ಕಾರ್ಕಳ : ಕೆರ್ವಾಶೆಯಲ್ಲಿ ಅಭಿನಂದನಾ ಸಮಾರಂಭ

ಕಾರ್ಕಳ : ಮಾಳ ಕೆರ್ವಾಶೆ ಸೇವಾ ಸಹಕಾರಿ ಸಂಘದ ನಿವೃತ್ತ ವ್ಯವಸ್ಥಾಪಕ ಎಚ್.ವೆಂಕಟೇಶ್ ಗೋರೆ ಮತ್ತು ನಿವೃತ್ತ ಹಿರಿಯ ಲೆಕ್ಕಿಗ ಕೆ.ಜಿನರಾಜ ಹೆಗ್ಡೆಯವರಿಗೆ ಕೆರ್ವಾಶೆ ಅಭಿಮಾನಿ ಬಳಗದ ವತಿಯಿಂದ ಅಭಿನಂದನಾ ಸಮಾರಂಭವು ಕೆರ್ವಾಶೆಯ ಸಾಗರ್ ಸಭಾಭವನದಲ್ಲಿ ಗುರುವಾರ ನಡೆಯಿತು.
ನ್ಯಾಯವಾದಿ ಎಂ.ಕೆ.ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೆರ್ವಾಶೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಪದ್ಮನಾಭ ಭಟ್, ದೇವಳದ ಮಾಜಿ ಆಡಳಿತ ಮೊಕ್ತೇಸರ ಶಂಕರ ಭಟ್, ಪ್ರಗತಿಪರ ಕೃಷಿಕ ಪದ್ಮರಾಜ ಹೆಗ್ಡೆ, ಮಾಳ ಕೆರ್ವಾಶೆ ಸಹಕಾರಿ ಸಂಘದ ಮಾಜಿ ನಿರ್ದೇಶಕ ರಾಮರಾಯ ನಾಯಕ್ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಅಂತರಾಷ್ಟ್ರೀಯ ಖ್ಯಾತಿ ಅಶೋಕ್ ಪೊಳಲಿ ಅವರಿಂದ ವಿಭಿನ್ನ ಶೈಲಿಯ ನೃತ್ಯ ಪ್ರದರ್ಶನ ಹಾಗೂ ಗಿನ್ನಿಸ್ ರೆಕಾರ್ಡ್ ನಾಮಿನಿ ಅಕ್ಷತಾ ಕುಡ್ಲ ಅವರಿಂದ ಮಿಮಿಕ್ರಿ ನಡೆಯಿತು. ಧರ್ಮರಾಜ ಹೆಗ್ಡೆ ಹಾಗೂ ಶಿವರಾಜ್ ಜೈನ್ ಕಾರ್ಯಕ್ರಮ ಸಂಯೋಜಿಸಿದರು.
ಶ್ರೇಯಾಂಸ ಜೈನ್ ಸ್ವಾಗತಿಸಿದರು. ಕೆರ್ವಾಶೆ ಸಿಂಹಸೇನ ಇಂದ್ರ ಕಾರ್ಯಕ್ರಮ ನಿರೂಪಿಸಿದರು. ಪ್ರತಿಭಾ ಕೆರ್ವಾಶೆ ವಂದಿಸಿದರು.





