ಕಡಬ : ರಿಕ್ಷಾ-ಪಿಕಪ್ ಢಿಕ್ಕಿ , ನಾಲ್ವರಿಗೆ ಗಾಯ

ಕಡಬ, ಫೆ.೧೧. ಠಾಣಾ ವ್ಯಾಪ್ತಿಯ ಕಲ್ಲಾಜೆ ಎಂಬಲ್ಲಿ ರಿಕ್ಷಾ ಹಾಗೂ ಪಿಕಪ್ ನಡುವೆ ಢಿಕ್ಕಿ ಸಂಭವಿಸಿ ಐವರು ಗಾಯಗೊಂಡ ಘಟನೆ ಗುರುವಾರ ಸಂಜೆ ನಡೆದಿದೆ. ಕಡಬದಿಂದ ಕಲ್ಲಾಜೆ ಹೋಗುತ್ತಿದ್ದ ರಿಕ್ಷಾಕ್ಕೆ ಸುಬ್ರಹ್ಮಣ್ಯ ಕಡೆಯಿಂದ ಬರುತ್ತಿದ್ದ ಪಿಕಪ್ ವಾಹನವು ವಿರುದ್ಧ ದಿಕ್ಕಿನಲ್ಲಿ ಬಂದು ಢಿಕ್ಕಿ ಹೊಡೆದಿದ್ದರಿಂದ ಈ ಘಟನೆ ನಡೆದಿದೆ.
ಅಪಘಾತದಲ್ಲಿ ಬಾಲಕಿ ಕಲ್ಪನಾಳ ಕಾಲೊಂದು ಮುರಿತಕ್ಕೊಳಗಾಗಿದ್ದು, ತಲೆಗೆ ಪೆಟ್ಟಾಗಿದೆ. ದೇವಿಕಾ, ಶಿವರಾಜ್ ಹಾಗೂ ಕವನಾ ಎಂಬವರ ತಲೆಗೆ ತೀವ್ರ ತರದ ಗಾಯಗಳಾಗಿದ್ದು, ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಾರದ ೧೦೮ ಆಂಬ್ಯುಲೆನ್ಸ್, ಆಕ್ರೋಶಗೊಂಡ ನಾಗರಿಕರು: ಅಪಘಾತ ನಡೆದು ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ಗಾಯಾಳುಗಳನ್ನು ಸೇರಿಸಲಾಗಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿಗೆ ಕರೆದುಕೊಂಡು ಹೋಗಲು ೧೦೮ ಆಂಬ್ಯುಲೆನ್ಸ್ ಗೆ ಕರೆ ನೀಡಿದಾಗ ೧೦೮ ಸ್ಥಳದಲ್ಲಿಲ್ಲ. ಬರುವಾಗ ತಡವಾಗಬಹುದು ಎಂಬ ಉತ್ತರದಿಂದ ನಾಗರಿಕರು ಅಸಾಮಾಧಾನಗೊಂಡರು. ಗಾಯಾಳುಗಳನ್ನು ಆಸ್ಪತ್ರೆಯಲ್ಲೇ ಮಲಗಿಸಲು ಸ್ಟ್ರಚರ್ ಇಲ್ಲದನ್ನು ಮತ್ತು ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ ಇಲ್ಲದ್ದನ್ನು ಕಂಡು ನಾಗರಿಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದ ದ್ರಶ್ಯ ಕಂಡು ಬಂತು.
ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿ ಪುತ್ತೂರಿಗೆ ಖಾಸಗಿ ವಾಹನದಲ್ಲಿ ಸೇರಿಸುವಲ್ಲಿ ಸಹಕರಿಸಿದ ಐತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಕೆ. ಯವರ ಕಾರ್ಯ ವೈಖರಿಯನ್ನು ಊರವರು ಪ್ರಶಂಸಿಸಿದರು.








