ಪಾಟಿಯಾಲ ಹೌಸ್ ಹಲ್ಲೆ ಪ್ರಕರಣ ಪತ್ರಕರ್ತರು, ಉಪನ್ಯಾಸಕರಿಂದ ಬೃಹತ್ ಪ್ರತಿಭಟನೆ

ಹೊಸದಿಲ್ಲಿ,ಫೆ.16: ಜೆಎನ್ಯು ವಿದ್ಯಾರ್ಥಿಗಳ ವಿವಾದಾತ್ಮಕ ಪ್ರತಿಭಟನೆಯ ವಿರುದ್ಧ ನಡೆದ ಪೊಲೀಸ್ ಕಾರ್ಯಾಚರಣೆಯ ಬಗ್ಗೆ ಸಂಸತ್ನಲ್ಲಿ ಚರ್ಚಿಸಲು ತಾನು ಇಚ್ಛಿಸುವುದಾಗಿ ಕೇಂದ್ರ ಸರಕಾರ ಸಂಧಾನದ ಕೊಡುಗೆ ನೀಡಿರುವಂತೆಯೇ, ಪಾಟಿಯಾಲ ಹೌಸ್ ನ್ಯಾಯಾಲಯದ ಸಂಕೀರ್ಣದಲ್ಲಿ ಸಂಘಪರಿವಾರದ ಬೆಂಬಲಿಗರಿಂದ ನಡೆದ ಹಲ್ಲೆಯನ್ನು ಪ್ರತಿಭಟಿಸಿ ವಿದ್ಯಾರ್ಥಿಗಳು, ಪತ್ರಕರ್ತರು ಹಾಗೂ ಶಿಕ್ಷಕರು ಮಂಗಳವಾರ ಹೊಸದಿಲ್ಲಿಯಲ್ಲಿ ಭಾರೀ ಪ್ರತಿಭಟನೆ ನಡೆಸಿದರು.
ಪಾಟಿಯಾಲ ಹೌಸ್ ನ್ಯಾಯಾಲಯದ ಆವರಣದಲ್ಲಿ ಸೋಮವಾರ ತಮ್ಮ ಮೇಲೆ ನಡೆದ ಹಲ್ಲೆಯನ್ನು ಪ್ರತಿಭಟಿಸಿ ಪತ್ರಕರ್ತರು ಸುಪ್ರೀಂಕೋರ್ಟ್ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಅಭಿವ್ಯಕ್ತಿ ಸ್ವಾತಂತ್ರದ ಪರ ಅವರು ಘೋಷಣೆಗಳನ್ನು ಕೂಗಿದರು ಹಾಗೂ ತಮಗೆ ರಕ್ಷಣೆ ನೀಡಲು ದಿಲ್ಲಿ ಪೊಲೀಸರು ವಿಫಲರಾಗಿದ್ದಾರೆಂದು ಆರೋಪಿಸಿದರು. ಪತ್ರಕರ್ತರ ನಿಯೋಗವೊಂದು ಕೇಂದ್ರ ಸಚಿವ ರಾಜ್ನಾಥ್ಸಿಂಗ್ ಅವರನ್ನು ಭೇಟಿಯಾಗಿ ದೂರು ಸಲ್ಲಿಸಿತು. ಏತನ್ಮಧ್ಯೆ ಪಾಟಿಯಾಲ ಹೌಸ್ ಆವರಣದಲ್ಲಿ ನಡೆದ ಹಿಂಸಾಚಾರದಲ್ಲಿ ಶಾಮೀಲಾದ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ಆಲಿಕೆಯನ್ನು ಬುಧವಾರ ನಡೆಸಲು ಸುಪ್ರೀಂಕೋರ್ಟ್ ಸಮ್ಮತಿಸಿದೆ. ಬಂಧಿತ ವಿದ್ಯಾರ್ಥಿ ನಾಯಕ ಕನ್ಹಯ್ಯಾ ಕುಮಾರ್ ಬಿಡುಗಡೆಗೆ ಆಗ್ರಹಿಸಿ ಜೆಎನ್ಯು ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಗೆ ಇಂದು ಉಪನ್ಯಾಸಕರೂ ಕೈಜೋಡಿಸಿದ್ದು, ತರಗತಿಗಳನ್ನು ಬಹಿಷ್ಕರಿಸಿದ್ದಾರೆ.‘ಸುಮಾರು 500 ಮಂದಿ ಶಿಕ್ಷಕರು ವಿವಿಯ ಆಡಳಿತ ಕಚೇರಿಯ ಮುಂದೆ ಜಮಾಯಿಸಿ ವಿದ್ಯಾರ್ಥಿಗಳಿಗೆ ಬೆಂಬಲ ವ್ಯಕ್ತಪಡಿಸಿ ಘೋಷಣೆಗಳನ್ನು ಕೂಗಿದರು.
ಕನ್ಹಯ್ಯಕುಮಾರ್ನನ್ನು ತಕ್ಷಣವೇ ಬಿಡುಗಡೆಗೊಳಿಸಬೇಕು ಹಾಗೂ ಆತನ ವಿರುದ್ಧದ ಎಲ್ಲಾ ಪ್ರಕರಣಗಳನ್ನು ಹಿಂತೆಗೆದುಕೊಳ್ಳಬೇಕೆಂದು ಅವರು ಆಗ್ರಹಿಸಿದರು. ವಿದೇಶಿ ವಿಶ್ವವಿದ್ಯಾನಿಲಯಗಳ ಶಿಕ್ಷಣಜ್ಞಿಂದಲೂ ಜೆಎನ್ಯು ವಿದ್ಯಾರ್ಥಿಗಳ ಮುಷ್ಕರಕ್ಕೆ ಬೆಂಬಲ ವ್ಯಕ್ತವಾಗಿದೆ ‘‘ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ವಿಶ್ವದಾದ್ಯಂತದ ಶಿಕ್ಷಣತಜ್ಞರು ಜೆಎನ್ಯುನಲ್ಲಿ ಉದ್ಭವಿಸಿರುವ ಬಿಕ್ಕಟ್ಟನ್ನು ಆತಂಕದಿಂದ ಗಮನಿಸುತ್ತಿದ್ದಾರೆ. ವಿದ್ಯಾರ್ಥಿಗಳ ಆಕ್ರಮ ಬಂಧನ ಹಾಗೂ ಏಕಪಕ್ಷೀಯ ಅಮಾನತನ್ನು ನಮ್ಮ ಸಹದ್ಯೋಗಿಗಳು ವಿರೋಧಿಸುತ್ತಿರುವಾಗ, ನಾವು ವೌನವಾಗಿರುವುದು ಸಾಧ್ಯವಿಲ್ಲವೆಂದು, 455 ಮಂದಿ ಶಿಕ್ಷಣ ತಜ್ಞರು ಸಹಿಹಾಕಿರುವ ಹೇಳಿಕೆ ತಿಳಿಸಿದೆ. ವಿಶ್ವವಿದ್ಯಾನಿಲಯದ ಹೊರಗೆ ವಿಎಚ್ಪಿ ಹಾಗೂ ಬಜರಂಗದಳದ ಬೆಂಬಲಿಗರು ಪ್ರತಿಭಟನೆ ನಡೆಸಿ,ಜೆಎನ್ಯುವಿನಲ್ಲಿ ದೇಶವಿರೋಧಿ ಘೋಷಣೆಗಳನ್ನು ಕೂಗಿದವರನ್ನು ಬಂಧಿಸುವಂತೆ ಆಗ್ರಹಿಸಿದರು. ಜೆಎನ್ಯು ಆಡಳಿತವು ರಾಷ್ಟ್ರವಿರೋಧಿ ಕೃತ್ಯದಲ್ಲಿ ತೊಡಗಿದ್ದು, ಅದನ್ನು ವಿಸರ್ಜಿಸಬೇಕೆಂದು ಪ್ರತಿಭಟನಕಾರರು ಆಗ್ರಹಿಸಿದರು.





