ಎಂಡೋ ಸಂತ್ರಸ್ತರಿಗೆ ನಿರಂತರ ಸೇವೆಗೆ ಕ್ರಮ ಎ.ಬಿ. ಇಬ್ರಾಹಿಂ
ಮಂಗಳೂರು ಫೆ, 16; ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಸುಮಾರು 3900ಕ್ಕೂ ಹೆಚ್ಚು ಎಂಡೋ ಪೀಡಿತರಿಗೆ ನಿರಂತರವಾಗಿ ಚಿಕಿತ್ಸೆ, ಪೌಷ್ಠಿಕ ಆಹಾರ, ವೃತ್ತಿ ತರಬೇತಿ ದೊರಕಿಸುವ ನಿಟ್ಟಿನಲ್ಲಿ ಪರ್ಯಾಯ ವ್ಯವಸ್ಥೆಗಳನ್ನು ಕಂಡುಕೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರು ಸೂಚಿಸಿದರು. ಅವರು ಇಂದು ತಮ್ಮ ಕಛೇರಿಯಲ್ಲಿ ಈ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಸ್ತುತ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಮತ್ತು ಪುತ್ತೂರು ತಾಲೂಕಿನ ಅನಂತಾಡಿಯಲ್ಲಿ ಎಂಡೋಪೀಡಿತ ಮಕ್ಕಳ ಆರೈಕೆಗೆ 2 ಡೇ ಕೇರ್ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದು, ಹೆಚ್ಚುವರಿಯಾಗಿ ಇನ್ನೂ 4 ಡೇ ಕೇರ್ ಕೇಂದ್ರಗಳನ್ನು ತೆರೆಯಲು ಯೋಜಿಸಲಾಗಿದೆ. ಪ್ರತಿ ಕೇಂದ್ರಕ್ಕೆ ತಿಂಗಳೊಂದಕ್ಕೆ ರೂ. 1.62 ಲಕ್ಷ ವೆಚ್ಚವಾಗಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ರಾವ್ ಸಭೆಗೆ ತಿಳಿಸಿದರು. ದ.ಕ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಿ.ಐ. ಶ್ರೀವಿದ್ಯಾ ಮಾತನಾಡಿ ಇಲ್ಲಿಯವರೆಗೆ ಡೇ ಕೇರ್ ಕೇಂದ್ರಗಳಲ್ಲಿ ಆಹಾರ, ಪ್ರಯಾಣ, ಸಿಬ್ಬಂದಿ ವೆಚ್ಚಗಳ ಲೆಕ್ಕ ನೀಡುವಂತೆ ಸಂಬಂಧಿಸಿದವರಿಗೆ ಸೂಚಿಸಿದರು. ಡೇ ಕೇರ್ ಕೇಂದ್ರಗಳ ಜೊತೆಗೆ ಅಂಗನವಾಡಿ ಕೇಂದ್ರಗಳಲ್ಲಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ಎಂಡೋ ಸಂತ್ರಸ್ತರಿಗೆ ಉತ್ತಮ ಚಿಕಿತ್ಸೆ , ಹಾಗೂ ವೃತ್ತಿ ತರಬೇತಿಗಳನ್ನು ನೀಡುವ ಬಗ್ಗೆ ಚಿಂತನೆಯಾಗುತ್ತಿದೆ ಎಂದರು.





