ಜೆಎನ್ಯು ವಿಷಯ ಮುಂದಿಟ್ಟು ಮೋದಿ ವಿರುದ್ಧ ಸಂಚು ನಡೆಸಲಾಗುತ್ತಿದೆ" ಕೇಂದ್ರ ಸಚಿವೆ ಉಮಾ ಭಾರತಿ
ಝಾನ್ಸಿ: ಜೆಎನ್ಯು ಪ್ರಕರಣದಲ್ಲಿ ನಡೆಯುತ್ತಿರುವ ವಿವಾದದ ಕುರಿತು ಪ್ರಸ್ತಾಪಿಸಿದ ಕೇಂದ್ರ ಸಚಿವೆ ಉಮಾಭಾರತಿ, ಕಾಂಗ್ರೆಸ್ ಮತ್ತು ಎಡ ಪಕ್ಷಗಳು ಜೊತೆಗೂಡಿ ಪ್ರಧಾನಿ ಮೋದಿಯ ವಿರುದ್ಧ ಸಂಚು ನಡೆಸುತ್ತಿವೆ ಎಂದು ಹೇಳಿದ್ದಾರೆ.
ಎಡಪಂಥೀಯ ವಿಚಾರಧಾರೆಗಳನ್ನು ದೇಶವು ನಿರಾಕರಿಸಿದೆ ಹಾಗೂ ಕಾಂಗ್ರೆಸ್ ಪೂರ್ಣವಾಗಿ ಮುಗಿದು ಹೋಗಿದೆ. ಒಂದಕ್ಕೆ ಬುದ್ಧಿ ಇಲ್ಲವಾದರೆ ಇನ್ನೊಂದಕ್ಕೆ ಬೆಂಬಲಿಗರಿಲ್ಲ ಎಂದು ಅವರು ಕಿಡಿಕಾರಿದ್ದಾರೆ. ಝಾನ್ಸಿಯಲ್ಲಿ ಪತ್ರಕರ್ತರನ್ನುದ್ದೇಶಿಸಿ ಮಾತಾಡಿದ ಉಮಾಭಾರತಿ ಜೆಎನ್ಯು ಮತ್ತು ಪುಣೆ ಫಿಲಂ ಇನ್ಸ್ಟಿಟ್ಯೂಟ್ನಲ್ಲಿ ಗದ್ದಲವಾದಾಗ ರಾಹುಲ್ ಗಾಂಧಿ ಅಲ್ಲಿ ತಲುಪುತ್ತಾರೆ.
ಮಕ್ಬೂಲ್ ಭಟ್ ಮತ್ತು ಅಫ್ಝಲ್ಗುರುಗೆ ದೇಶದ ನ್ಯಾಯ ವ್ಯವಸ್ಥೆ ಪ್ರಕಾರ ಗಲ್ಲು ನೀಡಲಾಗಿದೆ. ಇದನ್ನು ಒಂದು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಮಾನ್ಯ ಮಾಡುವುದಿಲ್ಲವೆಂಬುದು ದುರದೃಷ್ಟಕರವಾದುದು ಎಂದು ಉಮಾ ಹೇಳಿದ್ದಾರೆ.
ಅಭಿವ್ಯಕ್ತಿಯ ಮರೆಯಲ್ಲಿ ಸಕಲ ಮಿತಿಯನ್ನು ಮೀರುವುದು ನಡೆಯುತ್ತಿದೆ. ನಾವು ರಾಷ್ಟ್ರದ ವಿಷಯದಲ್ಲಿ ಕಠಿಣವಾಗುವ ಆವಶ್ಯಕತೆ ಇದೆ. ಅದೇ ವೇಳೆ ಧರ್ಮದ ವಿಚಾರದಲ್ಲಿ ಉದಾರ ನಿಲುವು ತಳೆಯಬೇಕಾಗಿದೆ ಎಂದೂ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.