ಬಾಲಕಾರ್ಮಿಕನ ಅಸಹಜ ಸಾವು: ಪೊಲೀಸ್ ಠಾಣೆಮುಂದೆ ಊರವರ ನೇತೃತ್ವದಲ್ಲಿ ಪ್ರತಿಭಟನೆ

ಅಲಾಹಾಬಾದ್ : ಯಮುನಾಪಾರ್ ಘೂರ್ಪುರ್ನಲ್ಲಿ ಹದಿನಾಲ್ಕುವರ್ಷದ ಬಾಲಕಾರ್ಮಿಕನೊಬ್ಬನ ಸಾವು ಸಂಭವಿಸಿದೆ. ಉದ್ರಿಕ್ತ ಕುಟುಂಬಿಕರು ಹಾಗೂ ಊರವರು ಬಾಲಕನ ಶವವನ್ನು ಘೂರ್ಪುರ್ ಠಾಣೆ ಮುಂದೆ ಇಟ್ಟು ಪ್ರತಿಭಟನೆ ನಡೆಸಿದರು. ಇದರಿಂದಾಗಿ ಕೆಲವು ಗಂಟೆಗಳ ಕಾಲ ರಸ್ತೆತಡೆಉಂಟಾಗಿತ್ತು. ವಿಷಯ ತಿಳಿದು ಯಮುನಾಪಾರ್ ಎಸ್ಪಿ ಹಾಗೂಸರ್ಕಲ್ ಇನ್ಸ್ ಪೆಕ್ಟರ್ ನೇತೃತ್ವದ ಪೊಲೀಸರ ತಂಡ ಬಂದು ಪರಿಸ್ಥಿತಿ ತಿಳಿಗೊಳಿಸಿದ ಮೇಲೆ ವಾಹನ ಸಂಚಾರ ಸುಗಮ ಗೊಂಡಿತು. ಬಾಲಕಾರ್ಮಿಕ ರೋಹಿತ್ ಕುಮಾರ್(14)ವಿದ್ಯುತ್ಶಾಕ್ನಿಂದ ಮೃತನಾಗಿದ್ದ ಎಂದು ವರದಿಯಾಗಿದೆ. ಘೂರ್ಪುರ್ನ ಚಿತೌರಿ ಗ್ರಾಮದ ವೈಕುಂಠಲಾಲ್ ಕಾರ್ಮಿಕನಾಗಿದ್ದಾನೆ. ಅವನ ಐವರು ಮಕ್ಕಳಲ್ಲಿ ಮೃತ ಬಾಲಕ ರೋಹಿತ್ ಕಿರಿಯವನಾಗಿದ್ದು ಸುಮಾರು ಹತ್ತು ದಿನಗಳ ಮೊದಲು ಅವನಿಗೆ ಕೆಲಸಕೊಡಿಸುವುದಾಗಿ ಗ್ರಾಮದ ಇಬ್ಬರು ವಾರಣಾಸಿಗೆ ಕರೆದು ಕೊಂಡು ಹೋಗಿದ್ದರು. ಅವನನ್ನು ವಾರಣಾಸಿಯಲ್ಲಿ ವೆಲ್ಡಿಂಗ್ ಕೆಲಸಕ್ಕೆ ನಿಲ್ಲಿಸಿದ್ದರು. ಮೂರು ದಿವಸ ಮೊದಲು ವೆಲ್ಡಿಂಗ್ ಮಾಡುವ ವೇಳೆ ರೋಹಿತ್ನಿಗೆ ವಿದ್ಯತ್ತಾಘಾತವಾಗಿತ್ತು. ಆಸ್ಪತ್ರೆಗೆ ಸೇರಿಸಿದ್ದರೂ ಅವನು ಬದುಕಿ ಉಳಿಯಲಿಲ್ಲ. ಶುಕ್ರವಾರ ರೋಹಿತ್ನ ಮೃತದೇಹವನ್ನು ಮನೆಗೆ ತರಲಾಗಿತ್ತು. ಇದರಿಂದ ಕುಪಿತರಾದ ಗ್ರಾಮೀಣರು ಶವವನ್ನು ತಂದು ಘೂರ್ಪುರ್ ಪೊಲೀಸ್ ಠಾಣೆಯ ಮುಂದೆ ರಸ್ತೆಯಲ್ಲಿಟ್ಟು ಪ್ರತಿಭಟನೆ ಆರಂಭಿಸಿದರು. ರೋಹಿತ್ನನ್ನು ಹತ್ಯೆಗೈಯಲಾಗಿದೆ ಎಂದು ಆರೋಪಿಸುತ್ತಿದ್ದರು. ಪೊಲೀಸ್ ಅಧಿಕಾರಿಗಳು ರೋಹಿತ್ನ ಮನೆಯವರಿಗೆ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವುದಾಗಿ ಭರವಸೆ ನೀಡಿದ ಮೇಲೆ ಅವರು ಶಾಂತವಾದರು. ಅಸಹಜ ಸಾವು ಪ್ರಕರಣ ದಾಖಲಿಸಿ ಅಭಿಷೇಕ್, ರಾಜೇಂದ್ರ,ಶಿವಾನಿ ಮತ್ತು ವೆಲ್ಡಿಂಗ್ ಸಂಸ್ಥೆ ಮಾಲಕ ಬ್ರಜೇಂದ್ರ ರಾಯ್ ವಿರುದ್ಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ





