ಸೌದಿಯಲ್ಲಿ ರಾಷ್ರೀಯ ಮುದ್ರಾ ಅಭಿಯಾನಕ್ಕೆ ಚಾಲನೆ

ಜಿದ್ದಾ: ಪವಿತ್ರ ನಗರ ಮಕ್ಕಾದ ಗವರ್ನರ್, ಯುವರಾಜ ಖಾಲಿದ್ ಅಲ್ಫೈಸಲ್ ಈ ವರ್ಷದ ‘ರಾಷ್ಟ್ರೀಯ ಮುದ್ರೆ’ (ನೇಶನ್ಸ್ ಇಂಪ್ರಿಂಟ್) ಅಭಿಯಾನದ ಚಿಹ್ನೆಯನ್ನು ಇತ್ತೀಚೆಗೆ ಅನಾವರಣಗೊಳಿಸಿದರು. ಸೌದಿ ಸಾಮ್ರಾಜ್ಯದ ಎಲ್ಲಾ ವರ್ಗಗಳ ಯುವಜನರನ್ನು ಒಗ್ಗೂಡಿಸುವ ಉದ್ದೇಶವನ್ನು ಈ ಅಭಿಯಾನ ಹೊಂದಿದೆ. ಲೋಗೋ ಅನಾವರಣ ಗೊಳಿಸುವ ಸಂದರ್ಭದಲ್ಲಿ ಯುವರಾಜ ಖಾಲಿದ್ ಮಾತನಾಡಿ, ಈ ಅಭಿಯಾನದ ಯಶಸ್ಸಿಗೆ ಸಕಲ ಪ್ರಯತ್ನಗಳನ್ನು ನಡೆಸಲಾಗುತ್ತಿರುವ ಬಗ್ಗೆ ಶ್ಲಾಘಿಸಿದರು. ಎರಡು ಪವಿತ್ರ ಮಸೀದಿಗಳ ಪಾಲಕರಾದ ದೊರೆ ಸಲ್ಮಾನ್ ಅವರ ಆಡಳಿತದಲ್ಲಿ ಇದೊಂದು ಐತಿಹಾಸಿಕ ಕ್ಷಣವೆಂದು ಬಣ್ಣಿಸಿದರು.
ದೊರೆ ಸಲ್ಮಾನ್ ಅವರ ಆಶೋತ್ತರಗಳು ಹಾಗೂ ಆಕಾಂಕ್ಷೆಗಳನ್ನು ದೇಶದ ಯುವಜನತೆ ಸಾಕಾರಗೊಳಿಸುವರೆಂಬ ಆಶಯವನ್ನು ಯುವರಾಜ ಖಾಲಿದ್ ವ್ಯಕ್ತಪಡಿಸಿದರು. ಅಧಿಕಾರಕ್ಕೇರಿದ ಅಲ್ಪಾವಧಿಯಲ್ಲಿಯೇ ದೊರೆ ಸಲ್ಮಾನ್ ಅವರ ಸಾಧನೆಗಳನ್ನು ಯುವರಾಜ ಖಾಲಿದ್ ಶ್ಲಾಘಿಸಿದರು.
ಮಕ್ಕಾದ ಆಡಳಿತವು ಯುವಜನತೆಗಾಗಿ ಈ ವರ್ಷ ಮಹತ್ವಾಕಾಂಕ್ಷಿ ಯೋಜನೆಯೊಂದನ್ನು ಹಮ್ಮಿಕೊಂಡಿರುವುದಾಗಿ ಅವರು ತಿಳಿಸಿದರು. ಮಕ್ಕಾ ಯುವಜನ ವೇದಿಕೆಯು, ಎಲ್ಲಾ ಯುವಜನ ಚಟುವಟಿಕೆಗಳ ಮಾತೃಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದೆಯೆಂದು ಅವರು ಪ್ರಕಟಿಸಿದರು.
ಸೌದಿಯ 17 ಪ್ರಾಂತಗಳಲ್ಲಿ 150ಕ್ಕೂ ಅಧಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಪುರುಷರು ಹಾಗೂ ಮಹಿಳೆಯರು ಸೇರಿದಂತೆ 10 ಲಕ್ಷಕ್ಕೂ ಅಧಿಕ ಮಂದಿಯನ್ನು ಈ ಯೋಜನೆಯಲ್ಲಿ ಪಾಲ್ಗೊಳ್ಳುವಂತೆ ಮಾಡುವ ಗುರಿಯನ್ನು ಹೊಂದಲಾಗಿದೆ. ‘ಮಕ್ಕಾ ಯೂತ್ ಸೊಸೈಟಿ ಫಾರ್ ವಾಲಂಟರಿ ವರ್ಕ್’ ಸಂಸ್ಥೆಯು ದೇಶದ ಪ್ರಪ್ರಥಮ ಪರಿಣತ ಸ್ವಯಂಸೇವಾ ಸಂಸ್ಥೆಯಾಗಿರುವುದರಿಂದ, ಆದರ ಮೂಲಕ ಸ್ವಯಂಸೇವಾಚಟುವಟಿಕೆಗಳನ್ನು, ಯುವಜನರು ನಡೆಸಿಕೊಡಲಿದ್ದಾರೆಂದು ಅವರು ತಿಳಿಸಿದರು
‘ತಕ್ಫೀರ್ಗೆ ಇಲ್ಲ ಎನ್ನಿ, ಚಿಂತನೆಗೆ ಹೌದೆನ್ನಿ’, ಅನೈತಿಕತೆ ಧಿಕ್ಕರಿಸಿ, ಸುಧಾರಣೆ ಸ್ವಾಗತಿಸಿ’ ಎಂಬ ಘೋಷಾವಾಕ್ಯದೊಂದಿಗೆ ದೇಶದ ಮುದ್ರಾ ಅಭಿಯಾನವನ್ನು ನಾವು ಆರಂಭಿಸಲಿದ್ದೇವೆ ಎಂದು ಯುವರಾಜ ಖಾಲಿದ್ ತಿಳಿಸಿದರು. ಯುವಜನತೆ ಅಳವಡಿಸಿಕೊಳ್ಳಬೇಕಾದ ವೌಲ್ಯಗಳ ಕುರಿತ ಅಭಿಯಾನವನ್ನು ಕೂಡಾ ಎಲ್ಲಾ ಪ್ರಾಂತಗಳಲ್ಲಿ ಆರಂಭಿಸಲಾಗುವುದೆಂದು ಅವರು ತಿಳಿಸಿದರು.
ಮಕ್ಕಾ ಪ್ರಾಂತದಾದ್ಯಂತ ಯುವಜನರ ಕಾರ್ಯಕ್ರಮಗಳಿಗೆ ಪ್ರಾಯೋಜಕತ್ವ ನೀಡಿದವರನ್ನು ಹಾಗೂ ಯುವಜನ ಕಾರ್ಯಕ್ರಮಗಳ ಬಗ್ಗೆ ಕಾಳಜಿ ವಹಿಸಿರುವವರನ್ನು ಅವರು ಈ ಸಂದರ್ಭದಲ್ಲಿ ಶ್ಲಾಘಿಸಿದರು. ಸರಕಾರಿ ಹಾಗೂ ಖಾಸಗಿ ವಲಯಗಳ ಪಾಲುದಾರಿಕೆಯೊಂದಿಗೆ ಪ್ರಾಂತದ ಯುವಜನರ ಅಭಿವೃದ್ಧಿಗೆ ನೆರವಾಗುವ ಸಮಗ್ರ ವ್ಯವಸ್ಥೆಯೊಂದನ್ನು ರೂಪಿಸಲು ಸಚಿವಾಲಯವು ಯೋಜನೆಗಳನ್ನು ಹೊಂದಿರುವುದಾಗಿ ಅವರು ತಿಳಿಸಿದರು.
ಸೃಜನಶೀಲ ಉಪಕ್ರಮಗಳು ಹಾಗೂ ಅಸಾಂಪ್ರದಾಯಿಕ ಚಿಂತನೆಗಳ ಮೂಲಕ ತಮ್ಮ ಧರ್ಮಕ್ಕೆ ಹಾಗೂ ತಾಯ್ನೆಡಿಗೆ ಸೇವೆ ಸಲ್ಲಿಸಲು ಯುವಜನರು ಆಸಕ್ತರಾಗಿದ್ದಾರೆಂದು ಯುವರಾಜ ಖಾಲಿದ್ ಹೇಳಿದರು.







