ಕಳೆದ ಬಾರಿಯ ಚುನಾವಣೆಗೆ ಹೋಲಿಸಿದರೆ ಈ ಬಾರಿ ದ.ಕ ಜಿಲ್ಲೆಯಲ್ಲಿ ಕಾಂಗ್ರೆಸ್ ಮುನ್ನಡೆ :ಐವನ್ ಡಿಸೋಜ

ಮಂಗಳೂರು,ಫೆ.25: 2010ರ ದ.ಕ ಜಿ.ಪಂ, ತಾ.ಪಂ ಚುನಾವಣೆಯಲ್ಲಿ ಕಾಂಗ್ರೆಸ್ ಪಡೆದುಕೊಂಡಿದ್ದ ಸ್ಥಾನಗಳಿಗೆ ಹೋಲಿಸಿದರೆ ಈ ಬಾರಿಯ ದ.ಕ ಜಿಲ್ಲೆಯ ಜಿ.ಪಂ, ತಾ.ಪಂ ಚುನಾವಣೆಯಲ್ಲಿ ಪಕ್ಷ ಮುನ್ನಡೆ ಕಾಯ್ದುಕೊಂಡಿದ್ದು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯನ್ನು ಬಿಜೆಪಿ ಮುಕ್ತ ಮಾಡಲಾಗುವುದು ಎಂದು ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದರು.
ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಚುನಾವಣೆಯಲ್ಲಿ ನಮ್ಮ ಸ್ಥಿತಿ ತಿಳಿದುಕೊಂಡಿದ್ದೇವೆ. ಇನ್ನು ರಾಜ್ಯದಲ್ಲಿ ಎರಡುವರೆ ವರ್ಷಗಳ ಕಾಂಗ್ರೆಸ್ ಆಡಳಿತ ನಡೆಸಲು ಬಾಕಿಯಿದ್ದು ಜಿಲ್ಲೆಯಲ್ಲಿ ಇರುವ ಒಂದು ಬಿಜೆಪಿ ಶಾಸಕ ಸ್ಥಾನವನ್ನು ಕಸಿದುಕೊಂಡು 8 ವಿಧಾನಸಭಾ ಕ್ಷೇತ್ರದಲ್ಲೂ ಕಾಂಗ್ರೆಸ್ ಜಯಗಳಿಸುವ ಮೂಲಕ ಜಿಲ್ಲೆಯನ್ನು ಬಿಜೆಪಿಮುಕ್ತ ಮಾಡಲಾಗುವುದು ಎಂದು ಹೇಳಿದರು.
ದ.ಕ ಜಿಲ್ಲಾ ಪಂಚಾಯತ್ ನಲ್ಲಿ ಕಳೆದ ಬಾರಿ ಇದ್ದ ಸ್ಥಾನಗಳಿಗಿಂತ ಹೆಚ್ಚಿನ ಸ್ಥಾನ ಪಡೆಯಲಾಗಿದೆ. ಆದರೆ ಅಧಿಕಾರಕ್ಕೆ ಬರಲು ಸಾಧ್ಯವಾಗಲಿಲ್ಲ. ಮತಗಳ ಸಂಖ್ಯೆಯಲ್ಲಿ ಬಿಜೆಪಿ ಜಿಲ್ಲೆಯಲ್ಲಿ ಕೇವಲ 1694 ಮತ ಹೆಚ್ಚು ಪಡೆದಿದೆ. ಮಂಗಳೂರು ತಾಲೂಕಿನಲ್ಲಿ 9255 ಮತ, ಬಂಟ್ವಾಳ ತಾಲೂಕಿನಲ್ಲಿ 9130 ಮತಗಳನ್ನು ಕಾಂಗ್ರೆಸ್ ಬಿಜೆಪಿಗಿಂತ ಹೆಚ್ಚು ಪಡೆದಿದ್ದರೆ , ಬೆಳ್ತಂಗಡಿ ತಾಲೂಕಿನಲ್ಲಿ 2224 ಮತ, ಪುತ್ತೂರು ತಾಲೂಕಿನಲ್ಲಿ 6518 ಮತ, ಸುಳ್ಯ ತಾಲೂಕಿನಲ್ಲಿ 11333 ಮತಗಳು ಬಿಜೆಪಿಗಿಂತ ಕಾಂಗ್ರೆಸ್ ಪಕ್ಷಕ್ಕೆ ಕಡಿಮೆ ಬಿದ್ದಿದೆ ಎಂದು ಹೇಳಿದರು.
ಮೀಸಲಾತಿಯ ಮೂಲಕ ಕಾಂಗ್ರೆಸ್ ಜಿಲ್ಲೆಯಲ್ಲಿ ಅಧಿಕಾರ ನಡೆಸಲು ಪ್ರಯತ್ನಿಸುತ್ತಿದೆ ಎಂದು ಬಿಜೆಪಿ ನಾಯಕರು ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಪಕ್ಷ ಈ ರೀತಿ ಮಾಡುವುದಿಲ್ಲ. ಹೈಕೋರ್ಟ್ ನಿರ್ದೇಶನದಂತೆ ಮೀಸಲಾತಿ ಪ್ರಕಟವಾಗಲಿದೆ. ಒಮದು ವೇಳೆ ಮೀಸಲಾತಿಯ ಬಗ್ಗೆ ಸಂಶಯವಿದ್ದರೆ ನ್ಯಾಯಲಯಲ್ಲಿ ಅದನ್ನು ಪ್ರಶ್ನಿಸಬಹುದು ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಕಸ್ತೂರಿರಂಗನ್ ವರದಿ, ಎತ್ತಿನಹೊಳೆ ಯೋಜನೆ , ಕುಮ್ಕಿ ಮುಂತಾದ ಸ್ಥಳೀಯ ಸಮಸ್ಯೆಗಳು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಾರದಿರಲು ಕಾರಣವಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಮೂಡ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಮನಪಾ ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ಮನಪಾ ಮಾಜಿ ಮೇಯರ್ ಅಶ್ರಫ್ .ಕೆ ಉಪಸ್ಥಿತರಿದ್ದರು.







