ಮುಖ್ಯಮಂತ್ರಿಯಾಗಿ ಮೋದಿ ಮಾಡಿದ್ದ ಎಲ್ಲ ಸರಕಾರಿ ಭೂಮಿ ಹಂಚಿಕೆಗಳ ಸಿಟ್ ತನಿಖೆಗೆ ಕಾಂಗ್ರೆಸ್ ಆಗ್ರಹ

ಹೊಸದಿಲ್ಲಿ,ಫೆ.6: ಗುಜರಾತ್ ಭೂ ಹಗರಣ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಪೇಚಿಗೆ ಸಿಲುಕಿಸಲು ಮುಂದಾಗಿರುವ ಕಾಂಗ್ರೆಸ್ ಪಕ್ಷವು, ಈ ಹಗರಣ ಕುರಿತು ಸರ್ವೋಚ್ಚ ನ್ಯಾಯಾಲಯದ ಉಸ್ತುವಾರಿಯಲ್ಲಿ ವಿಶೇಷ ತನಿಖಾ ತಂಡದಿಂದ ತನಿಖೆಯಾಗಬೇಕೆಂಬ ತನ್ನ ಆಗ್ರಹವನ್ನು ಶನಿವಾರ ಇನ್ನಷ್ಟು ತೀವ್ರಗೊಳಿಸಿದೆ. ಮೋದಿಯವರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಮತ್ತು ಆನಂದಿ ಬೆನ್ ಪಟೇಲ್ ಅವರು ಕಂದಾಯ ಸಚಿವರಾಗಿದ್ದ ಅವಧಿಯಲ್ಲಿ ಮಾಡಲಾಗಿದ್ದ ಎಲ್ಲ ಸರಕಾರಿ ಭೂ ಹಂಚಿಕೆಗಳ ಕುರಿತೂ ಅದು ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಪ್ರತಿಪಾದಿಸಿದೆ.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ಹಿರಿಯ ವಕ್ತಾರ ಆನಂದ ಶರ್ಮಾ ಅವರು ಈ ಒತ್ತಾಯವನ್ನು ಮಾಡಿದರು.
ಮೋದಿಯವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅಗತ್ಯ ವಿಧಿವಿಧಾನಗಳನ್ನು ಅನುಸರಿಸದೆ ಕಾರ್ಪೊರೇಟ್ ಕುಳಗಳಿಗೆ ಜುಜುಬಿ ಬೆಲೆಗಳಲ್ಲಿ ಮಾರಾಟ ಮಾಡುವ ಮೂಲಕ ಸರಕಾರಿ ಭೂಮಿ ಮತ್ತು ಅರಣ್ಯಭೂಮಿಯನ್ನು ಕೊಳ್ಳೆ ಹೊಡೆಯಲಾಗಿದೆ ಎಂದು ಅವರು ಆಪಾದಿಸಿದರು.
ಈ ವಿಷಯದಲ್ಲಿ ಪ್ರಾಮಾಣಿಕತೆಯನ್ನು ಪ್ರದರ್ಶಿಸುವಂತೆ ಮೋದಿಯವರಿಗೆ ಸೂಚಿಸಿದ ಶರ್ಮಾ,ತನ್ನ ಪುತ್ರಿ ಅನಾರ್ ಪಟೇಲ್ ಜೊತೆ ನಿಕಟ ವ್ಯವಹಾರ ಸಂಪರ್ಕಗಳನ್ನು ಹೊಂದಿರುವ ಕಂಪನಿಗೆ ಗಿರ್ ಸಿಂಹಧಾಮದ ಬಳಿ ಸರಕಾರಿ ಭೂಮಿಯನ್ನು ಮಂಜೂರು ಮಾಡುವಾಗ ಆಗಿನ ಕಂದಾಯ ಸಚಿವೆ ಆನಂದಿ ಬೆನ್ ಪಟೇಲ್ ಅವರ ‘‘ಹಿತಾಸಕ್ತಿಗಳ ಸ್ಪಷ್ಟ ಸಂಘರ್ಷ’’ದ ಅರಿವು ಮೋದಿಯವರಿಗೆ ಇತ್ತೇ ಎನ್ನುವುದನ್ನು ತಿಳಿಯಲು ಬಯಸಿದರು.
ಈ ಭೂ ಹಂಚಿಕೆ ಸಂಪುಟದ ನಿರ್ಧಾರವನ್ನು ಆಧರಿಸಿತ್ತೇ ಮತ್ತು (ಆಗಿನ) ಮುಖ್ಯಮಂತ್ರಿ(ಮೋದಿ)ಗಳ ಒಪ್ಪಿಗೆಯಿತ್ತೇ ಎಂದು ಅವರು ಪ್ರಶ್ನಿಸಿದರು. ಈ ಸರಕಾರಿ ಭೂಮಿಗೆ ಸೂಕ್ತ ವೌಲ್ಯಮಾಪನವನ್ನು ಮಾಡಲಾಗಿತ್ತೇ ಎಂದೂ ಅವರು ತಿಳಿಯಲು ಬಯಸಿದರು.
ಗುಜರಾತ್ ಸರಕಾರವು 2010ರಲ್ಲಿ ಗಿರ್ ಸಿಂಹಧಾಮದ ಬಳಿಯ 250 ಎಕರೆ ಭೂಮಿಯನ್ನು ಪ್ರತಿ ಎಕರೆಗೆ 60,000 ರೂ.ನಂತೆ ವೈಲ್ಡ್ವುಡ್ಸ್ ರೆಸಾರ್ಟ್ಸ್ ಆ್ಯಂಡ್ ರಿಯಾಲ್ಟೀಸ್ಗೆ ಮಂಜೂರು ಮಾಡಿತ್ತು.
ಪ್ರಶೆಯೊಂದಕ್ಕೆ ಉತ್ತರಿಸಿದ ಶರ್ಮಾ,ಈ ವಿಷಯವು ‘‘ಭ್ರಷ್ಟಾಚಾರವನ್ನು ತಾನು ಎಳ್ಳಷ್ಟೂ ಸಹಿಸುವುದಿಲ್ಲ’’ಎಂದು ಹೇಳಿಕೊಂಡಿರುವ ಪ್ರಧಾನಿಗೆ ನೇರವಾಗಿ ಸಂಬಂಧಿಸಿರುವುದರಿಂದ ಸಂಸತ್ತಿನ ಮುಂಗಡಪತ್ರ ಅಧಿವೇಶನದಲ್ಲಿ ಖಂಡಿತವಾಗಿಯೂ ಇದನ್ನೆತ್ತಲಾಗುವುದು ಎಂದು ತಿಳಿಸಿದರು.
ಸಿಟ್ ರಚನೆಯ ಜೊತೆಗೆ ಮುಖ್ಯಮಂತ್ರಿ ಆನಂದಿ ಬೆನ್ ಪಟೇಲ್ ಅವರ ರಾಜೀನಾಮೆಗೂ ಕಾಂಗ್ರೆಸ್ ಈಗಾಗಲೇ ಆಗ್ರಹಿಸಿದೆ.







