‘ಹಿಂಸೆಯನ್ನು ಪ್ರತಿಪಾದಿಸುವ ಯುದ್ಧ ಬೇಡ’
ಕೊಣಾಜೆ, ಫೆ.12: ಮಾತುಕತೆಯಿಂದ ಎಂತಹ ಸಮಸ್ಯೆಗಳನ್ನೂ ಪರಿಹರಿಸಿಕೊಳ್ಳಬಹುದು. ಹಿಂಸೆಯನ್ನು ಪ್ರತಿಪಾದಿಸುವ ಯುದ್ಧ ಬೇಡವೇ ಬೇಡ ಎಂಬ ಆಶಯವನ್ನು ಭರತೇಶ ವೈಭವ ಕೃತಿಯಲ್ಲಿ ಕವಿ ರತ್ನಾಕರವರ್ಣಿ ಮಂಡಿಸಿದ್ದಾನೆ. ಈ ಆಶಯಗಳು ನಮ್ಮ ಕಾಲಕ್ಕೆ ಹೆಚ್ಚು ಪ್ರಸ್ತುತ ಎಂದು ಮೂಡುಬಿದಿರೆ ಜೈನ ಪ್ರೌಢಶಾಲೆಯ ಅಧ್ಯಾಪಕ ಮುನಿರಾಜ ರೆಂಜಾಳ ಹೇಳಿದರು.ಮಂಗಳವಾರ ರಥಬೀದಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ರಜತ ಸಂಭ್ರಮ ಮಂಗಳ ಪ್ರಚಾರೋಪನ್ಯಾಸ ಮಾಲಿಕೆಯಲ್ಲಿ ರತ್ನಾಕರ ವರ್ಣಿಯ 500ನೆ ವರ್ಷದ ನೆನಪು ಕಾರ್ಯಕ್ರಮದಲ್ಲಿ ‘ರತ್ನಾಕರವರ್ಣಿಯ ವಿಚಾರ ಪ್ರಸ್ತುತತೆ’ ಎಂಬ ವಿಷಯದಲ್ಲಿ ಅವರು ಉಪನ್ಯಾಸ ನೀಡಿದರು.
ರಥಬೀದಿ ಸರಕಾರಿ ಕಾಲೇಜಿನ ಪ್ರಾಂಶುಪಾಲ ಪ್ರೊ. ರಾಜಶೇಖರ ಹೆಬ್ಬಾರ್.ಸಿ ಅಧ್ಯಕ್ಷತೆ ವಹಿಸಿದ್ದರು. ಪ್ರಸಾರಾಂಗದ ಸಹಾಯಕ ನಿರ್ದೇಶಕ ಡಾ. ಧನಂಜಯ ಕುಂಬ್ಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ಪ್ರಕಾಶಚಂದ್ರ ಶಿಶಿಲ ಸ್ವಾಗತಿಸಿದರು. ಕಾಲೇಜಿನ ಶೈಕ್ಷಣಿಕ ಸಲಹೆಗಾರ ಡಾ. ಶಿವರಾಮ್ ವಂದಿಸಿದರು. ಉಪನ್ಯಾಸಕ ರವಿಕುಮಾರ್ ಉಪಸ್ಥಿತರಿದ್ದರು. ನಿರ್ಮಿತಾ ಕಾರ್ಯಕ್ರಮ ನಿರೂಪಿಸಿದರು.





