ಐಸಿಸ್ ಹೆಸರಲ್ಲಿ ಅಮಾಯಕರಿಗೆ ಕಿರುಕುಳ ಬೇಡ - ಮೋದಿ ಸರಕಾರಕ್ಕೆ ಮುಸ್ಲಿಮ್ ಸಂಘಟನೆಗಳ ಆಗ್ರಹ

ಹೊಸದಿಲ್ಲಿ,ಫೆ.9: ಐಸಿಸ್ ಬೆದರಿಕೆಯ ಹೆಸರಿನಲ್ಲಿ ಅಮಾಯಕ ಮುಸ್ಲಿಮರನ್ನು ಗುರಿಮಾಡುವುದರ ವಿರುದ್ಧ ವಿವಿಧ ಪ್ರಮುಖ ಮುಸಿಮ್ ಸಂಘಟನೆಗಳು ನರೇಂದ್ರ ಮೋದಿ ಸರಕಾರಕ್ಕೆ ಎಚ್ಚರಿಕೆಯನ್ನು ನೀಡಿವೆ.
ಹೊಸದಿಲ್ಲಿಯಲ್ಲಿ ಸೋಮವಾರ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ವಿವಿಧ ಮುಸ್ಲಿಮ್ ಸಂಘಟನೆಗಳ ಮುಖಂಡರು ಮಾತನಾಡಿ, ಐಸಿಸ್ ಹಾಗೂ ಅಲ್ಖೈದಾ ಜೊತೆ ನಂಟು ಹೊಂದಿದ್ದಾರೆಂಬ ಶಂಕೆಯಲ್ಲಿ ದೇಶವ್ಯಾಪಿಯಾಗಿ ಮುಸ್ಲಿಮ್ ಯುವಕರು ಹಾಗೂ ಧರ್ಮಗುರುಗಳನ್ನು ಬಂಧಿಸಲಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ‘‘ಐಸಿಸ್ ಹೆಸರಿನಲ್ಲಿ ಮುಸ್ಲಿಮ್ ಯುವಜನರನ್ನು ಏಕಪಕ್ಷೀಯವಾಗಿ ಬಂಧಿಸುತ್ತಿರುವ ಹಿಂದೆ ಇಸ್ಲಾಮ್ ಹಾಗೂ ಮುಸ್ಲಿಮರಿಗೆ ಕಳಂಕ ತರುವ ಸಂಘಟಿತ ಸಂಚು ಅಡಗಿದೆ. ಮುಸ್ಲಿಮರ ದೇಶಭಕ್ತಿಯನ್ನು ಶಂಕಿಸಲಾಗುತ್ತಿದೆ ಹಾಗೂ ಅವರನ್ನು ಭಯಭೀತಗೊಳಿಸಲಾಗುತ್ತಿದೆ. ಹಿಂದೂಗಳು ಮತ್ತು ಮುಸ್ಲಿಮರ ನಡುವೆ ದ್ವೇಷವನ್ನು ಬಿತ್ತಿ ರಾಜಕೀಯ ಲಾಭವನ್ನು ಪಡೆಯುವ ದುರುದ್ದೇಶ ಇದಾಗಿದೆ’’ ಎಂದು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾದ ಜಂಟಿ ಪತ್ರಿಕಾಹೇಳಿಕೆ ತಿಳಿಸಿದೆ.
ಕಳೆದ ವರ್ಷ ಕೇಂದ್ರ ಗೃಹ ಸಚಿವ ರಾಜ್ನಾಥ್ಸಿಂಗ್, ಜೈಪುರದಲ್ಲಿ ನಡೆದ ಭಯೋತ್ಪಾದನಾ ವಿರೋಧಿ ಸಮಾವೇಶದಲ್ಲಿ ಭಾರತೀಯ ಮುಸ್ಲಿಮರು ದೇಶಭಕ್ತರಾಗಿದ್ದು, ಅವರನ್ನು ತನ್ನೆಡೆಗೆ ಸೆಳೆಯಲು ಐಸಿಸ್ ವಿಫಲವಾಗಿದೆಯೆಂದು ಹೇಳಿದ್ದರು. ಪ್ರಧಾನಿ ಮೋದಿ ಕೂಡಾ ತನ್ನ ಅಮೆರಿಕ ಭೇಟಿಯ ವೇಳೆ ಇದೇ ಮಾತನ್ನು ಪುನರುಚ್ಚರಿಸಿದ್ದರು.
‘‘ಇದಾದ ಒಂದು ವರ್ಷದ ಬಳಿಕ, ಗಣರಾಜ್ಯೋತ್ಸವಕ್ಕೆ ಸ್ವಲ್ಪ ಮುನ್ನ ತನಿಖಾ ಸಂಸ್ಥೆಗಳು,ಐಸಿಸ್ ಹಾಗೂ ಅಲ್ಖೈದಾ ಜೊತೆ ನಂಟು ಹೊಂದಿರುವ ಶಂಕೆಯಲ್ಲಿ ಮುಸ್ಲಿಮರನ್ನು ಬಂಧಿಸಲು ಆರಂಭಿಸಿದ್ದವು. ಇದರಿಂದಾಗಿ ಭಾರತೀಯ ಮುಸ್ಲಿಮ್ ಯುವಕರು ಐಸಿಸ್ ಜೊತೆ ಸಂಪರ್ಕದಲ್ಲಿದ್ದಾರೆ ಮಾತ್ರವಲ್ಲ ದೇಶಾದ್ಯಂತ ದಾಳಿಗೆ ಸಂಚು ನಡೆಸುತ್ತಿದ್ದಾರೆಂಬ ಭಾವನೆಯು ಮೂಡಲಾರಂಭಿಸಿತೆಂದು ಹೇಳಿಕೆ ತಿಳಿಸಿದೆ.
ಈ ಹಿಂದೆ ಇಂತಹದೇ ಪ್ರಕರಣಗಳಲ್ಲಿ ಬಂಧಿತರಾಗಿದ್ದ ಮುಸ್ಲಿಮ್ ಯುವಕರು ನಿರಪರಾಧಿಗಳೆಂದು ಸಾಬೀತಾಗಿ ಬಿಡುಗಡೆಗೊಂಡಂತೆ, ಈಗ ಬಂಧಿಸಲ್ಪಟ್ಟವರೂ ಭಯೋತ್ಪಾದನೆಯ ಆರೋಪಗಳಿಂದ ಮುಕ್ತರಾಗಲಿದ್ದಾರೆಂಬ ವಿಶ್ವಾಸವನ್ನು ಅದು ವ್ಯಕ್ತಪಡಿಸಿದೆ.
ದೇಶದಲ್ಲಿ ನಡೆದ ಕೆಲವು ಭಯೋತ್ಪಾದಕ ದಾಳಿ ಪ್ರಕರಣಗಳಲ್ಲಿ ಮೊದಲು ಮುಸ್ಲಿಮರ ಮೇಲೆ ದೋಷಾರೋಪ ಹೊರಿಸಲಾಗಿತ್ತಾದರೂ, ಆನಂತರ ಅದು ಹಿಂದುತ್ವವಾದಿಗಳ ಕೃತ್ಯವೆಂದು ಬಯಲಿಗೆ ಬಂದಿತ್ತು. ಹೈದರಾಬಾದ್ನ ಮಕ್ಕಾ ಮಸೀದಿ, ಮಾಲೆಗಾಂವ್, ಅಜ್ಮೀರ್ ದರ್ಗಾ ಹಾಗೂ ಸಂಜೋತಾ ಎಕ್ಸ್ಪ್ರೆಸ್ ಪ್ರಕರಣಗಳಿಗೆ ಸಂಬಂಧಿಸಿ ಗುಪ್ತಚರ ಸಂಸ್ಥೆಗಳು ನಡೆಸಿದ ತನಿಖೆಗಳು ಹಿಂದುತ್ವವಾದಿ ಭಯೋತ್ಪಾದಕರ ಜಾಲವನ್ನು ಬಯಲಿಗೆಳೆದಿತ್ತೆಂದು ಹೇಳಿಕೆಯು ತಿಳಿಸಿದೆ.
ಐಸಿಸ್ ಒಂದು ಭಯೋತ್ಪಾದಕ ಸಂಘಟನೆಯಾಗಿದ್ದು, ಅದಕ್ಕೆ ಇಸ್ಲಾಮ್ ಹಾಗೂ ಅದರ ಬೋಧನೆಗಳ ಜೊತೆ ಯಾವ ವಿಧದಲ್ಲೂ ಸಂಬಂಧ ಹೊಂದಿಲ್ಲವೆಂಬ ನಿರ್ಣಯವನ್ನು ಇದೇ ಸಂದರ್ಭದಲ್ಲಿ ಮುಸ್ಲಿಮ್ ಸಂಘಟನೆಗಳು ಅವಿರೋಧವಾಗಿ ಕೈಗೊಂಡವು.
ಪತ್ರಿಕಾಗೋಷ್ಠಿಯಲ್ಲಿ ಜಮಾಅತೆ ಇಸ್ಲಾಮಿ ಹಿಂದ್, ಜಮೀಯತೆ ಉಲೆಮಾ ಹಿಂದ್, ಜಮೀಯತೆ ಅಹ್ಲೆ ಹದೀಸ್, ಮುಸ್ಲಿಮ್ ಮಜ್ಲಿಸೆ ಮುಶಾವರತ್, ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ಹಾಗೂ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಸಂಘಟನೆಗಳ ಪ್ರಮುಖರು ಭಾಗವಹಿಸಿದ್ದರು.







