ತುಮಕೂರು: ಆಹಾರ ಅರಸಿ ಬಂದ ಚಿರತೆ

ಸತತ 7 ಗಂಟೆ ಕಾರ್ಯಾಚರಣೆ ಬಳಿಕ ಸೆರೆ
ತುಮಕೂರು, ಫೆ.28: ಆಹಾರ ಅರಸಿ ಬಂದ ಚಿರತೆಯೊಂದು ತಾಲೂಕಿನ ಹನುಮಂತಪುರ ಮತ್ತು ಜಗನ್ನಾಥಪುರಗಳಲ್ಲಿ ರವಿವಾರ ಪ್ರತ್ಯಕ್ಷಗೊಂಡಿದ್ದು, ಅರಣ್ಯ ಇಲಾಖೆ ಮತ್ತು ಪಶುವೈದ್ಯರ ಸಹಕಾರದೊಂದಿಗೆ ಸತತ ಏಳು ಗಂಟೆಗಳ ಕಾರ್ಯಾಚರಣೆ ನಡೆಸಿ ಸೆರೆ ಹಿಡಿಯಲಾಯಿತು.
ಚಿರತೆಯನ್ನು ಸೆರೆ ಹಿಡಿಯಲು ರವಿವಾರ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಸತತ ಕಾರ್ಯಾಚರಣೆ ನಡೆಸಲಾಯಿತು. ಚಿರತೆ ಬಂದಿದ್ದರಿಂದ ಆತಂಕಕ್ಕೆ ಒಳಗಾಗಿದ್ದ ಹನುಮಂತಪುರ, ಜಗನ್ನಾಥಪುರ ಹಾಗೂ ಸುತ್ತಮುತ್ತಲ ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿದೆ.
ಹನುಮಂತಪುರದ ಬೈಲಾಂಜನೇಯ ದೇವಾಲಯದ ಹಿಂಭಾಗದಲ್ಲಿರುವ ವಾಸುದೇವಮೂರ್ತಿ ಎಂಬವರ ಮನೆ ಕಾಂಪೌಂಡ್ ಗೋಡೆಗಳ ಮದ್ಯೆ ಇರುವ ಖಾಲಿ ಜಾಗದಲ್ಲಿ ಚಿರತೆಯನ್ನು ಮಹಿಳೆಯೊಬ್ಬರು ನೋಡಿದ್ದಾರೆ. ಇವರನ್ನು ನೋಡಿದ ಚಿರತೆ ಪಕ್ಕದ ಮನೆಯ ಕಾಂಪೌಂಡ್ ಗೋಡೆ ಹಾರಿ ತೋಟದ ಕಡೆಗೆ ಹೋಗಿದೆ.
ತಕ್ಷಣವೇ ಜನರು ಅರಣ್ಯ ಇಲಾಖೆಯ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ವಿಷಯ ತಿಳಿದ ಸುತ್ತಮುತ್ತಲ ಪ್ರದೇಶಗಳ ಜನರು ಚಿರತೆಯನ್ನು ನೋಡಲು ಆಗಮಿಸಿದ್ದರಿಂದ ಗಾಬರಿಗೊಂಡ ಚಿರತೆ ಹತ್ತಿರದಲ್ಲಿಯೇ ಇರುವ ರಾಷ್ಟ್ರೀಯ ಹೆದ್ದಾರಿ-48ರ ಪಕ್ಕದಲ್ಲಿರುವ ಅಣೆತೋಟದ ಪುಟ್ಟಣ್ಣ ಎಂಬವರ ಟೊಮೊಟೊ ಹೊಲದಲ್ಲಿ ಅಡಗಿ ಕುಳಿತಿತ್ತು. ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆಯ ಸಿಬ್ಬಂದಿ ಪ್ರಯತ್ನ ಪಟ್ಟರು ಯಾವುದೇ ಪ್ರಯೋಜನವಾಗಿಲ್ಲ.
ಮಧ್ಯಾಹ್ನ 1:30ರ ಸುಮಾರಿಗೆ ಪಶುವೈದ್ಯ ಡಾ.ಸುಜಯ್ ಹಾಗೂ ಹಾಸನದ ರ್ಯಾಪೀಡ್ ಫೋರ್ಸ್ನ ಡಾ.ಮುರಳಿ ನೇತೃತ್ವದ ತಂಡ ಆಗಮಿಸಿ ಚಿರತೆಗೆ ಅರಿವಳಿಕೆ ಮದ್ದು ನೀಡಿ ಹಿಡಿಯಲು ಪ್ರಯತ್ನಿಸಿದ್ದಾರೆ. ಆದರೆ, ಅರಿವಳಿಕೆ ಮದ್ದು ಸರಿಯಾಗಿ ನಾಟದ ಕಾರಣ ಅರೆ ಪ್ರಜ್ಞಾ ಸ್ಥಿತಿಯಲ್ಲಿಯೇ ಟೊಮೊಟೊ ಹೊಲದ ತುಂಬಾ ಓಡಾಡಿದ ಚಿರತೆ ಅರಣ್ಯ ಇಲಾಖೆಯ ಸಿಬ್ಬಂದಿಯ ಕೈಗೆ ಸಿಗದೆ ಬೈಪಾಸ್ ಪಕ್ಕದಲ್ಲಿಯೇ ಇರುವ ರಾಜಗಾಲುವೆ ಬಳಿ ಬೆಳೆದಿರುವ ಬಿದಿರು ಮಳೆಯಲ್ಲಿ ಅವಿತು ಕುಳಿತಿತ್ತು.
ಬೆಳಗ್ಗೆ 9 ಗಂಟೆಯಿಂದ ಸಂಜೆ 4:40ರ ವರೆಗೆ ಡಾ.ಸುಜಯ್ ಮತ್ತು ಡಾ.ಮುರಳಿ ಅವರ ಸತತ ಪರಿಶ್ರಮ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಯ ಹೋರಾಟದ ಫಲವಾಗಿ ಸಂಜೆ 4:40ರ ಸುಮಾರಿಗೆ ಚಿರತೆಯನ್ನು ಜೀವಂತವಾಗಿ ಸೆರೆ ಹಿಡಿದಿದ್ದು, ಪ್ರಾಥಮಿಕ ಚಿಕಿತ್ಸೆ ನಂತರ ಬನ್ನೇರುಘಟ್ಟ ಅರಣ್ಯ ಪ್ರದೇಶಕ್ಕೆ ಬಿಡಲು ತೆಗೆದುಕೊಂಡು ಹೋಗಲಾಯಿತು.
ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ ಹಿರಿಯ ಅಧಿಕಾರಿಗಳು: ಚಿರತೆ ನಗರಕ್ಕೆ ಆಗಮಿಸಿರುವ ವಿಷಯ ತಿಳಿದು ಸ್ಥಳಕ್ಕೆ ಎಎಸ್ಪಿ,ತುಮಕೂರು ನಗರ, ಗ್ರಾಮಾಂತರ ಸಿಪಿಐಗಳೊಂದಿಗೆ ಆಗಮಿಸಿದ ಜಿಲ್ಲಾಧಿಕಾರಿ ಕೆ.ಪಿ.ಮೋಹನರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ರೆಡ್ಡಿ ಜನರು ಚಿರತೆಯನ್ನು ಗಾಬರಿಗೊಳಿಸದಂತೆ ಎಚ್ಚರಿಕೆ ವಹಿಸಿದ್ದರು. ಅಲ್ಲದೆ, ಜನರು ಆತಂಕಗೊಳ್ಳದಂತೆ ಸಲಹೆ ನೀಡಿ, ಕಾರ್ಯಾಚರಣೆ ಮುಗಿಯುವವರೆಗೂ ಸ್ಥಳದಲ್ಲಿಯೇ ಇದ್ದು ಅರಣ್ಯ ಇಲಾಖೆಯ ಸಿಬ್ಬಂದಿಗೆ ಸಹಕಾರ ನೀಡಿದರು.
ಬೆಳಗ್ಗೆ 11 ಗಂಟೆ ಸುಮಾರಿಗೆ ಚಿರತೆ ಬಂದಿರುವ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಡಿಎಫ್ಒ ಅಮರನಾಥ್, ಎಸಿಎಫ್ ದೇವರಾಜಯ್ಯ,ಮಧುಗಿರಿ ಎಸಿಎಫ್ ನಾಗರಾಜಯ್ಯ, ಆರ್ಎಫ್ಒ ನರಸಿಂಹಮೂರ್ತಿ ಹಾಗೂ ಸಿಬ್ಬಂದಿ ಚಿರತೆಯನ್ನು ಹಿಡಿಯಲು ಸಾಕಷ್ಟು ಹೆಣಗಾಡಿದರಲ್ಲದೆ, ಚಿರತೆ ವೀಕ್ಷಣೆಗೆ ಸೇರಿದ್ದ ಜನರನ್ನು ನಿಯಂತ್ರಿಸುವುದು ಕಷ್ಟದ ಕೆಲಸವಾಗಿತ್ತು.
ಸತತ ಏಳು ಗಂಟೆಗಳ ಕಾರ್ಯಾಚರಣೆಯಿಂದ ಕೊನೆಗೂ ಚಿರತೆ ಅರಣ್ಯ ಇಲಾಖೆಯ ಬಲೆಗೆ ಬಿದ್ದಿದ್ದು, ಅರಿವಳಿಕೆ ಮದ್ದಿನಿಂದ ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಚಿರತೆಯ ಬಳಿ ತೆರಳಿದ ಡಾ.ಸುಜಯ್ ಪ್ರಜ್ಞೆ ತಪ್ಪಿರುವುದನ್ನು ಖಚಿತ ಪಡಿಸಿದ ನಂತರ ಚಿರತೆಯನ್ನು ಸೆರೆ ಹಿಡಿಯಲಾಗಿದೆ.ಚಿಕ್ಕನಾಯಕನಹಳ್ಳಿಯ ಪಶು ವೈದ್ಯ ಡಾ.ಸುಜಯ್ ಅವರ ಕರ್ತವ್ಯ ನಿಷ್ಠೆಯನ್ನು ಎಲ್ಲರೂ ಶ್ಲಾಘಿಸಿದ್ದಾರೆ.







