ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಎಚ್ಚರ ವಹಿಸಿ: ಡಿಸಿ

ಮಂಗಳೂರು, ಫೆ.25: ದ.ಕ. ಜಿಲ್ಲೆಯ ಯಾವುದೇ ಭಾಗದಲ್ಲಿ ಕುಡಿ ಯುವ ನೀರಿಗೆ ತೊಂದರೆ ಆಗದಂತೆ ಮುಂಜಾ ಗೃತಾ ಕ್ರಮಗಳ ಮೂಲಕ ಎಚ್ಚರಿಕೆ ವಹಿಸಬೇಕೆಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಎಲ್ಲ ತಾಲೂಕು ತಹ ಶೀಲ್ದಾರ್, ಕಾರ್ಯನಿರ್ವಹಣಾಧಿಕಾರಿ ಗಳಿಗೆ ನಿರ್ದೇಶನ ನೀಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿ ಕುಡಿಯುವ ನೀರು ಪೂರೈಕೆ, ಬರ ನಿರ್ವಹಣೆ ಕುರಿತಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಭಾಗವಹಿಸಿ ಅವರು ಮಾತ ನಾಡುತ್ತಿದ್ದರು.
ಕಳೆದ ವರ್ಷ ಮಂಗಳೂರು ತಾಲೂಕಿನ ಮಂಜನಾಡಿ, ಮನ್ನಬೆಟ್ಟು, ಕೊಣಾಜೆ, ಹಳೆಯಂಗಡಿ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಕಾಣಿಸಿಕೊಂಡಿದ್ದು, ಟ್ಯಾಂಕರ್ ನೀರು ಒದಗಿಸಲಾಗಿತ್ತು. ಉಳ್ಳಾಲದ ಕೆಲವು ಭಾಗ ಹಾಗೂ ಬಂಟ್ವಾಳ ತಾಲೂಕಿನ ನರಿಂಗಾನ, ಕುರ್ನಾಡು, ಬಾಳೆಪುಣಿ, ಪಜೀರು ವ್ಯಾಪ್ತಿಯಲ್ಲೂ ನೀರಿನ ಅಭಾವ ಕಾಣಿಸಿಕೊಂಡಿತ್ತು. ಪ್ರಸ್ತುತ ಈ ಬಾರಿ ಕೊಣಾಜೆ ವ್ಯಾಪ್ತಿಯಲ್ಲಿ ಈಗಾಗಲೇ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ ಎಂದು
ಅಧಿಕಾರಿಗಳು ಮಾಹಿತಿ ನೀಡಿದರು. ಅಪರ ಜಿಲ್ಲಾಧಿಕಾರಿ ಕುಮಾರ್ ಮಾತನಾಡಿ, ನೀರಿನ ಸಮಸ್ಯೆ ಇರುವ ಕಡೆಗಳಿಗೆ ಆಯಾ ತಾಲೂಕಿನ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಬೇಕು. ತುರ್ತು ನೀರಿಗಾಗಿ ಪಕ್ಕದ ನೀರಿನ ಮೂಲವನ್ನು ಬಳಸಿಕೊಂಡು ಪೈಪ್ ಲೈನ್ ಮೂಲಕ ನೀರು ಕೊಡಿಸಬೇಕು. ಇಲ್ಲವಾದರೆ, ಸಮೀಪದ ಖಾಸಗಿಯವರಿಂದ ನೀರು ಪಡೆದು ಅದಕ್ಕೆ ಸೂಕ್ತ ಹಣ ನೀಡುವ ವ್ಯವಸ್ಥೆ ಮಾಡಬೇಕು. ಇವೆರಡು ಸಾಧ್ಯ ವಾಗದಿದ್ದರೆ ಮಾತ್ರ ಟಾಸ್ಕ್ಪೋರ್ಸ್ ಅನುಮತಿ ಪಡೆದು ಟ್ಯಾಂಕರ್ನಲ್ಲಿ ನೀರು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಅತಿಕ್ರಮಣ ತೆರವುಗೊಂಡ ಭೂಮಿಯ ಬಳಕೆ: ವಾರದೊಳಗೆ ಮಾಹಿತಿಗೆ ಸೂಚನೆ
ಜಿಲ್ಲೆಯಲ್ಲಿ ಸುಮಾರು 534 ಎಕರೆ ಭೂಮಿ ಅತಿಕ್ರಮಣದಿಂದ ತೆರವು ಗೊಳಿಸಲಾಗಿದೆ. ಆ ಭೂಮಿಯನ್ನು ಯಾವ್ಯಾವ ಕೆಲಸಗಳಿಗೆ ಬಳಕೆ ಮಾಡಲು ಸಾಧ್ಯವಿದೆ, ಅಗತ್ಯವಿದೆ ಎಂಬ ಬಗ್ಗೆ ನಿಖರ ಮಾಹಿತಿಯನ್ನು ಒಂದು ವಾರದೊಳಗೆ ಒದಗಿಸುವಂತೆ ತಹಶೀಲ್ದಾರ್ ಮತ್ತು ತಾಪಂಗಳ ಕಾರ್ಯನಿರ್ವಹಣಾಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಕುಮಾರ್ ಸೂಚಿಸಿದರು.
ರುದ್ರಭೂಮಿಗೆ ಕ್ರಮ ಕೈಗೊಳ್ಳಿ
ರುದ್ರಭೂಮಿ ಅಗತ್ಯ ಇರುವಲ್ಲಿ ಸರಕಾರಿ ಭೂಮಿ ಲಭ್ಯವಿಲ್ಲದಾಗ ಖಾಸಗಿ ಭೂಮಿ ಖರೀದಿಸಿ ಒದಗಿಸಲು ಸರಕಾರದಿಂದ ಜಿಲ್ಲೆಗೆ 30 ಲಕ್ಷ ರೂ. ಅನುದಾನ ದೊರಕಿದ್ದು, ಜಿಲ್ಲೆಯಲ್ಲಿ ಅಂತಹ ಸ್ಥಳಗಳ ಪಟ್ಟಿ ಮಾಡಿ ಒದಗಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು. ಜಿಲ್ಲೆಯಲ್ಲಿ 0-6 ವರ್ಷದೊಳಗಿನ ಮಕ್ಕಳ ಅನುಪಾತದಲ್ಲಿ ಕುಸಿತ ಕಂಡು ಬಂದಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿನ ಎಲ್ಲಾ ಸ್ಕಾನಿಂಗ್ ಸೆಂಟರ್ಗಳ ಮಾಹಿತಿಯನ್ನು ಶನಿವಾರದೊಳಗೆ ಆಯಾಯ ತಾಲೂಕು ಅಧಿಕಾರಿಗಳು ಹಾಗೂ ಪುರಸಭೆ, ನಗರ ಸಭೆ ಮತ್ತು ಮನಪಾ ಅಧಿಕಾರಿಗಳು ತಕ್ಷಣ ಒದಗಿಸುವಂತೆ ಜಿಲ್ಲಾಧಿಕಾರಿ ಈ ಸಂದರ್ಭ ನಿರ್ದೇಶಿಸಿದರು.
ಎಂಡೋ ಪೀಡಿತರ ಪಟ್ಟಿಗೆ ಸೇರ್ಪಡೆಗೆ ಸರ್ವೆ
ಎಂಡೋ ಪೀಡಿತರ ಪಟ್ಟಿಯಲ್ಲಿ ಬಿಟ್ಟು ಹೋಗಿರುವ ಹೊಸ ಸಂತ್ರಸ್ತರ ಅರ್ಜಿಯನ್ನು ಪರಿಗಣಿಸಲು ರಾಜ್ಯ ಸರಕಾರದಿಂದ ಸಮೀಕ್ಷೆ ನಡೆಸಲು ಅನುಮತಿ ದೊರಕಿದ್ದು, ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ಶಿಫಾರಸಿನ ಮೇರೆಗೆ ವೆನ್ಲಾಕ್ನಲ್ಲಿ ತಿಂಗಳ ಪ್ರಥಮ ಮತ್ತು 3ನೆ ಸೋಮವಾರ ತಪಾಸಣೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ತಿಳಿಸಿದರು. ಪಟ್ಟಿಯಿಂದ ಬಿಟ್ಟು ಹೋಗಿರುವ ಎಂಡೋ ಸಂತ್ರಸ್ತರಿಂದ ಅರ್ಜಿ ಬಂದಲ್ಲಿ ತಜ್ಞರ ತಂಡದಿಂದ ಪರಿಶೀಲಿಸಿ ಸರ್ವೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಎಂಡೋ ಸಂತ್ರಸ್ತರಿಗೆ ನೀಡಬೇಕಾದ ಮಾಸಾಶನದಲ್ಲಿ ಯಾವುದೇ ಬಾಕಿ ಇಲ್ಲ ಎಂದು ಡಾ. ಅರುಣ್ ಸಭೆಗೆ ಮಾಹಿತಿ ನೀಡಿದರು.





