ಭಾರತದಲ್ಲಿ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡಿ, ಆರೆಸ್ಸೆಸನ್ನು ನಿಯಂತ್ರಿಸಿ: ಅಮೆರಿಕದ 34 ಸಂಸದರಿಂದ ಮೋದಿಗೆ ಪತ್ರ
ಹೊಸದಿಲ್ಲಿ, ಫೆ.28: ಅಮೆರಿಕದ ಕಾಂಗ್ರೆಸ್ನ ಮೂವತ್ತನಾಲ್ಕು ಸಂಸದರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಹೆಚ್ಚುತ್ತಿರುವ ಅಸಹಿಷ್ಣುತೆ ಮತ್ತು ಹಿಂಸೆಯ ಕುರಿತು ತೀವ್ರ ವಿಷಾದವನ್ನು ಸೂಚಿಸಿದ್ದಾರೆ.
ಅಮೆರಿಕದ ಪ್ರತಿನಿಧಿಸಭೆಯ ಇಪ್ಪತ್ತಾರು ಹಾಗೂ ಸೆನೆಟ್ನ ಎಂಟು ಸದಸ್ಯರು ಮೋದಿಗೆಪತ್ರ ಬರೆದಿದ್ದಾರೆ. ಭಾರತದ ಕ್ರೈಸ್ತ, ಮುಸ್ಲಿಮ್ ಹಾಗೂ ಸಿಖ್ ಸಮುದಾಯದವರ ವಿರುದ್ಧ ನಡೆಯುತ್ತಿರುವ ಘಟನಾವಳಿಗಳ ಕುರಿತು ನಾವು ತುಂಬ ಆತಂಕಗೊಂಡಿದ್ದೇವೆಂದು ಪತ್ರದಲ್ಲಿ ತಿಳಿಸಿದ್ದಾರೆ. ಛತ್ತೀಸ್ಗಡದಲ್ಲಿ ಕ್ರೈಸ್ತ ಸಮುದಾಯದ ಮೇಲೆ ಅಪಾಯ, ಬೀಫ್ ತಿಂದರೆನ್ನುತ್ತಾ ಮುಸ್ಲಿವರ ಹತ್ಯೆಯನ್ನು ಪ್ರಸ್ತಾಪಿಸಿದ್ದಾರೆ.
ಪತ್ರದಲ್ಲಿ 2014 ಜೂನ್ 17 ರಂದು ಛತ್ತೀಸ್ಗಡದ ಬಸ್ತರ್ ಜಿಲ್ಲೆಯಲ್ಲಿ ಐವತ್ತು ಗ್ರಾಮ ಪಂಚಾಯತ್ ತಮ್ಮ ಸಮುದಾಯದಲ್ಲಿ ಎಲ್ಲ ಹಿಂದೂಯೇತರ ಧಾರ್ಮಿಕ ಪ್ರಚಾರ, ಪ್ರಾರ್ಥನೆ ಹಾಗೂ ಭಾಷಣಕ್ಕೆ ನಿರ್ಬಂಧ ಹೇರುವ ಪ್ರಸ್ತಾವವನ್ನು ಅನುಮೋದಿಸಿದೆ.
ಇದರಿಂದಾಗಿ ಕ್ರೈಸ್ತ ಅಲ್ಪಸಂಖ್ಯಾತ ಸಮುದಾಯ ಪರಿಣಾಮ ಅನುಭವಿಸಬೇಕಾಗಿ ಬಂದಿದೆ. ಈ ನಿರ್ಬಂಧದ ನಂತರ ಬಸ್ತಾರ್ನಲ್ಲಿ ಕ್ರೈಸ್ತರ ಮೇಲೆ ಅನೇಕ ಹಲ್ಲೆಯ ಘನೆಗಳು ನಡೆದಿವೆ ಎಂದು ಅಮೆರಿಕನ್ ಸಂಸದರು ಬೆಟ್ಟುಮಾಡಿ ತೋರಿಸಿದ್ದಾರೆ.
ಪತ್ರದ ಮೂಲಕ ಸಂಸದರು ಆರೆಸ್ಸೆಸ್ನಂತಹ ಸಂಘಟನೆಗಳ ಚಟುವಟಿಕೆಗಳನ್ನು ನಿಯಂತ್ರಿಸಲು ಹೆಜ್ಜೆ ಮುಂದಿಡಬೇಕೆಂದು ಮೋದಿಗೆ ವಿನಂತಿಸಿದ್ದಾರೆ. ಜೊತೆಗೆ ಕಾನೂನು ವ್ಯವಸ್ಥೆ ಸುಸೂತ್ರಗೊಳಿಸಲು ಹಾಗೂ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಹಲ್ಲೆಗಳನ್ನು ತಡೆಯಲು ಭಾರತೀಯ ಭದ್ರತಾ ಪಡೆಗಳಿಗೆ ನಿರ್ದೇಶನ ನೀಡಬೇಕೆಂದು ಸಂಸದರು ಆಗ್ರಹಿಸಿದ್ದಾರೆ.
ನಾವು ನಿಮ್ಮ ಸರಕಾರ ಈ ನಿಟ್ಟಿನಲ್ಲಿ ಕೂಡಲೇ ಹೆಜ್ಜೆ ಮುಂದಿಡುತ್ತದೆ ಎಂದೂ, ಅಲ್ಪಸಂಖ್ಯಾತರ ಮೂಲಭೂತ ಹಕ್ಕುಗಳ ರಕ್ಷಣೆ ಹಾಗೂ ಅವರ ವಿರುದ್ಧ ನಡೆದಿರುವ ಹಿಂಸೆಯ ಆರೋಪಿಗಳ ಮೇಲೆ ಕ್ರಮ ಜರಗಿಸುತ್ತೀರಿ ಎಂದೂ ಭಾವಿಸುತ್ತೇವೆ ಎಂದಿರುವ ಅಮೆರಿಕನ್ ಸಂಸದರು ಸಿಖ್ ಧರ್ಮವನ್ನು ದೊಡ್ಡ ಧರ್ಮದ ರೂಪದಲ್ಲಿ ಗುರುತಿಸದಿರುವುದಕ್ಕೂ ಖೇದ ವ್ಯಕ್ತಪಡಿಸಿದ್ದಾರೆ.