗುವುದು ಎಂದು ರಿಲಯನ್ಸ್ ಮುಖ್ಯಸ್ಥ ಅನಿಲ್ ಅಂಬಾನಿ ಘೋಷಿಸಿದರು. ಇವರಲ್ಲದೆ, ಬಯೋಕಾನ್ ಮುಖ್ಯಸ್ಥೆ ಕಿರಣ್ಮಜೂಂದಾರ್ ಶಾ, ವಿಪ್ರೋ ಮುಖ್ಯಸ್ಥ ಅಝೀಮ್ಪ್ರೇಮ್ಜಿ, ಆದಿತ್ಯ ಬಿರ್ಲಾ ಸಮೂಹದ ಕುಮಾರ ಮಂಗಳಂ ಬಿರ್ಲಾ, ಜಿಂದಾಲ್ ಸ್ಟೀಲ್ಸ್ನ ಮುಖ್ಯಸ್ಥ ಸಜ್ಜನ್ ಜಿಂದಾಲ್, ಸಿಐಐ ಮುಖ್ಯಸ್ಥ ಸುಮಿತ್ ಮಜೂಂದಾರ್ ಶಾ, ಮಣಿಪಾಲ್ ಗ್ಲೋಬಲ್ ಮುಖ್ಯಸ್ಥ ಟಿ.ವಿ.ಮೋಹನ್ ದಾಸ್ಪೈ ಸೇರಿದಂತೆ ದೇಶ ವಿದೇಶಗಳ ಉದ್ಯಮಿಗಳು, ತಮ್ಮ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗೆ ಉತ್ಸುಕ: ಫ್ರಾನ್ಸ್ ರಾಯಭಾರಿ ಫ್ರಾನ್ಕೋಯ್ ರಿಚರ್
ಬೆಂಗಳೂರು, ಫೆ. 3: ರೈಲ್ವೆ ಯೋಜನೆಗಳಿಗೆ ಸಂಬಂಧಿಸಿದಂತೆ ಫ್ರಾನ್ಸ್ನಲ್ಲಿ ಉತ್ತಮ ತಂತ್ರಜ್ಞಾನವಿದ್ದು, ಕರ್ನಾಟಕ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಲು ನಾವು ಅತ್ಯಂತ ಉತ್ಸುಕವಾಗಿದ್ದೇವೆ ಎಂದು ಭಾರತ ದೇಶದಲ್ಲಿ ಫ್ರಾನ್ಸ್ ರಾಯಭಾರಿ ಫ್ರಾನ್ಕೋಯ್ಸೋ ರಿಚರ್ ತಿಳಿಸಿದ್ದಾರೆ.
ಬುಧವಾರ ಇಲ್ಲಿನ ಅರಮನೆ ಮೈದಾನದಲ್ಲಿ ಇನ್ವೆಸ್ಟ್ ಕರ್ನಾಟಕ ಸಮಾವೇಶದ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಅತ್ಯಂತ ನೆಚ್ಚಿನ ತಾಣವಾಗಿದ್ದು, ಅಗತ್ಯ ಮೂಲ ಸೌಲಭ್ಯವಿಲ್ಲದೆ ಎಂದು ತೃಪ್ತಿ ವ್ಯಕ್ತಪಡಿಸಿದರು.
ಭಾರತ ದೇಶದಲ್ಲಿನ ವಿವಿಧ ರಾಜ್ಯಗಳ ಮಧ್ಯೆ ಹೂಡಿಕೆದಾರರನ್ನು ಆಕರ್ಷಿಸಲು ಆರೋಗ್ಯಕರ ಸ್ಪಧೆ ಏರ್ಪಟ್ಟಿದ್ದು, ಈ ಹಿನ್ನೆಲೆಯಲ್ಲಿ ವಿಫುಲ ಅವಕಾಶಗಳಿವೆ ಎಂದ ಅವರು, ಮುಂದಿನ ಐದು ವರ್ಷಗಳಲ್ಲಿ ಭಾರತದಲ್ಲಿ 10 ಬಿಲಿಯನ್ ‘ಯೂರೊ’ ಬಂಡವಾಳ ಹೂಡಿಕೆ ಮಾಡಲು ಆಸಕ್ತಿ ಹೊಂದಿದ್ದೇವೆ ಎಂದು ಭರವಸೆ ವ್ಯಕ್ತಪಡಿಸಿದರು.
ದಿಲ್ಲಿ-ಚಂಡಿಘಡ ರೈಲ್ವೆ ಹಳಿ ಸುಧಾರಣೆ ಕಾರ್ಯವನ್ನು ಫ್ರಾನ್ಸ್ ದೇಶ ಕೈಗೆತ್ತಿಕೊಂಡಿದ್ದು, ಅದೇ ಮಾದರಿಯಲ್ಲೆ ಕರ್ನಾಟಕ ರಾಜ್ಯದಲ್ಲಿಯೂ ರೈಲ್ವೆ ಸಂಪರ್ಕ ವ್ಯವಸ್ಥೆಯಲ್ಲಿ ಫ್ರಾನ್ಸ್ನ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಲು ಇಚ್ಛೆಸಿದ್ದೇವೆ ಎಂದರು.
ದಿಲ್ಲಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಶಾಂತಿಯುತ ವಾತಾವರಣವಿದ್ದು, ಪ್ರವಾಸಿಗರನ್ನು ಆಕರ್ಷಿಸಲು ಇಲ್ಲಿ ವಿಫುಲ ಅವಕಾಶಗಳೂ ಇವೆ ಎಂದ ಅವರು, ಭಾರತ ಹಾಗೂ ಫ್ರಾನ್ಸ್ ದೇಶದ ನಡುವಿನ ಸಂಬಂಧವೂ ಉತ್ತಮವಾಗಿದೆ. ಹೀಗಾಗಿಯೇ ಉಭಯ ದೇಶಗಳು ಜಂಟಿ ಸಮರಾಭ್ಯಾಸ ಮಾಡಿವೆ ಎಂದು ಅವರು ಸ್ಮರಿಸಿದರು.
ಪ್ಲಾಸ್ಟಿಕ್ ತಂತ್ರಜ್ಞಾನ ಅಭಿವೃದ್ಧಿ ಕೇಂದ್ರ ಸ್ಥಾಪನೆ: ಅನಂತ್ಕುಮಾರ್
ಬೆಂಗಳೂರು, ಫೆ.3: ರಾಜಧಾನಿ ಬೆಂಗಳೂರಿನಲ್ಲಿ ಪ್ಲಾಸ್ಟಿಕ್ ತಂತ್ರಜ್ಞಾನ ಅಭಿವೃದ್ಧಿ ಕೇಂದ್ರ ಸ್ಥಾಪನೆ ಮಾಡಲಾಗುವುದು ಎಂದು ಕೇಂದ್ರ ರಸಗೊಬ್ಬರ ಸಚಿವ ಅನಂತ್ಕುಮಾರ್ ತಿಳಿಸಿದ್ದಾರೆ.
ಬುಧವಾರ ಬೆಂಗಳೂರು ಅರಮನೆಯಲ್ಲಿ ಆಯೋ ಜಿಸಲಾಗಿದ್ದ ಇನ್ವೆಸ್ಟ್ ಕರ್ನಾಟಕ 2016 ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಾಹಿತಿ ತಂತ್ರಜ್ಞಾನದ ಜೊತೆಗೆ ಪ್ಲಾಸ್ಟಿಕ್ ತಂತ್ರಜ್ಞಾನಕ್ಕೂ ಒತ್ತು ನೀಡಬೇಕಾದ ಅಗತ್ಯವಿದೆ. ಆದುದರಿಂದ, ರಾಜ್ಯ ಸರಕಾರವು ಬೆಂಗಳೂರಿನಲ್ಲಿ ಪ್ಲಾಸ್ಟಿಕ್ ತಂತ್ರಜ್ಞಾನ ಕೇಂದ್ರ ಸ್ಥಾಪನೆಗೆ ಅಗತ್ಯ ಭೂಮಿಯನ್ನು ಒದಗಿಸಬೇಕು ಎಂದು ಅವರು ಮನವಿ ಮಾಡಿದರು.
ನಿರೀಕ್ಷೆಗಿಂತ ಹೆಚ್ಚಿನ ಯಶಸ್ಸು: ಆರ್.ವಿ.ದೇಶಪಾಂಡೆ
ಬೆಂಗಳೂರು, ಫೆ.3: ‘ಇನ್ವೆಸ್ಟ್ ಕರ್ನಾಟಕ’ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ನಿರೀಕ್ಷೆಗಿಂತ ಹೆಚ್ಚಿನ ಯಶಸ್ಸು ಸಿಕ್ಕಿದೆ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.
ಬುಧವಾರ ನಗರದ ಅರಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉದ್ಯಮಿಗಳು ಆರಂಭಿಸಲು ಉದ್ದೇಶಿಸಿರುವ ಹೊಸ ಯೋಜನೆಗಳ ಬಗ್ಗೆ ನಾನು ಹಾಗೂ ಮುಖ್ಯಮಂತ್ರಿ ಉದ್ಯಮಿಗಳೊಂದಿಗೆ ಸಭೆ ನಡೆಸಿದ್ದೇವೆ ಎಂದರು.
‘ಹೂಡಿಕೆ ಮಾಡ್ತೀರಾ ಒಳಗೆ ಹೋಗಿ.. ಇಲ್ಲಾಂದ್ರೆ ನಡೀರಿ..ನಡೀರಿ..’
ಬೆಂಗಳೂರು, ಫೆ. 3: ‘ಇನ್ವೆಸ್ಟ್-ಕರ್ನಾಟಕ’ ಹೊಡಿಕೆದಾರರ ಸಮಾವೇಶ ಹಿನ್ನೆಲೆಯಲ್ಲಿ ಕೈಗಾರಿಕಾ ಭದ್ರತಾ ಪಡೆ, ಕ್ಷಿಪ್ರ ಪೊಲೀಸ್ ಪಡೆ ಸೇರಿದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಆದರೆ, ಸಮಾವೇಶಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿತ್ತು.
ಬುಧವಾರ ಇಲ್ಲಿನ ಅರಮನೆ ಮೈದಾನದಲ್ಲಿ ಏರ್ಪಡಿಸಿದ್ದ ಇನ್ವೆಸ್ಟ್ ಕರ್ನಾಟಕ ಸಮಾವೇಶಕ್ಕೆ ಹೂಡಿಕೆದಾರರು, ಗಣ್ಯರು, ಆಹ್ವಾನಿತ ಮಾಧ್ಯಮ ಪ್ರತಿನಿಧಿಗಳು ಹಾಗೂ ಆಹ್ವಾನಿತ ಪ್ರತಿನಿಧಿಗಳನ್ನು ಹೊರತು ಯಾರೊಬ್ಬರನ್ನು ಸಮಾವೇಶದತ್ತ ಸುಳಿಯಲು ಅವಕಾಶವೇ ನೀಡಲಿಲ್ಲ.
ಸಮಾವೇಶವನ್ನು ಬಹುಕುತೂಹಲದಿಂದ ವೀಕ್ಷಿಸಲು ಆಗಮಿಸಿದ್ದ ನೂರಾರು ಸಾರ್ವಜನಿಕರನ್ನು ಗೇಟ್ನಲ್ಲೆ ತಡೆಗೆ ‘ಬಂಡವಾಳ ಹೂಡಿಕೆ ಮಾಡ್ತೀರಾ..ಒಳಗೆ ಬೀಡ್ತೀವಿ..ಇಲ್ಲ ಅಂದ್ರೆ ಇಲ್ಲಿ ನಿಮಗೇನು ಕೆಲಸ ಹೋಗ್ತಾಯಿರಿ. ಇಲ್ಲೆಲ್ಲಾ ನಿಂತಿದ್ದರೆ ಸರಿಯಿರಲ್ಲ’ ಹೀಗೆಂದು ಪೊಲೀಸ್ ಅಧಿಕಾರಿಯೊಬ್ಬರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು ನಡೆಯಿತು.
ಪಾರ್ಕಿಂಗ್ ವ್ಯವಸ್ಥೆ: ಹೂಡಿಕೆದಾರರ ಸಮಾವೇಶಕ್ಕೆ ಆಗಮಿಸುವ ಗಣ್ಯರು, ಮಾಧ್ಯಮ ಪ್ರತಿನಿಧಿಗಳ ಮತ್ತು ಆಹ್ವಾನಿತ ಪ್ರತಿನಿಧಿಗಳಿಗಾಗಿ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಅರಮನೆ ಮೈದಾನದ ಬಳ್ಳಾರಿ ರಸ್ತೆ, ಜಯಮಹಲ್ ರಸ್ತೆಗಳಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿತ್ತು.







