ಚುಟುಕು ಸುದ್ದಿಗಳು
ಉಪ್ಪಿನಂಗಡಿ ಡಿವಿಜನ್ನ ಚಾಲನಾ ಸಮಾವೇಶ
ಉಪ್ಪಿನಂಗಡಿ, ಫೆ.15: ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ನ ರಾಜ್ಯ ಸಮಿತಿಯ ವತಿಯಿಂದ ಎಪ್ರಿಲ್ ತಿಂಗ ಳಲ್ಲಿ ನಡೆಯಲಿರುವ ‘ಮರಳಿ ಬಾ ಪರಂಪರೆಗೆ’ ಡಿವಿಜನ್ ಕಾನ್ಫರೆನ್ಸ್ಗೆ ಚಾಲನೆ ನೀಡಲಾಯಿತು. ಡಿವಿಜನ್ ಅಧ್ಯಕ್ಷ ಎಸ್.ಎಂ. ಶರೀಫ್ ಸಖಾಫಿ ಅಧ್ಯಕ್ಷತೆ ವಹಿಸಿದ್ದರು. ಡಿವಿಜನ್ ಉಪಾಧ್ಯಕ್ಷ ಇಲ್ಯಾಸ್ ಲತೀಫಿ ಉಜಿರಿ ಬೆಟ್ಟು ಸಭೆ ಉದ್ಘಾಟಿಸಿದರು. ‘ಮರಳಿ ಬಾ ಪರಂಪರೆಗೆ’ ಎನ್ನುವ ವಿಷಯದ ಕುರಿತು ಡಿವಿಜನ್ ಕಾರ್ಯದರ್ಶಿ ಬಿ. ಮುಹಮ್ಮದ್ ಅಲಿ ತುರ್ಕಳಿಕೆ ಹಾಗೂ ‘ಭಯೋತ್ಪಾದನೆ ವಿರುದ್ಧ ಜಿಹಾದ್’ ಎಂಬ ವಿಷಯದ ಕುರಿತು ಜಿಲ್ಲಾ ಸದಸ್ಯ ಎನ್.ಎಂ. ಶರೀಫ್ ಸಖಾಫಿ ಕುಪ್ಪೆಟ್ಟಿ ಮತ್ತು ಡಿವಿಜನ್ ಕ್ಯಾಂಪಸ್ ಕಾರ್ಯದರ್ಶಿ ಅಬ್ದುಸ್ಸಮದ್ ಉಜಿರಿ ಬೆಟ್ಟು ಮಾತನಾಡಿದರು.
ವೇದಿಕೆಯಲ್ಲಿ ಉಪ್ಪಿನಂಗಡಿ ಎಸ್ವೈಎಸ್ ಮುಖಂಡ ಎಂ.ಎಚ್. ಅಬ್ದುಲ್ ಖಾದರ್ ಹಾಜಿ, ಡಿವಿಜನ್ನ ಮುಖಂಡರಾದ ಮಸೂದ್ ಸಅದಿ, ಶಫೀಕ್ ಅಹ್ಸನಿ, ಶರೀಫ್ ಮದನಿ, ಇಸಾಖ್ ಮದನಿ, ಮುಹಮ್ಮದ್ ಸಖಾಫಿ, ಮುಸ್ತಫಾ ಸಅದಿ, ಕೆಸಿಎಫ್ ಮುಖಂಡ ಅಬ್ದುರ್ರಹ್ಮಾನ್ ಮುರ ಮತ್ತಿತರರು ಉಪಸ್ಥಿತರಿದ್ದರು. ಡಿವಿಜನ್ ಕಾರ್ಯದರ್ಶಿ ಮುಸ್ತಫಾ ಉರುವಾಲು ಪದವು ಸ್ವಾಗತಿಸಿದರು. ಅಶ್ರಫ್ ಮೂರುಗೋಳಿ ವಂದಿಸಿದರು.
ಅಭಿವೃದ್ಧಿ ಯೋಜನೆ ತಯಾರಿಗೆ ಮೇಲುಸ್ತುವಾರಿ ಸಮಿತಿ
ಕಾರ್ಕಳ, ಫೆ.15: ಗ್ರಾಪಂಗಳ ಅಭಿವೃದ್ಧಿ ಯೋಜನೆ ತಯಾರಿಸುವ ಸಂಬಂಧದ ಪ್ರಕ್ರಿಯೆಗಳ ಮೇಲುಸ್ತುವಾರಿ ವಹಿಸಲು ರಾಜ್ಯಮಟ್ಟದ ಅಧಿಕಾರಯುಕ್ತ ಸಮಿತಿಯನ್ನು ಸರಕಾರವು ರಚಿಸಿದೆ.
ಸರಕಾರದ ಅಭಿವೃದ್ಧಿ ಆಯುಕ್ತರು ಹಾಗೂ ಸರಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಸಮಿತಿ ಅಧ್ಯಕ್ಷರಾಗಿರುವರು. ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ರಾಜ್ ಪ್ರಧಾನ ಕಾರ್ಯದರ್ಶಿಗಳು ಸಂಚಾಲಕರಾಗಿರುವರು. ಅರಣ್ಯ, ಪರಿಸರ ಮತ್ತು ಜೀವಿ ಶಾಸ್ತ್ರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ, ಆರ್ಥಿಕ ಇಲಾಖೆ, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಶಿಕ್ಷಣ ಇಲಾಖೆ (ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ), ಕೃಷಿ ಇಲಾಖೆ, ಪಶು ಸಂಗೋಪನಾ ಮತ್ತು ಮೀನುಗಾರಿಕಾ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು, ಸಮಾಜ ಕಲ್ಯಾಣ ಇಲಾಖೆ, ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಗಳ ಆಯುಕ್ತರು, ಅಬ್ದುಲ್ ನಜೀರ್ ಸಾಬ್ ಗ್ರಾಮೀಣಾಭಿವೃದ್ದಿ ಮತ್ತು ಪಂ.ರಾಜ್ ಸಂಸ್ಥೆ ಮೈಸೂರು ಇದರ ನಿರ್ದೇಶಕರು ಸಮಿತಿಯ ಸದಸ್ಯರಾಗಿರುತ್ತಾರೆ. ಗ್ರಾಪಂ ಅಭಿವೃದ್ದಿ ಯೋಜನೆ ತಯಾರಿಕೆ ಸಂಬಂಧ ಸರಕಾರದ ಹಂತದಲ್ಲಿ ಸೂಕ್ತ ಆದೇಶ ಹಾಗೂ ನಿರ್ಣಯ ಕೈಗೊಳ್ಳುವುದು. ಇಲಾಖೆಗಳ ಮಧ್ಯೆ ಸಮನ್ವಯ, ಮಾನವ ಸಂಪನ್ಮೂಲ, ತಾಂತ್ರಿಕ ಸೇವೆಗಳನ್ನು ಒಳಗೊಂಡಂತೆ ವಿವಿಧ ಯೋಜನೆ ಕಾರ್ಯಕ್ರಮಗಳನ್ನು ಒಗ್ಗೂಡಿಸಿ ಸಂಪನ್ಮೂಲಗಳನ್ನು ಲೆಕ್ಕ ಹಾಕುವ ಬಗ್ಗೆ ಸೂಚನೆ ಹೊರಡಿಸುವುದು ಮುಂತಾದ ಅಧಿಕಾರಗಳನ್ನು ಸಮಿತಿಯು ಹೊಂದಿರುತ್ತದೆ.
ಪೌರಕಾರ್ಮಿಕರಿಗೆ ಗೌರವ
ಸುಳ್ಯ, ಫೆ.15: ಯುವ ಬ್ರಿಗೇಡ್ ವತಿಯಿಂದ ಪೌರಕಾರ್ಮಿಕರಿಗೆ ಗೌರವ ನೀಡುವ ಕಾರ್ಯಕ್ರಮ ನಗರಪಂಚಾಯತ್ ಸಮುದಾಯಭವನದಲ್ಲಿ ನಡೆಯಿತು.
ಫೆಬ್ರವರಿ 14ನ್ನು ಪ್ರೇಮಿಗಳ ದಿನದ ಬದಲು ಪೌರ ಕಾರ್ಮಿಕರನ್ನು ಗೌರವಿಸುವ ದಿನವನ್ನಾಗಿ ಆಚರಿಸುವ ಕಾರ್ಯಕ್ರಮ ಸುಳ್ಯದಲ್ಲಿ ನಡೆಯಿತು. ಸಮಾರಂಭದಲ್ಲಿ ಪೌರ ಕಾರ್ಮಿಕ ಕುಟುಂಬಗಳಿಗೆ ಅಕ್ಕಿ, ಪುಸ್ತಕ ಕೊಡುಗೆಯಾಗಿ ನೀಡಲಾಯಿತು. ಮುಖ್ಯ ಅತಿಥಿಗಳಾಗಿದ್ದ ನಗರ ಪಂಚಾಯತ್ ಅಧ್ಯಕ್ಷ ಪ್ರಕಾಶ್ ಹೆಗ್ಡೆ ಮಾತನಾಡಿದರು. ಯುವ ಬ್ರಿಗೇಡ್ನ ಶ್ರೀಕೃಷ್ಣ ಉಪಾಧ್ಯಾಯ, ನಟರಾಜ ಶರ್ಮ, ಉದಯ ಬಾಸ್ಕರ್ ಮೊದಲಾದವರಿದ್ದರು.
ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿ: ಬಿಜೆಪಿ
ಉಡುಪಿ, ಫೆ.15: ಅಪ್ಝುಲ್ಗುರು ಪರ ಘೋಷಣೆ ಕೂಗುವ ಕಾಲೇಜು ವಿದ್ಯಾರ್ಥಿಯನ್ನು ಬಂಧಿಸಿರುವುದರ ವಿರುದ್ಧ ಮಾತನಾಡುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪರೋಕ್ಷವಾಗಿ ದೇಶದ್ರೋಹಿಗಳಿಗೆ ಪ್ರೋತ್ಸಾಹ ನೀಡುವ ಕಾರ್ಯ ಮಾಡುತ್ತಿದ್ದಾರೆ. ಅಂತಹ ಪಕ್ಷವನ್ನು ಈ ಚುನಾವಣೆಯಲ್ಲಿ ತಿರಸ್ಕರಿಸಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಕರೆ ನೀಡಿದ್ದಾರೆ.
ಪದಾಧಿಕಾರಿಗಳ ಆಯ್ಕೆ
ಮುಲ್ಕಿ, ಫೆ.15: ಹಿಮಾಯತುಲ್ ಇಸ್ಲಾಂ ಸಮಿತಿ (ರಿ) ಕಾರ್ನಾಡು ಮುಲ್ಕಿ ಇದರ ನೂತನ ಅಧ್ಯಕ್ಷರಾಗಿ ಮುನೀರ್ ಕಾರ್ನಾಡ್, ಉಪಾಧ್ಯಕ್ಷರಾಗಿ ಹಾಜಿ ಅಬ್ದುಲ್ ಖಾದರ್, ಕಾರ್ಯದರ್ಶಿಯಾಗಿ ಅಬ್ದುಲ್ ಹಮೀದ್ ಕಿಲ್ಪಾಡಿ, ಜೊತೆ ಕಾರ್ಯದರ್ಶಿಯಾಗಿ ಹಕೀಂ, ಖಜಾಂಚಿಯಾಗಿ ರಿಝ್ವಾನ್ ಕಾರ್ನಾಡ್ ಹಾಗೂ ಸದಸ್ಯರಾಗಿ ಕೆ.ಎಂ. ಮುಹಮ್ಮದ್, ರಹ್ಮಾನ್ ಕೇರಿ, ಅರಫಾ, ಬದ್ರುದ್ದೀನ್ ದರ್ಗಾರೋಡ್, ಹುಸೈನ್ ಕೇರಿ, ಇಬ್ರಾಹೀಂ ಬಾವ, ರಿಯಾಝ್, ಇಫಾಝ್, ಇಮಾಝ್, ಮುಹಮ್ಮದ್ ಸಾದಿಕ್ ಆಯ್ಕೆಯಾಗಿದ್ದಾರೆ.







