ದಿಲ್ಲಿ ಪೊಲೀಸ್ ಮುಖ್ಯಸ್ಥ ಬಸ್ಸಿಗೆ ಮಾಹಿತಿ ಆಯುಕ್ತ ಹುದ್ದೆ?

ನವದೆಹಲಿ : ಜವಾಹರ್ಲಾಲ್ ನೆಹರೂ ವಿಶ್ವವಿದ್ಯಾನಿಲಯ ಪ್ರಕರಣವನ್ನುದೆಹಲಿ ಪೊಲೀಸರು ನಿಭಾಯಿಸಿದ ರೀತಿ ಹಲವು ಪ್ರಶ್ನೆಗಳನ್ನು ಎತ್ತಿದ್ದರೂ ದೆಹಲಿ ಪೊಲೀಸ್ ಆಯುಕ್ತ ಬಿ ಎಸ್ ಬಸ್ಸಿಯವರಿಗೆ ಪದೋನ್ನತಿ ದೊರೆಯುವ ಸಂಭವವಿದೆ.
ಮೂಲಗಳ ಪ್ರಕಾರ ಬಸ್ಸಿಯವರು ಮುಂದಿನ ಮಾಹಿತಿ ಆಯುಕ್ತರಾಗಿ ಅಧಿಕಾರವಹಿಸಿಕೊಳ್ಳುವ ಸಾಧ್ಯತೆಯಿದೆ. ಆಯ್ಕೆ ಸಮಿತಿ ಮುಂದಿನ ಮಾಹಿತಿ ಆಯುಕ್ತರನ್ನು ಫೆ. 19ರಂದು ಹೆಸರಿಸಲಿದೆ.
ಈ ಹೊಸ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದಎಎಪಿ ನಾಯಕ ಆಶುತೋಷ್, ದೆಹಲಿಯಲ್ಲಿನ ಘಟನೆಗಳನ್ನು ಸರಿಯಾಗಿ ನಿಭಾಯಿಸಲಾಗದ ಪೊಲೀಸ್ ಆಯುಕ್ತರೊಬ್ಬರನ್ನು ಪುರಸ್ಕರಿಸಿರುವುದು ಅಘಾತಕಾರಿಯಾಗಿದೆಯೆಂದು ಹೇಳಿದರು.
‘‘ಸರಕಾರಕ್ಕೆ ಸಹಾಯ ಮಾಡುವವರನ್ನು ಪುರಸ್ಕರಿಸಲಾಗುತ್ತದೆಯೆಂದು ಇದರಿಂದ ತಿಳಿದು ಬರುತ್ತದೆ. ಸರಕಾರದ ಉನ್ನತ ಮಟ್ಟದ ನಾಯಕರ ಪರವಾಗಿ ಬಸ್ಸಿಯವರು ಕಾರ್ಯನಿರ್ವಹಿಸುತ್ತಿದ್ದಾರೆ,’’ ಎಂದು ಅವರು ಆರೋಪಿಸಿದರು.
ಜೆಎನ್ಯು ವಿದ್ಯಮಾನಗಳ ಬಗ್ಗೆ ಪೊಲೀಸ್ ಆಯುಕ್ತ ಬಸ್ಸಿ ಪ್ರಧಾನಿಯವರನ್ನು ಕಂಡು ವಿವರಿಸಿದ ಮರುದಿನ ಈ ಬೆಳವಣಿಗೆ ನಡೆದಿದೆ. ಪ್ರಧಾನಿಯನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಬಸ್ಸಿದೇಶದ್ರೋಹ ಆರೋಪದ ಮೇಲೆ ಬಂಧಿತನಾಗಿರುವ ಜೆಎನ್ಯು ವಿದ್ಯಾರ್ಥಿ ಯೂನಿಯನ್ ನಾಯಕ ಕನ್ಹಯ್ಯ ಕುಮಾರ್ ವಿರುದ್ಧ ಸಾಕಷ್ಟು ಸಾಕ್ಷ್ಯಗಳಿವೆಯೆಂದು ಹೇಳಿದ್ದರು.







