ಕಡಬ ಪರಿಸರದಲ್ಲಿ ಚಿಟ್ಟೆ ಹುಲಿ ಪತ್ತೆ

ಕಡಬ: ಇಲ್ಲಿನ ಬಂಟ್ರ ಗ್ರಾಮದ ನೀರಾಜೆ ಎಂಬಲ್ಲಿ ಕಳೆದ ಒಂದು ವಾರದಿಂದ ಚಿಟ್ಟೆ ಹುಲಿ ಇದೆಯೆಂಬ ಸಂಶಯವಿದ್ದು, ಮಂಗಳವಾರ ಬೆಳಗ್ಗೆ ನಾಯಿಯೊಂದನ್ನು ಹಿಡಿದುಕೊಂಡು ಹೋದ ಪರಿಣಾಮ ಬೆಳಕಿಗೆ ಬಂದಿದೆ.
ಕಳೆದ ಮೂರು ದಿನಗಳ ಹಿಂದೆ ಕರುವೊಂದನ್ನು ಅರ್ಧ ತಿಂದಿದ್ದು, ಹುಲಿಯಿದೆಯೆಂಬ ಸಂಶಯ ವ್ಯಕ್ತವಾಗಿತ್ತು. ಆದರೂ ಊರವರು ಸಂಬಂಧಪಟ್ಟವರಿಗೆ ಯಾವುದೇ ಮಾಹಿತಿಯನ್ನು ನೀಡದೆ ಮುಚ್ಚಿಟ್ಟಿದ್ದರು. ಆದರೆ ಮಂಗಳವಾರದಂದು ಬೆಳಗ್ಗೆ ನಾಯಿಯನ್ನು ಎತ್ತಿಕೊಂಡು ಹೋದ ಪರಿಣಾಮ ಘಟನೆ ಬೆಳಕಿಗೆ ಬಂದಿದೆ.
ಉಪ ವಲಯ ಅರಣ್ಯಾಧಿಕಾರಿ ರಾಜೇಶ್, ಅರಣ್ಯ ರಕ್ಷಕರಾದ ಸುಬ್ರಹ್ಮಣ್ಯ ಮತ್ತು ರವಿಚಂದ್ರರವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಗ್ರಾಮ ಪಂಚಾಯತ್ ಸದಸ್ಯ ಹರೀಶ್ ಭೇಟಿ ನೀಡಿದ್ದರು.
ಮುಂದಿನ ಭಾಗವಾಗಿ ಬೋನನ್ನು ಇಟ್ಟು ಅದರ ಬಂಧನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಉಪ ವಲಯ ಅರಣ್ಯಾಧಿಕಾರಿ ರಾಜೇಶ್ ತಿಳಿಸಿದ್ದಾರೆ.


Next Story





