ಡಾಮರೀಕರಣವಾಗದ ಕಡಂದಲೆ ರಸ್ತೆ : ಮುಕ್ಕಡಪ್ಪು ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರ

ಮೂಡುಬಿದಿರೆ : ಕಡಂದಲೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಜೋಡುಕಟ್ಟೆಯಿಂದ ಮುಕ್ಕಡಪ್ಪುವರೆಗಿನ 5ಕೀ.ಮೀ.ರಸ್ತೆ ಕಳೆದ 20 ವರ್ಷಗಳಿಂದ ಡಾಮರೀಕರಣಗೊಳಿಸದಿರುವುದರಿಂದ ಸಂಪೂರ್ಣ ಕೆಟ್ಟು ಹೋಗಿದ್ದನ್ನು ಪ್ರತಿಭಟಿಸಿ ಈ ಬಾರಿಯ ಜಿ.ಪಂ.ತಾ.ಪಂ.ಚುನಾವಣೆಯನ್ನು ಬಹಿಷ್ಕರಿಸಲು ಪರಿಸರದ ಮತದಾರರು ನಿರ್ಧರಿಸಿದ್ದಾರೆ.
ಈ ಬಗ್ಗೆ ಗುರುವಾರ ಸಂಜೆ ಜೋಡುಕಟ್ಟೆಯಲ್ಲಿ ಪ್ರತಿಭಟನೆಯ ನೇತೃತ್ವ ವಹಿಸಿದ್ದ ನಾಗರಿಕ ಹಿತರಕ್ಷಣಾ ಸಮಿತಿ ಸಭೆ ಸೇರಿ ಈ ಕುರಿತು ಚರ್ಚೆ ನಡೆಸಲಾಯಿತು. ಈ ರಸ್ತೆಯಲ್ಲಿ ರೋಗಿಗಳನ್ನು ಆಸ್ಪತ್ರೆಗೆ ಕೊಂಡೊಯ್ಯಲು, ವಾಹನಗಳ ಓಡಾಟಕ್ಕೆ ಅಡಚಣೆಯಾಗಿದೆ. ಈ ಬಗ್ಗೆ ವಿವಿಧ ಜನಪ್ರತಿನಿಧಿಗಳಿಗೆ ಬೇಡಿಕೆ ಸಲ್ಲಿಸಿದ್ದರೂ ನಿರ್ಲಕ್ಷಿಸುತ್ತಾ ಬಂದಿದ್ದಾರೆ. ಚುನಾವಣಾ ಬಹಿಷ್ಕಾರದ ಹಿನ್ನೆಲೆಯಲ್ಲಿ ಯಾವುದೇ ರಾಜಕೀಯ ಪಕ್ಷಗಳ ಮುಖಂಡರ ಭರವಸೆಗಳಿಗೆ ಮಣಿಯುವುದಿಲ್ಲ. ತಹಸೀಲ್ದಾರ್ ಅಥವಾ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲಿಖಿತ ರೂಪದಲ್ಲಿ ಭರವಸೆ ನೀಡಿದರೆ ಮಾತ್ರ ಈ ಬಗ್ಗೆ ಪುನರ್ ಪರಿಶೀಲಿಸಲು ತೀರ್ಮಾನಿಸಲಾಯಿತು. ಸಮಿತಿಯ ಅಧ್ಯಕ್ಷ ಜಾರ್ಜ್ ಫೆರ್ನಾಂಡಿಸ್, ಉಪಾಧ್ಯಕ್ಷ ಸುಂದರ್ ಶೆಟ್ಟಿ, ಕಾರ್ಯದರ್ಶಿ ಸುರೇಂದ್ರ ಭಟ್, ಜೊತೆಕಾರ್ಯದರ್ಶಿಗಳಾದ ಸೆಲಿನಾ ಅಬ್ರೋವ್, ವಿನಯಕುಮಾರ್ ಹಾಗೂ ನೂರಕ್ಕೂ ಅಧಿಕ ಮಂದಿ ನಾಗರಿಕರು ಪಾಲ್ಗೊಂಡಿದ್ದರು.





