ನಿಮಗೆ ದೇಶದ್ರೋಹ ಅಂದರೆ ಏನು ಅಂತಾದರೂ ಗೊತ್ತಿದೆಯೇ ?
ದೆಹಲಿ ಪೋಲಿಸರಿಗೆ ಹೈಕೋರ್ಟು ಮಂಗಳಾರತಿ

ಹೊಸದಿಲ್ಲಿ , ಫೆ. 29: ಸೋಮವಾರ ದೇಶದ್ರೋಹದ ಆರೋಪದಲ್ಲಿ ಬಂಧಿತ ಜೆ ಎನ್ ಯು ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈ ಕೋರ್ಟು ಪೋಲಿಸರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ. ಸುದೀರ್ಘ ವಿಚಾರಣೆಯ ಬಳಿಕ ಮಾರ್ಚ್ 2 ಕ್ಕೆ ತೀರ್ಪು ನೀಡುವುದಾಗಿ ಕೋರ್ಟು ತಿಳಿಸಿತು.
" ನಿಮಗೆ ದೇಶದ್ರೋಹ ಅಂದರೆ ಏನು ಅಂತಾದರೂ ಗೊತ್ತಿದೆಯೇ ? ಇಡೀ ಘಟನೆಯ ಸಿಸಿಟಿವಿ ರೆಕಾರ್ಡಿಂಗ್ ಇದೆಯೇ ? ಇಲ್ಲದಿದ್ದರೆ ಟಿವಿ ಚಾನೆಲ್ ಗಳ ಫೂಟೆಜ್ ಆಧರಿಸಿ ವರದಿ ಮಾಡಿದ್ದರೆ ಬೇರೆ ಸಾಕ್ಷ್ಯ ಇದೆಯೇ ? ಎಂದು " ಎಂದು ನ್ಯಾಯಾಲಯ ದೆಹಲಿ ಪೋಲಿಸರಿಗೆ ಮಂಗಳಾರತಿ ಮಾಡಿದೆ.
ಕನ್ಹಯ್ಯ ಕುಮಾರ್ ದೇಶದ್ರೋಹಿ ಘೋಷಣೆ ಕೂಗುವ ಯಾವುದೇ ವೀಡಿಯೋ ಇಲ್ಲ ಎಂದು ಈ ಸಂದರ್ಭದಲ್ಲಿ ದೆಹಲಿ ಪೊಲೀಸರು ಒಪ್ಪಿಕೊಂಡರು. ನಮ್ಮ ಬಳಿ ಕನ್ಹಯ್ಯ ವಿರುದ್ಧ ನೇರವಾಗಿ ಯಾವುದೇ ಸಾಕ್ಷ್ಯ ಇಲ್ಲ ಎಂದೂ ಪೊಲೀಸರು ಹೇಳಿದರು. ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಕನ್ಹಯ್ಯ ಪರ ವಾದಿಸಿ ಅಲ್ಲಿ ದೇಶದ್ರೋಹದ ಯಾವುದೇ ಘಟನೆಯೇ ನಡೆದಿಲ್ಲ ಎಂದು ಹೇಳಿದರು.
ಕನ್ಹಯ್ಯ ಕುಮಾರ್ ಅವರನ್ನು ಉಮರ್ ಖಾಲಿದ್ ಹಾಗು ಅನಿರ್ಬನ್ ಭಟ್ಟಾಚಾರ್ಯ ಅವರೊಂದಿಗೆ ವಿಚಾರಣೆ ನಡೆಸಲು ಕಸ್ಟಡಿ ನೀಡಬೇಕೆಂದು ದೆಹಲಿ ಪೊಲೀಸರು ಕೇಳಿದರು.







