‘ಇನ್ವೆಸ್ಟ್ ಕರ್ನಾಟಕ’ದಿಂದ ಜನರ ತೆರಿಗೆ ಹಣ ಲಪಟಾಯಿಸುವ ಹುನ್ನಾರ: ಆರೋಪ

ರೈತರಿಂದ ಪ್ರತಿಭಟನೆ: ಬಂಧನ-ಬಿಡುಗಡೆ
ಬೆಂಗಳೂರು, ಫೆ. 3: ‘ಇನ್ವೆಸ್ಟ್ ಕರ್ನಾಟಕ’ ಹೂಡಿಕೆದಾರರ ಸಮಾವೇಶದ ನೆಪದಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಜನರ ತೆರಿಗೆ ಹಣವನ್ನು ಲಪಟಾಯಿಸಲು ಹುನ್ನಾರ ನಡೆಸಿವೆ ಎಂದು ಆರೋಪಿಸಿ ರಾಜ್ಯ ರೈತ ಸಂಘ, ಹಸಿರು ಸೇನೆ ಕಾರ್ಯಕರ್ತರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಬುಧವಾರ ಇಲ್ಲಿನ ಗಾಂಧಿನಗರದಿಂದ ಸ್ವಾತಂತ್ರ ಉದ್ಯಾನವನದ ವರೆಗೆ ರ್ಯಾಲಿ ನಡೆಸಿದ ನೂರಾರು ರೈತರು ಇನ್ವೆಸ್ಟ್ ಕರ್ನಾಟಕ ಹೂಡಿಕೆದಾರರ ಸಮಾವೇಶವನ್ನು ವಿರೋಧಿಸಿ ಧಿಕ್ಕಾರದ ಘೋಷಣೆಗಳನ್ನು ಮೊಳಗಿಸಿದರು. ಅರಮನೆ ಮೈದಾನದತ್ತ ನುಗ್ಗಲು ಮುಂದಾದ ರೈತರನ್ನು ಪೊಲೀಸರು ಬಂಧಿಸಿ, ಬಳಿಕ ಬಿಡುಗಡೆ ಮಾಡಿದರು.
ಕಳ್ಳರ ಪುಷ್ಟೀಕರಣ: ‘ಇನ್ವೆಸ್ಟ್ ಕರ್ನಾಟಕ’ ಹೂಡಿಕೆದಾರರ ಸಮಾವೇಶ ದೇಶದ ಜನರ ತೆರಿಗೆ ಹಣವನ್ನು ಲೂಟಿ ಮಾಡುವ ಹುನ್ನಾರವಷ್ಟೇ. ಹನ್ನೊಂದು ವರ್ಷಗಳಲ್ಲಿ ದೇಶದ ತೆರಿಗೆ ಹಣವನ್ನು ಬಂಡವಾಳಿಗರಿಗೆ ಸುಮಾರು 40 ಲಕ್ಷ ಕೋಟಿ ರೂ.ಗಳಷ್ಟು ಸಹಾಯ ದನ ಮತ್ತು ತೆರಿಗೆ ವಿನಾಯಿತಿ ನೀಡುವ ಮೂಲಕ ಕಳ್ಳರನ್ನು ಪುಷ್ಟೀಕರಿಸಲಾಗಿದೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ದೂರಿದರು.
ರಾಜ್ಯ ಸರಕಾರದಲ್ಲಿರುವ ಕೆಲ ರಾಜ ಕೀಯ ನಾಯಕರು, ಕೆಲ ಅಧಿಕಾರಿಗಳು ಉದ್ಯಮಪತಿಗಳೊಂದಿಗೆ ಪಾಲುದಾರರಾಗಿದ್ದು, ಇವರೆಲ್ಲರೂ ಸೇರಿ ಸಾರ್ವಜನಿಕ ಸಂಪತ್ತನ್ನು ಲೂಟಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಟೀಕಿಸಿದ ಅವರು, ಟೋಪಿ ಕಂಪೆನಿಗಳಿಗೆ ಸಾವಿರಾರು ಕೋಟಿ ರೂ.ಬಡ್ಡಿ ರಹಿತ ಸಾಲ ನೀಡಲಾಗುತ್ತಿದೆ ಎಂದು ಆಕ್ಷೇಪಿಸಿದರು.
ಕೈಗಾರಿಕಾಭಿವೃದ್ಧಿ, ಮೂಲ ಸೌಕರ್ಯದ ಅಭಿವೃದ್ಧಿ ನೆಪದಲ್ಲಿ ರೈತರ ಕೃಷಿ ಭೂಮಿಯನ್ನು ದೋಚಲಾಗುತ್ತಿದೆ ಎಂದ ಅವರು, ಶ್ರೀಮಂತರೇ ದೇಶದ ಅಧಃಪತನಕ್ಕೆ ಕಾರಣರಾಗಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಸಮಾನತೆ, ಸಮಾನ ಹಂಚಿಕೆ, ಸಮಾನ ನಾಗರಿಕತೆಯ ನೀತಿಗಳನ್ನು ನಾಶ ಮಾಡಿ ಪ್ರಜಾಪ್ರಭುತ್ವವನ್ನು ಮತ್ತು ಸಂವಿಧಾನದ ಅಶಯಗಳನ್ನು ಧಿಕ್ಕರಿಸಿ ಬರೀ ಶ್ರೀಮಂತರನ್ನು ಉತ್ಪಾದಿಸುವ ಸಮಾವೇಶಗಳ ಅಗತ್ಯವೇನು ಎಂದು ಪ್ರಶ್ನಿಸಿದರು.
‘ಇನ್ವೆಸ್ಟ್-ಕರ್ನಾಟಕ’ ಬಂಡವಾಳ ಹೂಡಿಕೆದಾರರ ಸಮಾವೇಶ ಅಭಿವೃದ್ಧಿಯ ಬದಲಿಗೆ ಜನತೆಯ ಬದುಕಿನ ವಿನಾಶಕ್ಕಾಗಿ ನಡೆಸಲಾಗುತ್ತಿ ದ್ದು, ಇದನ್ನು ವಿರೋಧಿಸಿ ಅಸಹಕಾರ ಚಳವಳಿ ಆಗಲೇಬೇಕು. ಈ ಚಳವಳಿ ಇಲ್ಲಿಗೆ ನಿಲ್ಲಿಸುವುದಿಲ್ಲ ಎಂದು ಇದೇ ವೇಳೆ ಎಚ್ಚರಿಸಿದರು.
ಸಂಘದ ಮುಖಂಡರಾದ ಜಡಿಯಪ್ಪದೇಸಾಯಿ, ವೆಂಕಟನಾರಾಯಣಪ್ಪ, ಅಬ್ಬಣಿ ಶಿವಪ್ಪ, ಗಂಗಾಧರ ಮೇಟಿ, ರಘು, ಶಿವಕುಮಾರ್, ಆದಿಲ್ ಅಹ್ಮದ್, ತಬ್ರೀಝ್ ಪಾಷ, ಆಂಜನೇಯರೆಡ್ಡಿ, ಪ್ರಕಾಶ್, ಸಂಪಂಗಿ ರಾಮಯ್ಯ, ಸುಶೀಲಾ, ಗೋವಿಂದ ರಾಜ್ ಮತ್ತಿತರರು ಪಾಲ್ಗೊಂಡಿದ್ದರು.





