ಚುಟುಕು ಸುದ್ದಿಗಳು
ಫೆ.13-14: ಸ್ಫೂರ್ತಿ ಯುವಕ ಮಂಡಲದ ಬೆಳ್ಳಿಹಬ್ಬ
ಪುತ್ತೂರು, ಫೆ.9: ಜಿಲ್ಲಾ ಪ್ರಶಸ್ತಿ ವಿಜೇತ ಸ್ಫೂರ್ತಿ ಯುವಕ ಮತ್ತು ಯುವತಿ ಮಂಡಲ, ಮಹಿಳಾ ಮಂಡಲ ಮತ್ತು ಬಾಲಸಭಾ ಇದರ 25ನೆ ವರ್ಷದ ಬೆಳ್ಳಿ ಹಬ್ಬ ಸಮಾರಂಭ ಹಾಗೂ 11ನೆ ವರ್ಷದ ಸಾಮೂಹಿಕ ಶ್ರೀ ಶನೀಶ್ವರ ಪೂಜೆ ಕಾರ್ಯಕ್ರಮ ಫೆ.13 ಮತ್ತು 14ರಂದು ನಡೆಯಲಿದೆ ಎಂದು ಸಂಘಟನೆಯ ಸ್ಥಾಪಕ ಅಧ್ಯಕ್ಷ ದಿನೇಶ್ ಸಾಲ್ಯಾನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಶನೀಶ್ವರ ಪೂಜೆಯು ಜ.11ರಂದು ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿ ನೇತೃತ್ವದಲ್ಲಿ ನಡೆಯಲಿದೆ. ಜ.13ರಂದು ಧಾರ್ಮಿಕ ಸಭೆ ನಡೆಯಲಿದೆ.
ಈ ಸಂದರ್ಭ ಪ್ರತಿಭಾವಂತ ವಿದ್ಯಾರ್ಥಿಗಳಾದ ಸುಶ್ಮಿತಾ ಸಿ.ಆರ್. ಮತ್ತು ಚೈತ್ರಾಶ್ರೀ ಅವರಿಗೆ ಪುರಸ್ಕಾರ ನೀಡಿ ಗೌರವಿಸಲಾಗುವುದು. ಜ.14ರಂದು ಬೆಳ್ಳಿ ಹಬ್ಬದ ಸಂಭ್ರಮ ನಡೆಯಲಿದ್ದು, ಸಭಾ ಕಾರ್ಯಕ್ರಮವನ್ನು ಶಾಸಕಿ ಶಕುಂತಳಾ ಶೆಟ್ಟಿ ಉದ್ಘಾಟಿಸಲಿದ್ದಾರೆ. ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು ಅಧ್ಯಕ್ಷತೆ ವಹಿಸುವರು.
ಈ ಸಂದರ್ಭ ಅಸಹಾಯಕರ ಸೇವಾ ಟ್ರಸ್ಟ್ನ ಅಧ್ಯಕ್ಷೆ ನಯನಾ ರೈ, ಮೆಸ್ಕಾಂ ನಿವೃತ್ತ ಇಂಜಿನಿಯರ್ ಶೇಷಪ್ಪ ಪೂಜಾರಿ ಮತ್ತು ನಾಟಿ ವೈದ್ಯ ಸೈಯದ್ ಅಸ್ಲಂರನ್ನು ಸನ್ಮಾನಿಸಲಾಗುವುದು. ಸಂಸ್ಥೆಯ ಸ್ಥಾಪಕ ಅಧ್ಯಕ್ಷ ದಿನೇಶ್ ಸಾಲ್ಯಾನ್ರಿಗೆ ‘ಸ್ಫೂರ್ತಿಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸ್ಫೂರ್ತಿ ಯುವಕ ಮಂಡಲದ ಅಧ್ಯಕ್ಷ ನಾಗೇಶ್, ಕಾರ್ಯದರ್ಶಿ ಹರೀಶ್, ಸದಸ್ಯ ಉದಯಕುಮಾರ್, ಸ್ಫೂರ್ತಿ ಮಹಿಳಾ ಮಂಡಲದ ಅಧ್ಯಕ್ಷೆ ಶಾರದಾ ಅರಸ್ ಉಪಸ್ಥಿತರಿದ್ದರು.
ಉಚಿತ ತಪಾಸಣೆ
ಮಂಗಳೂರು, ಫೆ.9: ಕರ್ನಾಟಕ ಆಯುರ್ವೇದ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ೆ.29ರವರೆಗೆ ಉಚಿತ ಆಯುರ್ವೇದ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ನಡೆಯಲಿದೆ. ಶಿಬಿರದಲ್ಲಿ ತಜ್ಞ ವೈದ್ಯರುಗಳಿಂದ ಉಚಿತ ತಪಾಸಣೆ, ಔಷಧಿ ವಿತರಣೆ, ಪಂಚಕರ್ಮ ಚಿಕಿತ್ಸೆ, ಸೂಕ್ತ ಯೋಗ ಮತ್ತು ಇತರ ಮಾರ್ಗದರ್ಶನಗಳನ್ನು ನೀಡಲಾಗುವುದು. ಆಸಕ್ತರು ದೂರವಾಣಿ 0824- 2454127 ನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ
ತುಳು ಕವನ ರಚನಾ ಕಮ್ಮಟ
ಮಂಗಳೂರು,ಫೆ.9: ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯು ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗಾಗಿ ಎರಡು ದಿನಗಳ ತುಳು ಕವನ ರಚನಾ ಕಮ್ಮಟವನ್ನು ಮಾರ್ಚ್ ಮೊದಲ ವಾರದಲ್ಲಿ ಹಮ್ಮಿಕೊಂಡಿದೆ. ಸುರತ್ಕಲ್ನ ಗೋವಿಂದದಾಸ ಕಾಲೇಜಿನಲ್ಲಿ ನಡೆಯುವ ಈ ಕಮ್ಮಟದಲ್ಲಿ ಭಾಗವಹಿಸಲಿಚ್ಛಿಸುವ ಆಸಕ್ತರು ತಮ್ಮ ಹೆಸರು, ಕಾಲೇಜಿನ ಹೆಸರು, ವಿಳಾಸ, ಸಂಪರ್ಕ ಸಂಖ್ಯೆ ಇವುಗಳ ವಿವರ ಮತ್ತು ಕಾಲೇಜಿನ ಪ್ರಾಂಶುಪಾಲರ ದೃಢೀಕರಣ ಪತ್ರದೊಂದಿಗೆ ಫೆ. 27 ರೊಳಗೆ ಹೆಸರು ನೋಂದಾಯಿಸಬೇಕು. ಹೆಚ್ಚಿನ ಮಾಹಿತಿಗೆ ಪ್ರೊ. ಪಿ, ಕೃಷ್ಣಮೂರ್ತಿ, ಉಪಪ್ರಾಂಶುಪಾಲರು, ಗೋವಿಂದದಾಸ ಕಾಲೇಜು, ಸುರತ್ಕಲ್, ಮೊ.: 9449510848 ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.
ಫೆ.13: ಬಾಯಿ, ಮುಖ, ದವಡೆ ಶಸ್ತ್ರ ಚಿಕಿತ್ಸಕರ ದಿನ
ಮಂಗಳೂರು, ಫೆ.9: ಬಾಯಿ, ಮುಖ, ದವಡೆ ಶಸ್ತ್ರ ಚಿಕಿತ್ಸಕರ ದಿನದ ಅಂಗವಾಗಿ ಫೆ.13ರಂದು ಎ.ಬಿ.ಶೆಟ್ಟಿ ದಂತ ಕಾಲೇಜಿನ ವಿಶ್ರಾಂತಿ ಭವನದಲ್ಲಿ ರಕ್ತಜಾಗೃತಿ ಬಗ್ಗೆ ವಿವಿಧ ಕಾರ್ಯಕ್ರಮಗಳು ನಡೆಯಲಿದೆ ಎಂದು ಕಾಲೇಜಿನ ಬಾಯಿ, ಮುಖ, ದವಡೆ ವಿಭಾಗದ ಮುಖ್ಯಸ್ಥ ಡಾ.ರಾಜೇಂದ್ರ ಪ್ರಸಾದ್ ತಿಳಿಸಿದ್ದಾರೆ.
ಕಾರ್ಯಕ್ರಮವನ್ನು ನಿಟ್ಟೆ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ರಮಾನಂದ ಶೆಟ್ಟಿ ಉದ್ಘಾಟಿಸಲಿದ್ದಾರೆ ಎಂದು ಕಾರ್ಯಕ್ರಮದ ಸಂಯೋಜಕ ಡಾ. ಮುರಳಿ ಮೋಹನ್ ಚೂಂತಾರು ಪ್ರಕಟನೆೆಯಲ್ಲಿ ತಿಳಿಸಿದ್ದಾರೆ.
ಕಲ್ಲಡ್ಕ: ಫೆ.14ರಂದು ಬಹುಭಾಷಾ ಕವಿಗೋಷ್ಠಿ
ಕಲ್ಲಡ್ಕ, ಫೆ.9: ಇಲ್ಲಿನ ಅನುಗ್ರಹ ಮಹಿಳಾ ವಿದ್ಯಾಸಂಸ್ಥೆಯ ವಠಾರದಲ್ಲಿ ಫೆ.14ರಂದು ಸಂಜೆ 7ಕ್ಕೆ ಬಹುಭಾಷಾ ಕವಿಗೋಷ್ಠಿ ಹಾಗೂ ಗಾಯನ ಸಮ್ಮಿಲನ ಕಾರ್ಯಕ್ರಮ ಜರಗಲಿದೆ. ಸನ್ಮಾರ್ಗ ವಾರ ಪತ್ರಿಕೆಯ ಸಂಪಾದಕ ಏ.ಕೆ. ಕುಕ್ಕಿಲ ಅಧ್ಯಕ್ಷತೆ ವಹಿಸುವರು. ಇದೇ ಸಂದರ್ಭ ಸಲ್ಮಾನ್ ಮತ್ತು ಫಾಯಿಝ್ರ ಇಸ್ಲಾವಿೂ ಹಾಡುಗಳ ವಿಶೇಷ ಕಾರ್ಯಕ್ರಮವಿದೆ ಎಂದು ಪ್ರಕಟನೆ ತಿಳಿಸಿದೆ.
ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ
ಮಂಗಳೂರು, ಫೆ.9: ನಗರದ ಬೋಂದೆಲ್ ಕೃಷ್ಣನಗರದಲ್ಲಿ ಅಂಬಿಕಾ ಅನ್ನಪೂರ್ಣೇಶ್ವರಿ ಭಕ್ತ ವೃಂದದ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಮೋಹನ್ ದಾಸ್ ಶೆಟ್ಟಿ ಮರಕಡ, ಆನಂದ ಉಡುಪಿ, ಪ್ರಭಾಕರ ಕರ್ಕೇರ ಪದವಿನಂಗಡಿ ಮತ್ತು ಬಾವು ಬ್ಯಾರಿ ಕೃಷ್ಣನಗರ ಅವರಿಗೆ ಸನ್ಮಾನ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಈ ಸಂದರ್ಭ ಪರಿಸರದ 2 ಬಡ ಕುಟುಂಬದ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ಧನವನ್ನು ವಿತರಿಸಲಾಯಿತು. ನಂತರ ಅಂಬಿಕಾ ಅನ್ನಪೂರ್ಣೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಸುಂಕದಕಟ್ಟೆ ಬಜ್ಪೆ ತಂಡದಿಂದ ಜಿ.ಕೆ.ಶ್ರೀನಿವಾಸ್ ಸಾಲ್ಯಾನ್ ಕೃಷ್ಣನಗರ ಬೋಂದೆಲ್ ವಿರಚಿತ, ತುಳು ಪ್ರಸಂಗ ನಾಗನಂಬಿಕೆ ಯಕ್ಷಗಾನ ಪ್ರದರ್ಶನಗೊಂಡಿತು.
ಕಾನೂನು ಮಾಹಿತಿ ಕಾರ್ಯಕ್ರಮ
ಮಂಗಳೂರು,ಫೆ.9: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಂಗಳೂರು ವಕೀಲರ ಸಂಘ ಹಾಗೂ ಕರಾವಳಿ ಶ್ರೀ ಸೇವಾಲಾಲ್ ಬಂಜಾರ (ಲಂಬಾಣಿ) ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಮಹಿಳೆ ಮತ್ತು ಮಕ್ಕಳಿಗೆ ಕಾನೂನು ಮಾಹಿತಿ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಇತ್ತೀಚೆಗೆ ನಗರದ ಸರಕಾರಿ ನೌಕರರ ಸಂಘದ ಸಭಾಭವನದಲ್ಲಿ ನಡೆಯಿತು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗಣೇಶ. ಬಿ.ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಲಂಬಾಣಿ ಜನಾಂಗದಲ್ಲಿ ಇರುವ ಮೌಢ್ಯ ಮತ್ತು ಕಂದಾಚಾರಗಳ ಬಗ್ಗೆ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ನೀಡುವ ಮುಖಾಂತರ ವುಗಳನ್ನು ಹೋಗಲಾಡಿಸಬೇಕೆಂದರು. ಮಹಿಳೆಯರ ಮತ್ತು ಮಕ್ಕಳ ಬಗ್ಗೆ ಇರುವ ಕಾನೂನನ್ನು ಪಾಲಿಸುವ ಮುಖಾಂತರ ಅವರ ಹಕ್ಕನ್ನು ಸಂರಕ್ಷಿಸಿ ಜೀವನ ಉತ್ತಮ ಪಡಿಸಿಕೊಳ್ಳಬೇಕೆಂದು ಅವರು ಹೇಳಿದರು.
ಮಂಗಳೂರು ವಕೀಲರ ಸಂಘದ ಅಧ್ಯಕ್ಷಎಸ್.ಪಿ. ಚಂಗಪ್ಪ ಮಾತನಾಡಿದರು. ಸಂಘದ ಅಧ್ಯಕ್ಷ ಜಯಪ್ಪಲಮಾಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಇಂದು ಡಿವಿಷನ್ ಕಾನ್ಫರೆನ್ಸ್ಗೆ ಚಾಲನೆ
ಉಳ್ಳಾಲ, ಫೆ.9: ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ವತಿಯಿಂದ ಎಪ್ರಿಲ್ನಲ್ಲಿ ‘ಮರಳಿ ಬಾ ಪರಂಪರೆಗೆ’ ಎಂಬ ಧ್ಯೇಯಘೋಷಣೆಯೊಂದಿಗೆ ನಡೆಯುವ ಡಿವಿಷನ್ ಕಾನ್ಫರೆನ್ಸ್ನ ಚಾಲನಾ ಸಮಾವೇಶವು ಫೆ.10ರಂದು ರಾತ್ರಿ ಗಂ.7ಕ್ಕೆ ತಿಬ್ಲೆಪದವಿನ ಅಲ್ ಮದೀನಾ ಹಾಲ್ನಲ್ಲಿ ಜರಗಲಿದೆ. ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಅಧ್ಯಕ್ಷ ಉಮರ್ ಅಹ್ಸನಿ ಇನೋಳಿ ಅಧ್ಯಕ್ಷತೆ ವಹಿಸುವರು. ಎಸ್ಸೆಸ್ಸೆಫ್ ದ.ಕ. ಜಿಲ್ಲಾಧ್ಯಕ್ಷ ಹಾಫಿಲ್ ಯಾಕೂಬ್ ಸಅದಿ ನಾವೂರು ಮುಖ್ಯ ಭಾಷಣ ಮಾಡಲಿರುವರು ಎಂದು ಪ್ರಕಟನೆ ತಿಳಿಸಿದೆ.
ಕಿಟ್ಟಲ್ ಮರಿಮೋಯಲ್ ಶಾಲೆಯಲ್ಲಿ ರಕ್ತದಾನ ಶಿಬಿರ
ಮಂಗಳೂರು, ಫೆ.9: ರಜತ ಪುನರ್ ಮಿಲನ ಕಾರ್ಯಕ್ರಮದ ಅಂಗವಾಗಿ ಕಿಟ್ಟಲ್ ಶಾಲೆಯ ಹಳೆ ವಿದ್ಯಾರ್ಥಿಗಳು ಗೋರಿಗುಡದ ಕಿಟ್ಟಲ್ ಮೆಮೋರಿಯಲ್ ಶಾಲೆಯಲ್ಲಿ ರಕ್ತದಾನ ಶಿಬಿರವನ್ನು ನಡೆಸಲಾಯಿತು. ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ಮಂಗಳೂರು ಇದರ ಪ್ರಾಯೋಜಕತ್ವದಲ್ಲಿ, ತೇಜಸ್ವಿನಿ ಆಸ್ಪತ್ರೆ ಇದರ ರಕ್ತನಿಧಿಯ ಸಹಕಾರದೊಂದಿಗೆ ಈ ಕಾರ್ಯಕ್ರಮ ಜರಗಿತು. ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ಕಾರ್ಯದರ್ಶಿ ಡಾ. ಮುರಳಿ ಮೋಹನ್ ಚೂಂತಾರು, ತೇಜಸ್ವಿನಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ದೀನಾ ಮಂಜು ಶೆಟ್ಟಿ, ರಕ್ತನಿಧಿಯ ಸಹಾಯಕ ಅಭಿಲಾಷ್ ಮತ್ತು ಹಳೆ ವಿದ್ಯಾರ್ಥಿ ಸಂಘದ ಯೋಗೀಶ್ ಹಾಗೂ ಶಾಲಾ ಪ್ರಾಧ್ಯಾಪಕ ಕೃಷ್ಣ ನೀರಮೂಲೆ ಉಪಸ್ಥಿತರಿದ್ದರು. ಸುಮಾರು 22 ಮಂದಿ ರಕ್ತದಾನ ಮಾಡಿದರು.
ಜಾನಪದ ಪರಿಷತ್ತು ಗಡಿನಾಡ ಘಟಕ ಪದಾಧಿಕಾರಿಗಳ ಆಯ್ಕೆ
ಮಂಜೇಶ್ವರ, ಫೆ.9: ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕಕ್ಕೆ ಮುಂದಿನ ಮೂರು ವರ್ಷಗಳ ಕಾಲಾವಧಿಗೆ ನೂತನ ಸಮಿತಿಯನ್ನು ರಚಿಸಲಾಗಿದೆ.
ಗಡಿನಾಡ ಘಟಕದ ಅಧ್ಯಕ್ಷರಾಗಿ ಕೇಶವ ಪ್ರಸಾದ ನಾಣಿತ್ತಿಲು, ಉಪಾಧ್ಯಕ್ಷರಾಗಿ ಬಾಲಕೃಷ್ಣ ಅಗ್ಗಿತ್ತಾಯ ಹಾಗೂ ಪ್ರೊ.ಎ.ಶ್ರೀನಾಥ್, ಪ್ರಧಾನ ಕಾರ್ಯದರ್ಶಿಗಳಾಗಿ ಅಬ್ದುರ್ರಹ್ಮಾನ್ ಸುಬ್ಯಯ್ಯಕಟ್ಟೆ, ಕೇಳು ಮಾಸ್ಟರ್ ಅಗಲ್ಪಾಡಿ ಹಾಗೂ ಪುರುಷೋತ್ತಮ ಭಟ್ ಕೆ, ಖಜಾಂಚಿಯಾಗಿ ರವಿ.ನಾಯ್ಕಾಪು, ಸದಸ್ಯರಾಗಿ ಆಯಿಷಾ ಎ.ಎ.ಪೆರ್ಲ, ವಿಜಯಾ ಸುಬ್ರಹ್ಮಣ್ಯ, ವಸಂತಕುಮಾರ್, ಸಿ.ಕೆ.ಜಯಪ್ರಕಾಶ ಪಜಿಲ, ಪದ್ಮರಾಜ ಐಕ್ಮೋತ್, ಜಯಾನಂದಕುಮಾರ್ ಹೊಸದುರ್ಗ, ಅಖಿಲೇಶ ಯಾದವ್, ಹಾಗೂ ರಾಜು ಸ್ಟೀಫನ್ರನ್ನು ಆಯ್ಕೆಗೊಳಿಸಲಾದೆ ಎಂದು ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷ ಟಿ.ತಿಮ್ಮೇಗೌಡ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







