ಕೋರ್ಟ್ ಹಿಂಭಾಗದ ರಸ್ತೆಯ ಮೂಲಕ ಕನ್ಹಯ್ಯ ಕುಮಾರ್ ತಿಹಾರ್ ಜೈಲಿಗೆ !
ವಕೀಲರಿಂದ ಮತ್ತೆ ಹಲ್ಲೆ ನಡೆಯುವ ಭೀತಿ

ಹೊಸದಿಲ್ಲಿ, ಫೆ.17: ಜವಹಾರ್ ಲಾಲ್ ನೆಹರೂ ವಿವಿ ವಿದ್ಯಾರ್ಥಿ ಸಂಘದ ನಾಯಕ ಕನ್ಹೇಯ ಕುಮಾರ್ ಅವರನ್ನು ಇಂದು ರಾತ್ರಿ ಬಿಗು ಭದ್ರತೆಯಲ್ಲಿ ಪಟಿಯಾಲ ನ್ಯಾಯಾಲಯದಿಂದ ತಿಹಾರ್ ಜೈಲಿಗೆ ನ್ಯಾಯಾಲಯದ ಹಿಂಭಾಗದ ರಸ್ತೆಯ ಮೂಲಕ ಕರೆದೊಯ್ಯಲಾಯಿತು.
ಪಟಿಯಾಲ ಹೌಸ್ ಕೋರ್ಟ್ ಇಂದು ಮಧ್ಯಾಹ್ನ ಅವರಿಗೆ ಮಾರ್ಚ್ 2ರ ತನಕ ನ್ಯಾಯಾಂಗ ಬಂಧನ ವಿಧಿಸಲಾಗಿದ್ದರೂ, ಅವರಿಗೆ ವಕೀಲರಿಂದ ಮತ್ತೆ ಹಲ್ಲೆ ನಡೆಯುವ ಭೀತಿಯಿಂದ ಜೈಲಿಗೆ ಕರೆದೊಯ್ಯುವ ಸಾಹಸಕ್ಕೆ ಪೊಲೀಸರು ತಕ್ಷಣ ಇಳಿಯಲಿಲ್ಲ. ಈ ಕಾರಣದಿಂದಾಗಿ ಕನ್ಹೇಯಾ ಪಟಿಯಾಲ ಹೌಸ್ ಕೋರ್ಟ್ನಲ್ಲೇ ರಾತ್ರಿ ತನಕ ಉಳಿದರು.
ನ್ಯಾಯಾಲಯದ ಹೊರಗೆ ಸುಮಾರು ನೂರಕ್ಕೂ ಅಧಿಕ ವಕೀಲರು ಜಮಾಯಿಸಿದ್ದ ಹಿನ್ನೆಲೆಯಲ್ಲಿ ಭದ್ರತಾ ಸಮಸ್ಯೆ ತಲೆದೂರಿತ್ತು.
ಇಂದು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆ ತರುತ್ತಿದ್ದಾಗ ವಕೀಲರ ಗುಂಪೊಂದು ಹಲ್ಲೆಗೈದು ಧಾಂದಲೆ ನಡೆಸಿದ್ದರು. ನ್ಯಾಯಾಲಯದ ಆವರಣದಲ್ಲಿ ಬಂದೋಬಸ್ತ್ಗೆ ಸುಮಾರು 400 ಪೊಲೀಸರನ್ನು ನಿಯೋಜಿಸಲಾಗಿತ್ತಾದರೂ, ಅವರಿಗೆ ಸೂಕ್ತ ಭದ್ರತೆ ಒದಗಿಸಲು ಸಾಧ್ಯವಾಗಲಿಲ್ಲ. ಇದೇ ವೇಳೆ ವಕೀಲರಿಂದ ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ., ಕಲ್ಲು ತೂರಾಟ ನಡೆದಿತ್ತು.





