ಕರ್ಲಪ್ಪಾಡಿಯಲ್ಲಿ ಬ್ರಹ್ಮಕಲಶೋತ್ಸವ, ಶುದ್ಧ ಮನೋಭಾವಕ್ಕೆ ಭಗವಂತ ಒಲಿಯುತ್ತಾನೆ- ಧರ್ಮಪಾಲನಾಥ ಸ್ವಾಮೀಜಿ

ಸುಳ್ಯ: ವೇದಮಂತ್ರಗಳಿಂದ ಪೂಜೆಗಳನ್ನು ಮಾಡಿ ಭಗವಂತನನ್ನು ತೃಪ್ತಿಪಡಿಸುವುದಕ್ಕಿಂತ ಶುದ್ಧ ಹೃದಯದಿಂದ ದೇವರನ್ನು ಆರಾಧಿಸಿದರೆ ಆತ ಒಲಿಯುತ್ತಾನೆ ಎಂದು ಆದಿ ಚುಂಚನಗಿರಿ ಮಂಗಳೂರು ಶಾಖಾ ಮಠದ ಧರ್ಮಪಾಲನಾಥ ಸ್ವಾಮೀಜಿ ಹೇಳಿದ್ದಾರೆ. ಕರ್ಲಪ್ಪಾಡಿ ಶಾಸ್ತಾವೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಮನುಷ್ಯ ಅತ್ಯಂತ ಬುದ್ಧಿಜೀವಿ. ತಾನು ಯಾರೆಂದು ಮೊದಲು ತಿಳಿದುಕೊಳ್ಳಬೇಕು. ಬಳಿಕ ದೇವರನ್ನು ಪೂಜಿಸಬೇಕು. ಧಾರ್ಮಿಕ ಮೌಲ್ಯಗಳಿಲ್ಲದಲ್ಲಿ ಅಶಾಂತಿ, ದುಃಖ ನಿತ್ಯವೂ ನೆಲೆಸುತ್ತದೆ. ಪ್ರತೀ ಮನೆಗಳಲ್ಲಿಯೂ ಮಕ್ಕಳಿಗೆ ಸಂಸ್ಕಾರವನ್ನು ತಿಳಿಸಿಕೊಡುವ ಮೂಲಕ ಮನೆಗಳು ಶ್ರದ್ಧಾ ಕೇಂದ್ರಗಳಾಗುವಂತೆ ಹಿರಿಯರು ನೋಡಿಕೊಳ್ಳಬೇಕು ಎಂದು ಸ್ವಾಮೀಜಿ ಹೇಳಿದರು.
ಸುಬ್ರಹ್ಮಣ್ಯ ಕೆ.ಎಸ್.ಎಸ್. ಕಾಲೇಜಿನ ಪ್ರಾಂಶುಪಾಲ ಮುಡೂರು ಮನಮೋಹನ ಗೌಡ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ಚೆನ್ನೇನಹಳ್ಳಿ ಜನಸೇವಾ ವಿದ್ಯಾಕೇಂದ್ರದ ಸಂಚಾಲಕ ಅ.ಸಾ.ನಿರ್ಮಲಕುಮಾರ್, ಪುಣೆಯಲ್ಲಿ ಯೋಗ ಅಧ್ಯಾಪಕಿ ವಾಣಿ ರೈ, ನಾಟಿವೈದ್ಯೆ ರತ್ನಾವತಿ ಕರ್ಲಪ್ಪಾಡಿ, ಹೊಟೇಲ್ ಉದ್ಯಮಿ ಗುಡ್ಡಪ್ಪ ಗೌಡ ಪೇರಾಲು, ಧರ್ಮಸ್ಥಳ ಯೋಜನೆಯ ಯೋಜನಾಧಿಕಾರಿ ಯುವರಾಜ್ ಜೈನ್, ಸಿ.ಎ.ಬ್ಯಾಂಕ್ ಅಧ್ಯಕ್ಷ ಸುಭೋದ್ ಶೆಟ್ಟಿ ಮೇನಾಲ, ದೇವಸ್ಥಾನದ ಪ್ರಮುಖರಾದ ಧನಂಜಯ ಅಡ್ಪಂಗಾಯ, ಜಗನ್ನಾಥ ರೈ ಪಡ್ಡೈಬನ, ಕರುಣಾಕರ ಅಡ್ಪಂಗಾಯ, ಕರುಣಾಕರ ಕೊಡೆಂಕೇರಿ, ರಾಜೇಶ್ ಶೆಟ್ಟಿ ಮೇನಾಲ, ನಾರಾಯಣ ಬೈಪಡಿತ್ತಾಯ, ಮುದ್ದಪ್ಪ ಗೌಡ ಕರ್ಲಪ್ಪಾಡಿ ವೇದಿಕೆಯಲ್ಲಿದ್ದರು. ನ್ಯಾಯವಾದಿ ಸುಕುಮಾರ್ ಕೋಡ್ತುಗುಳಿ ಸ್ವಾಗತಿಸಿ, ಲಾವಣ್ಯ ಹಾಗೂ ಹರ್ಷಿತಾ ಪ್ರಾರ್ಥಿಸಿದರು. ಅಚ್ಚುತ ಅಟ್ಲೂರು, ನಾಗರಾಜ್ ಮುಳ್ಯ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದಲ್ಲಿ ಅಡ್ಪಂಗಾಯ, ಶಿರಾಜೆ, ಕರ್ಲಪ್ಪಾಡಿ ಕುಟುಂಬದ ವತಿಯಿಂದ ಧರ್ಮಪಾಲನಾಥ ಸ್ವಾಮೀಜಿಯವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.







