ನೋಡುವರು ಮಾಡುವರು
![ನೋಡುವರು ಮಾಡುವರು ನೋಡುವರು ಮಾಡುವರು](https://www.varthabharati.in/sites/default/files/images/articles/2016/02/8/two-caucasian-and-two-african-american-children-playing-together-725x483-640x426.jpg)
ಪೋಷಕರು ಮತ್ತು ಶಿಕ್ಷಕರು ಮಕ್ಕಳು ನೋಡುತ್ತಿದ್ದಾರೆ ಎಂಬ ಪರಿವೇ ಇಲ್ಲದೆ ಆಡುವ ಮಾತುಗಳು ಮತ್ತು ನಡೆದುಕೊಳ್ಳುವ ರೀತಿಗಳು, ಅದರಲ್ಲೂ ಕ್ರಿಯೆ ಮತ್ತು ಪ್ರತಿಕ್ರಿಯೆಗಳು ಮಕ್ಕಳ ಮೇಲೆ ನೇರಾನೇರ ಪ್ರಭಾವವನ್ನು ಬೀರುವುದು. ಮಾತ್ರವಲ್ಲದೆ, ಅವರ ಸೂಕ್ಷ್ಮ ಮನಸ್ಸಿನಲ್ಲಿ ಅದು ಅವರ ವ್ಯಕ್ತಿತ್ವದ ಭಾಗವಾಗಿ ರೂಪುಗೊಳ್ಳುವ ಸಾಧ್ಯತೆಗಳಿರುತ್ತವೆ.
ಮೌಢ್ಯಾಚರಣೆ,
ಇನ್ನು ಬಿಡಿ, ಯಂತ್ರ ಮಂತ್ರ ತಂತ್ರ ಮನೆದೇವರು ಹರಕೆ ಇತ್ಯಾದಿಗಳನ್ನೆಲ್ಲಾ ಚಾಚೂ ತಪ್ಪದೇ ಮಾಡುವ ಮನೆಯವರ ಮಾದರಿಗಳಂತೂ ಮಕ್ಕಳನ್ನು ವೈಚಾರಿಕತೆ, ವೈಜ್ಞಾನಿಕತೆ ಮತ್ತು ಮನದೊಳಗೆ ಬಿತ್ತುವ ಸೂಕ್ಷ್ಮ ಭಯಗಳ ನಡುವೆ ಹರಿದು ಚಿಂದಿ ಚಿಂದಿ ಮಾಡಿಬಿಡುತ್ತವೆ. ಯಾವುದೇ ವಿಷಯವನ್ನು ಸ್ಪಷ್ಟವಾಗಿ ನೋಡಲೇ ಆಗದಂತಹ ಮನಸ್ಥಿತಿಯುಳ್ಳವರಾಗಿ ಎಲ್ಲವನ್ನೂ ಅಂದಾಜು ಗ್ರಹಿಕೆಯ ಭಾವನಾತ್ಮಕವಾದಂತಹ ಭಯ ಮತ್ತು ಅನುಮಾನಗಳಲ್ಲೇ ಅಳೆಯುತ್ತಿರುತ್ತಾರೆ. ತಾವು ವಿಜ್ಞಾನಗಳಲ್ಲಿ ಓದುವುದೂ ಮತ್ತು ಮನೆಗಳಲ್ಲಿ ತಂದೆ ತಾಯಿಗಳು ನಡೆದುಕೊಳ್ಳುವುದೂ ಯಾವುದೂ ತಾಳೆಯಾಗದೆ ಅತಂತ್ರ ಸ್ಥಿತಿಯಲ್ಲೇ ಬದುಕುವ, ಚಿಂತಿಸುವ ಅನಿವಾರ್ಯತೆ ಮಕ್ಕಳಿಗೆ ಒದಗುತ್ತದೆ. ಈಗಲೂ ನನ್ನ ವೈಚಾರಿಕ ಪುಸ್ತಕಗಳನ್ನು ಓದಿದ ನಂತರ ಭೇಟಿ ಮಾಡುವ ಯುವಕರು ಮತ್ತು ಹಿರಿಯರು ನನ್ನ ಸಂಧಿಸಿದಾಗ ಹೇಳುವುದೇನೆಂದರೆ, ನೀವು ಹೇಳಿರುವ ವಿಷಯಗಳು ಅರ್ಥವಾಗುತ್ತವೆ. ಆದರೆ ಮೊದಲಿಂದಲೂ ಒಂದು ಥರಾ ಭಯ ಬೆಳೆದು ಬಂದು ಬಿಟ್ಟಿದೆ ಸರ್ ಎಂದು ತಂದೆ ತಾಯಿಯರನ್ನು ತಮ್ಮ ವೈಚಾರಿಕತೆಯ ಕೊರತೆಯ ಕಾರಣಕರ್ತರು ಎಂದು ದೂರುತ್ತಾರೆ. ಆಗ ನಾನು ಅವರಿಗೆ ಹೇಳುವುದು, ಹೋಗಲಿ ಬಿಡಿ. ಇನ್ನು ನಿಮ್ಮ ಮಕ್ಕಳು ನಿಮ್ಮನ್ನು ಹೀಗೆ ದೂರುವಂತೆ ಮಾಡಬೇಡಿ. ಅವೈಚಾರಿಕತೆ, ವಿಷಯಗಳಲ್ಲಿ ಅಸ್ಪಷ್ಟತೆ, ಸುಪ್ತ ಭಯಗಳ ಕಾಯಿಲೆಗಳ ಪರಂಪರೆಯ ಕೊಂಡಿ ನಿಮ್ಮ ಪೀಳಿಗೆಗೆ ತುಂಡರಿಸಿಕೊಳ್ಳಲಿ. ನಿಮ್ಮ ಮಗುವಿನ ಪೀಳಿಗೆಗೂ ಮುಂದುವರಿಯದಿರಲಿ.
ಕಾಯುವ ಕಣ್ಣುಗಳು
ಸಿಸಿ ಕ್ಯಾಮ್ಗಳು ಬರಿದೇ ನೋಡಿ ದಾಖಲಿಸಿಕೊಳ್ಳುತ್ತವೆ. ಬೇಕಾದವರು, ಬೇಕಾದಾಗ ರೆಕಾರ್ಡ್ ಆಗಿರುವುದನ್ನು ಹೆಕ್ಕಿಕೊಳ್ಳಬಹುದು. ಪೋಷಕರು ಮತ್ತು ಶಿಕ್ಷಕರನ್ನು ನೋಡುವ ಮಕ್ಕಳ ಕಣ್ಣುಗಳೂ ಕೂಡ ಅದೇ ರೀತಿಯಲ್ಲಿ ನೋಡುತ್ತವೆ. ಆದರೆ ಬರಿದೇ ದಾಖಲಿಸಿಕೊಳ್ಳುವುದಿಲ್ಲ. ಬೇಕಾದಾಗ ಮಾತ್ರ ಉದ್ದೇಶಪೂರ್ವಕವಾಗಿ ಯಾರೋ ಹುಡುಕಿದರೆ ಸಿಗುವುದಂತಲ್ಲ. ಸೂಕ್ಷ್ಮವಾಗಿ ರೆಕಾರ್ಡ್ ಆಗುತ್ತವೆ ಮತ್ತು ತಮಗೇ ಗೊತ್ತಿಲ್ಲದಂತೆ ವ್ಯಕ್ತಿತ್ವದ ಭಾಗವಾಗಿಬಿಡುತ್ತದೆ. ಅದನ್ನು ಇಡೀ ಸಮಾಜದಲ್ಲಿ ತನ್ನ ವ್ಯಕ್ತಿತ್ವದ ಭಾಗವಾಗಿ ಕಾಣ್ಕೆಯನ್ನೋ ಅಥವಾ ಕೆಡುಕನ್ನೋ ನೀಡುತ್ತದೆ. ಪೋಷಕರು ಮತ್ತು ಶಿಕ್ಷಕರು ಮಕ್ಕಳು ನೋಡುತ್ತಿದ್ದಾರೆ ಎಂಬ ಪರಿವೇ ಇಲ್ಲದೆ ಆಡುವ ಮಾತುಗಳು ಮತ್ತು ನಡೆದುಕೊಳ್ಳುವ ರೀತಿಗಳು, ಅದರಲ್ಲೂ ಕ್ರಿಯೆ ಮತ್ತು ಪ್ರತಿಕ್ರಿಯೆಗಳು ಮಕ್ಕಳ ಮೇಲೆ ನೇರಾನೇರ ಪ್ರಭಾವವನ್ನು ಬೀರುವುದು. ಮಾತ್ರವಲ್ಲದೆ, ಅವರ ಸೂಕ್ಷ್ಮ ಮನಸ್ಸಿನಲ್ಲಿ ಅದು ಅವರ ವ್ಯಕ್ತಿತ್ವದ ಭಾಗವಾಗಿ ರೂಪುಗೊಳ್ಳುವ ಸಾಧ್ಯತೆಗಳಿರುತ್ತವೆ. ಹಾಗಾಗಿ, ಆಡುವ ನೋಡುವ ಮಾಡುವ ಕೇಳುವ; ಯಾವುದೇ ವಿಷಯದಲ್ಲಿ ಮಕ್ಕಳು ಎದುರಿಗೆ ಇದ್ದಾರೆಂದರೆ ಪೋಷಕರು ಮತ್ತು ಶಿಕ್ಷಕರು; ಅಥವಾ ಯಾರೇ ಆಗಲಿ ಹೈ ಅಲರ್ಟ್ ಆಗಬೇಕು.
ವೀಡಿಯೊ ಗೇಮ್ ಮತ್ತು ಮೊಬೈಲ್ಗಳು ಇತ್ತೀಚಿನ ದಿನಗಳಲ್ಲಿ ನನ್ನ ಸಂಪರ್ಕಕ್ಕೆ ಬರುವ ಬಹುಪಾಲು ಕಿರಿಯ ವಯಸ್ಸಿನ ಮಕ್ಕಳ ಪೋಷಕರು ಹೇಳುವುದೇನೆಂದರೆ, ನೆಟ್ಟಗೆ ಕೂತುಕೊಳ್ಳಲೂ ಆಗದ ನನ್ನ ಮಗುವಿನ ಕೈಗೆ ಮೊಬೈಲ್ ಕೊಟ್ಟರೇನೇ ಸುಮ್ಮನಾಗುವುದು. ಇಲ್ಲಾಂದ್ರೆ ಅಳುತ್ತಾ ರಂಪಾಟ ಮಾಡುತ್ತಾನೆ ಎಂದು ನಗುತ್ತಾರೆ. ಈಗಲೇ ಅವನಿಗೆ ಮೊಬೈಲ್ ಬೇಕು, ಅದರಲ್ಲಿ ಕಾಣುವ ಬೆಳಕನ್ನು ನೋಡುವುದು ಅವನ ಕ್ರೀಡೆ ಎಂಬರ್ಥದಲ್ಲಿ ಮಾತಾಡುವ ಅವರಿಗೆ ತಾವೆಂತಹ ತಪ್ಪನ್ನು ಮಾಡುತ್ತಿದ್ದೇವೆ ಎಂಬ ಅರಿವೇ ಇರುವುದಿಲ್ಲ. ಅದೇ ರೀತಿ ಏನು ನೋಡುತ್ತಿದ್ದೇವೆ ಎಂಬ ಅರಿವೂ ಇಲ್ಲದೆ ಸುಮ್ಮನೆ ಟಿವಿ ನೋಡುವ ಮಕ್ಕಳನ್ನೂ ಇಲ್ಲಿ ಪರಿಗಣಿಸೋಣ. ಮೊದಲನೆಯದಾಗಿ ಮಗುವಿಗೆ ಅನೈಸರ್ಗಿಕವಾದ ನೋಟದ ಬಗೆಯನ್ನು ರೂಢಿಗೊಳಿಸುವುದು ಇದಾಗುತ್ತದೆ. ಹೇಗೆಂದರೆ, ನಿಸರ್ಗದಲ್ಲಿ ಸ್ವಾಭಾವಿಕವಾಗಿ ನೋಡುವ ಬಗೆಯೆಂದರೆ (ಕಣ್ಣಿನ ಆರೋಗ್ಯದ ದೃಷ್ಟಿಯಿಂದ) ನಾವು ನೋಡುವ ವಸ್ತುವಿನ ಮೇಲೆ ಬೆಳಕು ಬೀಳಬೇಕು, ಆ ಬೆಳಕಿನಲ್ಲಿ ಕಾಣುವ ವಸ್ತುವನ್ನು ಕಣ್ಣು ಗ್ರಹಿಸುತ್ತದೆ. ಆದರೆ, ಮೊಬೈಲ್ ಮತ್ತು ಟಿವಿಗಳಲ್ಲಿಯೇ ಬೆಳಕಿನ ಮೂಲವಿದ್ದು, ನೋಡುವ ವಸ್ತು ಮತ್ತು ಬೆಳಕಿನ ಮೂಲ ಒಂದೇ ಆಗಿದ್ದು, ನೋಡುವ ಬಗೆ ಸ್ವಾಭಾವಿಕವಾಗಿರುವುದಿಲ್ಲ. ಅದೇ ಅಭ್ಯಾಸವಾಗಿ, ನಂತರ ಸ್ವಾಭಾವಿಕವಾಗಿರುವಂತಹ ವಸ್ತುಗಳನ್ನು ನೋಡುವುದರಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುವುದರ ಜೊತೆಗೆ, ಪುಸ್ತಕವನ್ನು ಓದುವುದು, ಸೃಜನಶೀಲ ಕಲೆಗಳಾದ ಚಿತ್ರಕಲೆ, ಶಿಲ್ಪಕಲೆ ಇತ್ಯಾದಿಗಳನ್ನು ಆನಂದಿಸುವುದು; ಹೀಗೆ ಕ್ರಮೇಣ ನಿರಾಸಕ್ತಿ ತಾಳಲಾರಂಭಿಸುತ್ತಾರೆ. ಏಕೆಂದರೆ ಟಿವಿ ಮತ್ತು ಮೊಬೈಲುಗಳಲ್ಲಿ ಬೆಳಕನ್ನು ಹೊರಸೂಸುತ್ತಾ ವಸ್ತುಗಳನ್ನು ತೋರಿಸುವಂತೆ, ಹೊರಗಿನ ಇತರ ವಸ್ತುಗಳು ಬೆಳಕನ್ನು ಸೂಸುವುದಿಲ್ಲ. ಸತತವಾಗಿ ಪ್ರತಿಯೊಂದಕ್ಕೂ ಕಂಪ್ಯೂಟರ್, ಟಿವಿ, ಮೊಬೈಲ್ ಇತ್ಯಾದಿಗಳನ್ನು ನೋಡುವವರಿಗೆ ಬರಿಯ ಕಣ್ಣಿನ ದೋಷದ ಬಗೆಗಿನದಲ್ಲ ನನ್ನ ಕಾಳಜಿ, ಮಾನಸಿಕವಾಗಿ ಅವುಗಳಿಗೇ ಒಗ್ಗಿಹೋಗಿ ನಂತರ ಇತರ ನೈಸರ್ಗಿಕ ವಿಷಯಗಳಲ್ಲಿ ಹೊರತಾಗಿಬಿಡುವುದು. ಇನ್ನು ಮಕ್ಕಳ ಸೃಜನಶೀಲತೆ ಮತ್ತು ಬೆಳವಣಿಗೆಯ ವಿಷಯದಲ್ಲಂತೂ ಇದಂತೂ ಘೋರ ಪರಿಣಾಮಗಳನ್ನೇ ಬೀರುತ್ತದೆ. ಮೊದಲು ನನ್ನ ಮಗು ಮೊಬೈಲ್ ಅಥವಾ ಟಿವಿ ಇಲ್ಲದೇ ಊಟ ಮಾಡುವುದಿಲ್ಲ, ಮಲಗುವುದಿಲ್ಲ ಎಂಬ ತಾವೇ ಸೃಷ್ಟಿಸಿರುವಂತಹ ಅನಿವಾರ್ಯತೆಗಳನ್ನು ಪೋಷಕರು ನಾಶ ಮಾಡಲೇ ಬೇಕು. ಇನ್ನು ಅದನ್ನು ಬಳಸುತ್ತಿರುವವರು ತಾವು, ತಮ್ಮನ್ನು ನೋಡಿಯೇ ಮಕ್ಕಳು ಅದಕ್ಕೆ ಆಕರ್ಷಿತರಾಗುವುದು ಎಂಬ ಸಾಮಾನ್ಯ ಗ್ರಹಿಕೆಯೂ ಇಲ್ಲದೆ, ಅದನ್ನು ಸತತವಾಗಿ ಮಕ್ಕಳ ಮುಂದೆ ಬಳಸುತ್ತಲೇ ಇರುವವರ ಬಗ್ಗೆ ನಿಜಕ್ಕೂ ಬೇಸರವಾಗುತ್ತದೆ. ಮಗುವಾಗಲಿ, ಅಥವಾ ಯಾವುದೇ ಪ್ರಾಣಿಯಾಗಲಿ, ಸ್ವಾಭಾವಿಕವಾಗಿ ಬೆಳಕಿನ ಕಡೆಗೆ ಆಕರ್ಷಿತವಾಗುತ್ತದೆ. ಅದರಲ್ಲೂ ಬೆಳಕು ಮತ್ತು ಅದರಲ್ಲಿ ಚಲಿಸುವಂತದ್ದು ಇದ್ದರೆ ತೀರಾ ಸೆಳೆತ. ಹಾಗಾಗಿಯೇ ಕೀ ಕೊಟ್ಟು ನಡೆಸುವ ಗೊಂಬೆಗಳು, ಬ್ಯಾಟರಿ ಹಾಕಿ ನಡೆಸುವ ಗೊಂಬೆಗಳೆಲ್ಲಾ ಮಕ್ಕಳಿಗೆ ಸಹಜವಾಗಿಯೇ ಆಕರ್ಷಕ. ಆದರೆ, ಮಗುವು ಅತ್ತಾಗ, ಅದನ್ನು ನಿಭಾಯಿಸಲಾಗದೆ ಅದರ ಕೈಗೆ ಮೊಬೈಲ್ ಕೊಡುವುದಾಗಲಿ, ಅಥವಾ ಟಿವಿ ಆನ್ ಮಾಡಿ ಅದರ ಮುಂದೆ ಕೂರಿಸುವುದಾಗಲಿ ಮಾಡುವ ಪೋಷಕರು ಮುಂದೆ ತಮ್ಮ ಮಗುವು, ಜಗತ್ತಿನ ಬೇರೆ ಕೆಲಸಗಳಿರಲಿ, ತಮ್ಮದೇ ಕೆಲಸದಲ್ಲೂ ನಿರಾಸಕ್ತರಾಗಿ, ಕ್ರಿಯಾಶೂನ್ಯರಾಗಿ ಕುಳಿತುಕೊಳ್ಳುವುದನ್ನು ನೋಡಬೇಕಾಗುತ್ತದೆ. ಇನ್ನು ಸೃಜನಶೀಲತೆ, ಕ್ರಿಯಾಶೀಲತೆ ಎಲ್ಲಾ ದೂರದ ಮಾತು. ಅವರು ಟಿವಿ, ಕಂಪ್ಯೂಟರ್, ವೀಡಿಯೊ ಗೇಮ್ಗಳಲ್ಲಿ ಸೃಜನಶೀಲರಾಗಲೂ ಹೊರಗಿನ ನೈಸರ್ಗಿಕ ಅನುಭವಗಳಾಗಬೇಕು. ನೋಡುವ ಗೀಳಿರುವವರು ಬರೀ ನೋಡಿಕೊಂಡೆ ಇರುತ್ತಾರೆಯೇ ಹೊರತು, ಅದರಂತದ್ದನ್ನೇ ಮತ್ತೊಂದನ್ನು ಮಾಡಿಬಿಡಲು ಆಗುವುದಿಲ್ಲ. ಆಗ ತಾವೇ ಮಕ್ಕಳನ್ನು ಬೈಯುತ್ತಿರುತ್ತಾರೆ. ಯಾವಾಗಲೂ ಮೊಬೈಲ್ ಹಿಡಿದುಕೊಂಡು, ಟಿವಿ ನೋಡಿಕೊಂಡು ಕುಳಿತಿರುತ್ತಾರೆಂದು. ಆದರೆ ಅದೇ ಪ್ರಪಂಚ ಎಂದು ಮಾಡಿದವರು ತಾವೇ ಎಂಬುದನ್ನು ಮರೆತೇ ಹೋಗಿರುತ್ತಾರೆ.
ವೀಡಿಯೊ ಗೇಮ್ಗಳಲ್ಲಿ ಮೊದಲು ಸರಳವಾದ ಹಂತವಿದ್ದು, ನಂತರ ಹಂತ ಹಂತವಾಗಿ ವೇಗವನ್ನು ಹೆಚ್ಚಿಸಿಕೊಳ್ಳುವಂತಹ ವಿಧಾನಗಳಿವೆ. ಸ್ಪೀಡ್ ಹೆಚ್ಚಾದಷ್ಟು ಥ್ರಿಲ್ ಹೆಚ್ಚು. ಏನೋ ಸಾಧಿಸಿದಂತಹ ಮನಸ್ಥಿತಿ. ಇನ್ನು ವೀಡಿಯೊ ಗೇಮ್ಗಳಲ್ಲಿ ರೇಸ್ ಆಡಿದಂತೆ, ರಾಕ್ಷಸನು ಅಟ್ಟಿಸಿಕೊಂಡು ಬರುವಾಗ ಕೋಟೆ ಕೊತ್ತಲಗಳನ್ನೆಲ್ಲಾ ಹಾರಿ ಹಾರುತ್ತಾ ಹೋಗುವಂತೆ ನಿಜ ಜೀವನದಲ್ಲಿ ವರ್ತಿಸಲು ಆಗುವುದಿಲ್ಲ. ಮೊಬೈಲ್ಗಳಲ್ಲಿರುವ ಥ್ರಿಲ್ಗಳು ನಿಜ ಜೀವನದಲ್ಲಿ ಅವರಿಗೆ ಸಿಗುವುದಿಲ್ಲ. ಅದಕ್ಕೇ ಅವರು ಇನ್ನೇನೋ ಥ್ರಿಲ್ ನೀಡುವಂತಹ ವಿಶೇಷಾನುಭವ ಕೊಡುವಂತಹುದಕ್ಕೆ ಮೊರೆ ಹೋಗುತ್ತಾರೆ. ಅವುಗಳು ಡ್ರ್ಯಾಗ್ ರೇಸಿಂಗ್ ಇರಬಹುದು, ವ್ಹೀಲಿಂಗ್ ಇರಬಹುದು, ಸೂಪರ್ ಸ್ಪೀಡ್ನಲ್ಲಿ ಹೈ ವೇ-ಗಳಲ್ಲಿ ಹೋಗುವುದಿರಬಹುದು, ಎಂಥದ್ದೋ. ಸಣ್ಣ ಸಣ್ಣ ವಿಷಯಗಳಲ್ಲಿ, ದಿನನಿತ್ಯದ ಬದುಕುಗಳಲ್ಲಿ ಆಸಕ್ತಿ ಕಂಡುಕೊಳ್ಳಲಾಗದೆ ಯಾವಾಗಲೂ ಥ್ರಿಲ್ಗಾಗಿ ದೊಡ್ಡ ಪರಿಣಾಮವನ್ನು ಎದುರು ನೋಡುತ್ತಾ ಹೋಗುವುದು, ಡ್ರಗ್ಸ್ ಪ್ರಮಾಣವನ್ನು ಹೆಚ್ಚಿಸಿಕೊಳ್ಳುತ್ತಾ ಹೆಚ್ಚಿನ ಪ್ರಮಾಣದ ನಿಶೆಯನ್ನು ಎದುರು ನೋಡುತ್ತಾ ಹೋಗುವುದಷ್ಟೇ ಅಪಾಯಕಾರಿ. ಅನುಕೂಲಸ್ಥ ಮನೆಯ ಟೀನ್ ಏಜ್ ಮಕ್ಕಳೂ ಕೂಡ ಹತ್ತಾರು ಕಿ.ಮೀ., ನೂರಾರು ಕಿ.ಮೀ. ರಾತ್ರಿಯ ಹೊತ್ತು ಬರೀ ಕಾಫಿ ಕುಡಿಯಲು ಹೋಗುವುದನ್ನು ನೋಡಿದ್ದೇನೆ. ಅವರ ಜೊತೆಗೆ ಮಧ್ಯಮವರ್ಗದ ಮಕ್ಕಳೂ ಸೇರಿಕೊಳ್ಳುತ್ತಾರೆ. ಏಕೆಂದರೆ ಅದು ಕಂಪೆನಿ. ಹೀಗೆ ಹೋಗಿರುವ ನನ್ನದೇ ವಿದ್ಯಾರ್ಥಿನಿಯೊಬ್ಬಳು ಅಪಘಾತಕ್ಕೆ ಒಳಗಾಗಿ ಮೈ ಮೂಳೆಯೆಲ್ಲಾ ಮುರಿದುಕೊಂಡು ಅದೆಷ್ಟೋ ಕಾಲ ನೋವು ಮತ್ತು ದುಮ್ಮಾನಗಳನ್ನು ಅನುಭವಿಸಿದ್ದಳು. ಮಕ್ಕಳು ವೇಗವನ್ನು ಇಷ್ಟಪಡುತ್ತಾರೆಂದು ಲಕ್ಷಾಂತರ ರೂ.ಗಳ ಬೆಲೆಬಾಳುವ ಬೈಕ್ ಕೊಡಿಸಿದ ತಂದೆ ಒಂದೆರೆಡೇ ದಿನಗಳಲ್ಲಿ ತನ್ನ ಮಗನನ್ನು ಶಾಶ್ವತವಾಗಿ ಕಳೆದುಕೊಂಡಿರುವ ಸುದ್ದಿಯನ್ನು ಇತ್ತೀಚೆಗೆ ಕೂಡ ನೋಡಿದ್ದೇವೆ.
ಪೋಷಕರು ಮಕ್ಕಳು ಅತ್ತಾಗ, ಬೇಕೆಂದಾಗೆಲ್ಲಾ ಟಿವಿ ನೋಡಿಸುವುದಾಗಲಿ, ಮೊಬೈಲ್ ಕೊಡುವುದಾಗಲಿ ಮಾಡುವುದಿರಲಿ, ಅವರ ಎದುರು ತಾವು ಅವುಗಳಲ್ಲಿ ಕಳೆದುಹೋಗದಿರುವಂತೆ ಎಚ್ಚರವಹಿಸಬೇಕು. ನನ್ನ ವಿದ್ಯಾರ್ಥಿಯೊಬ್ಬ ಈಗಿನ್ನು ಎಂಟು ತಿಂಗಳ ಮಗುವಿನ ತಂದೆ. ಸರ್, ತುಂಬಾ ಹಟ ಮಾಡ್ತಾನೆ. ನಿಭಾಯಿಸಕ್ಕೇ ಆಗಲ್ಲ. ಮೊಬೈಲ್ ಕೊಟ್ಟರೆ ಸುಮ್ಮನಾಗಿಬಿಡುತ್ತಾನೆ ಎಂದು ತನ್ನ ಮಗ ಮೊಬೈಲ್ ಹಿಡಿದುಕೊಂಡು ನೋಡುತ್ತಾ, ಆಡುತ್ತಾ, ಬಾಯಿಗಿಟ್ಟುಕೊಳ್ಳುವುದನ್ನು ತಾನು ನೋಡುತ್ತಾ ಸಂಭ್ರಮಿಸುತ್ತಾನೆ. ಎಂಟು ತಿಂಗಳ ಮಗುವಿನ ತಿದ್ದುವ ಜವಾಬ್ದಾರಿಯನ್ನೇ ಕೊಡವಿಕೊಳ್ಳುವ ಈ ತಂದೆ ಮುಂದೆ ಬೆಳೆಯುತ್ತಲೇ ಇರುವ ಮಗುವಿನ ಯಾವ ವಯಸ್ಸಿನ ಹಂತದಲ್ಲಿ ಇನ್ನೇನೇನನ್ನು ನಿಯಂತ್ರಿಸಿಯಾನು ಎಂಬುದು ನನ್ನ ಪ್ರಶ್ನೆ. ಹಿರಿಯರ ದೌರ್ಬಲ್ಯ ಮತ್ತು ಬೇಜವಾಬ್ದಾರಿಯುತ ನಡವಳಿಕೆಗಳು, ಅಸೂಕ್ಷ್ಮ ಮನಸ್ಥಿತಿ ಮತ್ತು ಸ್ವಕೇಂದ್ರಿತ ಧೋರಣೆಗಳೇ ಮಕ್ಕಳ ಕರಾಳದಿನಗಳನ್ನು ಸೃಷ್ಟಿಸುವುದು. ಕಾನೂನು ಭಂಗ ಮಾಡುವವರು ಮಕ್ಕಳನ್ನು ಕೂರಿಸಿಕೊಂಡು ವಾಹನ ಚಲಾಯಿಸುವ ಎಷ್ಟೋ ಪೋಷಕರು ಟ್ರ್ಯಾಫಿಕ್ ಸಿಗ್ನಲ್ನಲ್ಲಿ ಕೆಂಪು ದೀಪವು ನಿಲ್ಲಿ ಎಂದು ಹೇಳುತ್ತಿದ್ದರೂ ತಾವು ಬೇಗ ಹೋಗಬೇಕೆಂದೋ ಅಥವಾ ಮತ್ತೊಂದು ಬದಿಯಿಂದ ಯಾರೊಬ್ಬರೂ ಬರುತ್ತಿಲ್ಲವೆಂದೋ ರೊಯ್ಯನೆ ಹೋಗಿಬಿಡುತ್ತಾರೆ. ಶಾಲೆಯಲ್ಲಿ ಮಗುವು ಕಲಿತಿರುತ್ತದೆ. ಕೆಂಪು ಬಂದಾಗ ನಿಲ್ಲಬೇಕು, ಹಸಿರು ಬಂದಾಗ ಹೊರಡಬೇಕು ಎಂದು. ಆದರೆ ತನ್ನ ತಂದೆ ಎಂಬ ಒಬ್ಬ ಸೂಪರ್ ಹೀರೋ ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳುವುದು ಕಾನೂನನ್ನೇನೂ ಪರಿಪಾಲಿಸಬೇಕಿಲ್ಲ ಎಂದು ಗ್ರಹಿಸುವಂತಾಗುತ್ತದೆ. ಅದೇ ರೀತಿ ಒನ್ ವೇ-ನಲ್ಲಿ ಬರುವುದು, ಫುಟ್ಪಾತ್ ಮೇಲೆ ಹತ್ತಿಸುವುದು, ಹೆಲ್ಮೆಟ್ ಇಲ್ಲದೇ ಗಾಡಿ ಓಡಿಸುವುದು, ಅನಗತ್ಯವಾಗಿ ಹಾರ್ನ್ ಮಾಡುವುದು, ಅನಗತ್ಯವಾದ ವೇಗದಲ್ಲಿ ಓವರ್ ಟೇಕ್ ಮಾಡುವುದು; ಇವುಗಳನ್ನೆಲ್ಲಾ ಮಗುವು ಗಮನಿಸದೇ ಇರುವುದಿಲ್ಲ. ಅದಕ್ಕೆ ತಿಳಿಯದಂತೆಯೇ ಕಾನೂನುಭಂಗದ ಪಾಠವಾಗುತ್ತಿರುತ್ತದೆ. ಕಾನೂನುಗಳಿರುವುದು ಎಲ್ಲರಿಗೂ ಅನುಕೂಲವಾಗಲು ಮತ್ತು ಪ್ರತಿಯೊಬ್ಬರೂ ಸುಗಮವಾದ ಸಂಚಾರವನ್ನು ಹೊಂದಬೇಕು ಎಂಬ ಅರಿವು ಮೂಡುವುದು ಯಾವಾಗ? ಇಂದು ನಾವು ನಮ್ಮ ಮಕ್ಕಳ ಮುಂದೆ ಕಾನೂನುಗಳನ್ನು ಪಾಲಿಸದೆ ಇದ್ದ ಪಕ್ಷದಲ್ಲಿ ನಮ್ಮ ಮಕ್ಕಳು ಮುಂದೆ ಕಾನೂನು ಉಲ್ಲಂಘನೆಯ ಕಾರಣವಾಗಿ ಅಪಾರವಾದ ಬೆಲೆಗಳನ್ನು ತೆರಬೇಕಾಗುತ್ತದೆ. ಇದು ಎಲ್ಲಾ ವಿಷಯಗಳಲ್ಲೂ ನಿಜ. ನಮ್ಮ ನಡವಳಿಕೆ, ವರ್ತನೆಗಳಿಂದ ಸರಿಯಾದ ಮಾದರಿಗಳನ್ನು ಮಕ್ಕಳಿಗೆ ಕಟ್ಟಿಕೊಡದಿದ್ದ ಪಕ್ಷದಲ್ಲಿ, ಮುಂದೆ ಇಡೀ ಸಮಾಜ, ಕಾನೂನು ಮತ್ತು ವ್ಯವಸ್ಥೆ ನಮ್ಮ ಮಕ್ಕಳನ್ನು ಶಿಕ್ಷಿಸಲು, ದಂಡಿಸಲು ಮುಂದಾಗುತ್ತವೆ. ಸಮಾಜ ಮತ್ತು ವ್ಯವಸ್ಥೆಯು ಯಾವುದೇ ಅಪರಾಧಿಯನ್ನು ಅನುಕಂಪದಿಂದ ನೋಡುವುದಿಲ್ಲ. ಅವರಿಗೆ ತಪ್ಪು ಕಾಣುತ್ತದೆ ಮತ್ತು ಅದಕ್ಕೆ ಸಂದಾಯವಾಗಲೇಬೇಕಾಗಿರುವ ಶಿಕ್ಷೆ ಕಾಣುತ್ತದೆ. ಆ ಅಪರಾಧಿಯ ಪೋಷಕರು ಮತ್ತು ಮನೆಯವರಿಗೆ ಮಾತ್ರವೇ ಕ್ಷಮಾದಾನ ಬೇಕಾಗಿರುವುದು. ಅವರೊಬ್ಬರಿಗೇ ಆ ಅಪರಾಧಿ ಎಂಬ ವ್ಯಕ್ತಿ ಇನ್ನೂ ಬಾಳಲಿ, ಬದುಕಲಿ, ಹೊಸ ಜೀವನ ಕಟ್ಟಿಕೊಳ್ಳಲಿ ಎಂದು ಬಯಸುವುದು. ಇನ್ನುಳಿದಂತೆ ಜನರು ಆ ವ್ಯಕ್ತಿಯೊಂದು ಉಸಿರಾಡುವ ಜೀವಿಯೆಂದೂ ನೋಡದೇ ಅವನ ಕ್ರಿಯೆಗೆ ಪ್ರತಿಕ್ರಿಯಿಸುತ್ತಾರೆ. ಹಾಗಾಗಿ ಕಾನೂನು ಪಾಲನೆ ಮಾಡುವುದು ಎಲ್ಲರ ಹಿತಕ್ಕಾಗಿ ಎಂಬ ಅರಿವನ್ನು ಮಕ್ಕಳಲ್ಲಿ ಪ್ರಾರಂಭದಿಂದಲೇ ಮೂಡಿಸುವ ಹಾಗೆ ನಾವು ನಡೆದುಕೊಳ್ಳಬೇಕು. ಇನ್ನು ವಿಶೇಷ ಸಂದರ್ಭಗಳಲ್ಲಿ ಕಾನೂನನ್ನು ಲಕ್ಷಿಸುವ ಅಗತ್ಯವಿರುವುದಿಲ್ಲ. ಉದಾಹರಣೆಗೆ ತೀರಾ ತಡ ಹೊತ್ತಿನಲ್ಲಿಯೂ ಟ್ರಾಫಿಕ್ ಸಿಗ್ನಲ್ನಲ್ಲಿ ಕೆಂಪು ದೀಪ ಉರಿಯುತ್ತಿದ್ದರೆ, ರಸ್ತೆಯಲ್ಲಿ ಯಾವುದೇ ವಾಹನಗಳು ಓಡಾಡುತ್ತಿರದಿದ್ದರೆ ಸಹಜವಾಗಿ ಹೋಗುತ್ತೇವೆ. ಜನಸಂಚಾರ ದಟ್ಟವಾಗಿಲ್ಲದೇ ಇರುವಂತಹ ಸಮಯಗಳಲ್ಲಿ ಏಕಮುಖ ರಸ್ತೆಯಲ್ಲಿ ಕೆಲವು ಹೊತ್ತಲ್ಲಿ ಹೋಗಬೇಕಾಗುತ್ತದೆ. ಆದರೆ, ಅದು ಆ ಬಗೆಯ ಸಂದರ್ಭಗಳಲ್ಲಿ ಮಾತ್ರ ಎಂಬ ಪ್ರಜ್ಞೆಯ ಪರಿಚಯ ಮಕ್ಕಳಿಗೆ ಮಾಡಿಸಬೇಕು. ಕಾನೂನನ್ನು ಪಾಲಿಸುವುದೆಂದರೆ ಧಾರ್ಮಿಕತೆಯನ್ನು ಪಾಲಿಸುವ ರೀತಿಯದ್ದು ಎಂಬಂತಹ ಪೂರ್ವಗ್ರಹವನ್ನು ಉಂಟುಮಾಡುವ ಅಗತ್ಯವೇನಿಲ್ಲ. ಆದರೆ ಪ್ರಜ್ಞಾವಂತಿಕೆ ಮತ್ತು ಸಂದರ್ಭದ ಸೂಕ್ಷ್ಮತೆಯ ಬಗ್ಗೆ ಮಕ್ಕಳಿಗೆ ಸ್ಪಷ್ಟಗೊಳಿಸಬೇಕು. ಇನ್ನು ರಸ್ತೆಯಲ್ಲಿ ಯಾರಾದರೂ ಅಡ್ಡ ಬಂದರೆ ಅಥವಾ ಅನಗತ್ಯವಾಗಿ ಮತ್ತೊಬ್ಬ ಓವರ್ ಟೇಕ್ ಮಾಡಿದರೆ ಮಕ್ಕಳನ್ನು ತಮ್ಮ ಜೊತೆಗಿಟ್ಟುಕೊಂಡೇ ವಾಗ್ಯುದ್ಧಕ್ಕೆ ಇಳಿಯುವ, ಕೆಲವೊಮ್ಮೆ ಕೆಳಗಿಳಿದು ಹೊಡೆದಾಡುವ ಮಟ್ಟಕ್ಕೆ ಹೋಗುವ ಪೋಷಕರನ್ನು ನೋಡಿದ್ದೇನೆ. ಈಗ ಈ ಮಕ್ಕಳು ಎಂಥೆೆಂತಹ ಮಾದರಿಯನ್ನು ತಂದೆಯಿಂದ ಪಡೆಯುತ್ತಾರೆ ನೋಡಿ. ತಾನು ಓವರ್ ಟೇಕ್ ಮಾಡಬಹುದು. ತನಗೆ ಯಾರೂ ಮಾಡಬಾರದು. ತಾನು ವೇಗವಾಗಿ ನುಗ್ಗಿಕೊಂಡು ಹೋಗಬಹುದು, ಬೇರೆಯವರು ಹೋಗಬಾರದು. ತಾನು ಟ್ರಾಫಿಕ್ ರೂಲ್ಸ್ ಮುರಿಯಬಹುದು. ಇತರರು ಮಾಡಿದರೆ ಬೈಯುತ್ತಾನೆ. ಒಟ್ಟಾರೆ ತಾನು ಏನು ಬೇಕಾದರೂ ಮಾಡಬಹುದು. ಇತರರು ಮಾಡುವಾಗ ಎಲ್ಲಾ ರೂಲ್ಸು, ರೆಗ್ಯುಲೇಷನ್ ಮುಂದೆ ಬರುತ್ತದೆ. ಅಲ್ಲಿಗೆ ಆ ಮಗುವಿನ ಆರೋಗ್ಯಕರ ವ್ಯಕ್ತಿತ್ವ ಮತ್ತು ಸಾಧಾರಣ ಮನಸ್ಥಿತಿಯ ಕಥೆ ಮುಗಿಯಿತು. ಹುಚ್ಚುತನ, ಹಟಮಾರಿತನ ಮತ್ತು ಮೂರ್ಖತನಗಳು ವಂಶವಾಹಿನಿಗಳಲ್ಲಿ ಬರುವುದಲ್ಲ. ಪೋಷಕರ ವರ್ತನೆಗಳ ಮಾದರಿಗಳಿಂದ ಮಕ್ಕಳು ತಮಗರಿವಿಲ್ಲದೆ ಅಳವಡಿಸಿಕೊಳ್ಳುವುದು. ಆಮೇಲೆ ಅದನ್ನು ಮೊದಲು ಖಂಡಿಸುವುದೂ ಪೋಷಕರೇ! .