ಎಸ್ಸಿ-ಎಸ್ಟಿಗಳ ವಿರುದ್ಧ ದೌರ್ಜನ್ಯ ಪ್ರಕರಣ ಹೆಚ್ಚಳ: ಗೃಹ ಸಚಿವಾಲಯ
ಹೊಸದಿಲ್ಲಿ, ಫೆ.25: ಪರಿಶಿಷ್ಟ ಜಾತಿ ಹಾಗೂ ವರ್ಗಗಳ ಸದಸ್ಯರ ವಿರುದ್ಧ ಅಪರಾಧಗಳು 2013-14ರ ನಡುವೆ ‘ಏರಿಕೆಯ ಪ್ರವೃತ್ತಿಯನ್ನು’ ತೋರಿಸಿವೆಯೆಂದು ಕೇಂದ್ರ ಗೃಹ ಸಚಿವಾಲಯವು ಬುಧವಾರ ಸಂಸತ್ತಿಗೆ ತಿಳಿಸಿದೆ. ದಲಿತ ವಿದ್ಯಾರ್ಥಿ ರೋಹಿತ್ ವೇಮುಲಾರ ಆತ್ಮಹತ್ಯೆ ಮತ್ತು ಅದಕ್ಕೆ ಕಾರಣವಾದ ಸಂದರ್ಭಗಳ ಬಗ್ಗೆ ಲೋಕಸಭೆ ಚರ್ಚೆ ನಡೆಸಿದೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯುರೊ(ಎನ್ಸಿಆರ್ಬಿ) ಇತ್ತೀಚೆಗೆ ಬಿಡುಗಡೆ ಮಾಡಿರುವ ಅಂಕಿ-ಅಂಶಗಳನ್ನು ಉಲ್ಲೇಖಿಸಿದ ಸಚಿವಾಲಯ, ಪರಿಶಿಷ್ಟ ಜಾತಿಗಳ ಸದಸ್ಯರ ಮೇಲಿನ ದೌರ್ಜನ್ಯದ 47 ಸಾವಿರ ಪ್ರಕರಣಗಳು 2014ರಲ್ಲಿ ದಾಖಲಾಗಿವೆ. ಹಿಂದಿನ ವರ್ಷದಲ್ಲಿ 39 ಸಾವಿರ ಪ್ರಕರಣಗಳು ದಾಖಲಾಗಿದ್ದವೆಂದು ರಾಜ್ಯ ಸಭೆಗೆ ಮಾಹಿತಿ ನೀಡಿತು. ಭಾರತದಲ್ಲಿ ಅಪರಾಧಗಳ ಬಗ್ಗೆ ಎಲ್ಲ ರಾಜ್ಯಗಳಿಂದ ಅಂಕಿ-ಅಂಶ ಸಂಗ್ರಹಿಸಲು ಹಾಗೂ ವಿಶ್ಲೇಷಿಸಲು ಒಂದು ವರ್ಷಕ್ಕಿಂತಲೂ ಹೆಚ್ಚು ಕಾಲ ಬೇಕಾಗುತ್ತದೆ. ಆದುದರಿಂದ ಎನ್ಸಿಆರ್ಬಿ ಬಿಡಗಡೆಗೊಳಿಸಿರುವ ‘ಇತ್ತೀಚಿನ’ ಮಾಹಿತಿ, 2014ರಷ್ಟು ಹಿಂದಕ್ಕೆ ಹೋಗುತ್ತದೆ.
ಪರಿಶಿಷ್ಟ ಪಂಗಡಗಳ ಮೇಲೆ ದೌರ್ಜನ್ಯ ನಡೆದ ಪ್ರಕರಣಗಳು 2014ರಲ್ಲಿ ಭಾರೀ ಏರಿಕೆ ದಾಖಲಿಸಿವೆ. 2013ರ 7 ಸಾವಿರಕ್ಕೂ ಕಡಿಮೆ ಪ್ರಕರಣಗಳಿಗೆ ಹೋಲಿಸಿದರೆ 2014ರಲ್ಲಿ ಅಂತಹ ಪ್ರಕರಣಗಳ ಸಂಖ್ಯೆ 11,500ರಷ್ಟು ಏರಿದ್ದವು.
ಉತ್ತರ ಪ್ರದೇಶದಲ್ಲಿ ಎಸ್ಸಿ-ಎಸ್ಟಿ ದೌರ್ಜನ್ಯದ ಗರಿಷ್ಠ ಪ್ರಕರಣಗಳು ದಾಖಲಾಗಿದ್ದರೆ,ಬಳಿಕದ ಸ್ಥಾನಗಳಲ್ಲಿ ಕ್ರಮವಾಗಿ ರಾಜಸ್ಥಾನ ಮತ್ತು ಬಿಹಾರಗಳಿವೆ. 2013ರಲ್ಲಿ ಇಡೀ ದೇಶದಲ್ಲಿ ದಾಖಲಾಗಿದ್ದ ಅಂತಹ ಪ್ರಕರಣಗಳ ಅರ್ಧ ಪಾಲು ಈ 3 ರಾಜ್ಯಗಳದ್ದಾಗಿದೆ. ಅಂತಹ ಪ್ರಕರಣಗಳಲ್ಲಿ ಶಿಕ್ಷೆ ನೀಡುವಲ್ಲೂ ಉತ್ತರ ಪ್ರದೇಶ ಅಗ್ರ ಸ್ಥಾನದಲ್ಲಿದೆ.
2014ರಲ್ಲಿ ಮಧ್ಯಪ್ರದೇಶವು ಅತ್ಯಂತ ಕೆಟ್ಟ ಮೂರು ರಾಜ್ಯಗಳ ಪಟ್ಟಿಯಲ್ಲಿದ್ದು, 4 ಸಾವಿರ ಪ್ರಕರಣಗಳು ದಾಖಲಾಗಿದ್ದವು. ಈಶಾನ್ಯ ರಾಜ್ಯಗಳಾದ ಮೇಘಾಲಯ, ಮಿರೆರಾಂ ಮತ್ತು ನಾಗಾಲ್ಯಾಂಡ್ಗಳಲ್ಲಿ ಈ ಎರಡು ವರ್ಷಗಳಲ್ಲಿ ಎಸ್ಸಿ-ಎಸ್ಟಿ ದೌರ್ಜನ್ಯದ ಯಾವುದೇ ಪ್ರಕರಣ ದಾಖಲಾಗಿಲ್ಲ.
2013 ಹಾಗೂ 2014ರಲ್ಲಿ ಮಣಿಪುರದಲ್ಲಿ ಕೇವಲ ಒಂದು ದಲಿತ ದೌರ್ಜನ್ಯ ಪ್ರಕರಣ ದಾಖಲಾಗಿದೆಯೆಂದು ಗೃಹ ಸಚಿವಾಲಯ ವಿವರಿಸಿದೆ.





