ಉಳ್ಳಾಲ: ಯುವಸಮೂಹ ಕ್ಷೇತ್ರಗಳಲ್ಲಿ ಇರುವ ಉತ್ತಮ ಅವಕಾಶಗಳನ್ನು ಸದುಪಯೋಗ ಮಾಡಬೇಕು ಪ್ರೊ. ವೈ.ಯಸ್.ರಾಜನ್

ಉಳ್ಳಾಲ: ಯುವಸಮೂಹ ಕ್ಷೇತ್ರಗಳಲ್ಲಿ ಇರುವ ಉತ್ತಮ ಅವಕಾಶಗಳನ್ನು ಸದುಪಯೋಗಿಸಿಕೊಂಡು ಉತ್ತಮ ಚಿಂತನೆಯೊಂದಿಗೆ ಸಾಧನೆ ಮಾಡಬೇಕು ಎಂದು ಇಸ್ರೋದ ಮಾಜಿ ವಿಜ್ಞಾನಿ ಹಾಗೂ ವಿಶ್ವ ಕಲೆ ಮತ್ತು ವಿಜ್ಞಾನ ಅಕಾಡೆಮಿಯ ಪ್ರೊ. ವೈ.ಯಸ್.ರಾಜನ್ ಹೇಳಿದರು
ಅವರು ದೇರಳಕಟ್ಟೆಯ ಯೆನೆಪೋಯ ವಿಶ್ವವಿದ್ಯಾನಿಲಯದ ವತಿಯಿಂದ ಯೆನೆಪೋಯ ವಿಶ್ವವಿದ್ಯಾನಿಲಯದ ಯೆನ್ಡ್ಯೂರೆನ್ಸ್ ಝೋನ್ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿರುವ ಸ್ಟಾರ್ಟ್ಅಪ್, ಇನ್ಕ್ಯುಬೇಟರ್ ಮತ್ತು ಇಂಟರ್ಪ್ರೆನರ್ಶಿಪ್ ಎಂಬ ವಿಷಯದ ಬಗ್ಗೆ ಎರಡು ದಿನಗಳ ಕಾಲ ನಡೆಯುವ ಅಂತರಾಷ್ಟ್ರೀಯ ಸಮ್ಮೇಳನಕ್ಕೆ ಶನಿವಾರದಂದು ಚಾಲನೆ ನೀಡಿ ಮಾತನಾಡಿದರು.
ಹಿಂದೆ ಟೆರಾಫೋನ್ಗಳ ಉಪಯೋಗ ಕೆಲವೇ ಮಂದಿ ನಡೆಸುತ್ತಿದ್ದರು. ಆದರೆ ಸದ್ಯ ಸ್ಮಾರ್ಟ್ಫೋನ್ ಗಳ ಉಪಯೋಗ ಎಲ್ಲಾ ವರ್ಗದವರು ಮಾಡುತ್ತಿದ್ದಾರೆ. ತಾಂತ್ರಿಕತೆ ಬೆಳೆದ ಹಾಗೆ ದೊಡ್ಡ ಕಂಪೆನಿಗಳು, ನಾಗರಿಕ ಕಂಪೆನಿಗಳು ತಲೆ ಎತ್ತಿವೆ. ಇದರಿಂದ ಸಹಜವಾಗಿ ಆರ್ಥಿಕತೆಯಲ್ಲೂ ಹೊಸ ಬೆಳವಣಿಗೆ ಮತ್ತು ಜ್ಞಾನದ ಆರ್ಥಿಕತೆಯೂ ಬೆಳವಣಿಗೆಯಾಗುತ್ತಿದೆ. ಯುವಪೀಳಿಗೆ ಇರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಯಶಸ್ಸು ಹೊಂದಬೇಕು ಎಂದರು.
ಯೆನೆಪೋಯ ವಿಶ್ವವಿದ್ಯಾನಿಲಯದ ಕುಲಾಧಿಪತಿ ವೈ ಅಬ್ದುಲ್ಲಾ ಕುಂಞಿ ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಯು ವಿಭಿನ್ನವಾಗಿ ಕನಸು ಕಾಣಬೇಕು. ಕಾಣುವ ಕನಸ್ಸನ್ನು ನನಸಾಗಿಸಲು ಪ್ರಯತ್ನ ಪಡಬೇಕು. ಇಂದಿನ ಯುವಕರಿಗೆ ಪ್ರತಿಯೊಂದು ಕ್ಷೇತ್ರದಲ್ಲೂ ಬಹಳಷ್ಟು ಅವಕಾಶಗಳಿದ್ದು ಅದನ್ನು ಹುಡುಕುವ ಪ್ರಯತ್ನಮಾಡಬೇಕು. ಆಗ ಮಾತ್ರ ಜೀವನದಲ್ಲಿ ಯಶಸ್ಸುಕಾಣಲು ಸಾಧ್ಯ. ಪ್ರತಿಯೊಂದು ವಿದ್ಯಾರ್ಥಿಯು ಕಲಿತು ಸಮಾಜಕ್ಕೆ ಉಪಯೋಗವಾಗುವಂತಹ ಕೆಲಸವನ್ನು ಮಾಡಬೇಕು ಎಂದರು. ಟಾಪ್ ಮೀ ಮಣಿಪಾಲದ ಡಾ.ಆರ್.ಸಿ ನಟರಾಜನ್ ಮುಖ್ಯ ಅತಿಥಿಯಾಗಿದ್ದರು. ಯೆನೆಪೋಯ ವಿ.ವಿ ಉಪಕುಲಪತಿ ಡಾ.ಎಂ.ವಿಜಯಕುಮಾರ್ ಸ್ವಾಗತಿಸಿದರು. ಯೆನೆಪೋಯ ವಿ.ವಿ ನಿರ್ದೇಶಕ ಡಾ.ಜಿ ಶ್ರೀಕುಮಾರ್ ಮೆನನ್ ವಂದಿಸಿದರು. ಮಲ್ಲಿಕಾ ಶೆಟ್ಟಿ, ರೋಷೆಲ್ ಕಾರ್ಯಕ್ರಮ ನಿರ್ವಹಿಸಿದರು.







