ಜೆ ಎನ್ ಯು ಪ್ರಕರಣ : ಎಬಿವಿಪಿ ಹಾಗು ಝೀ ನ್ಯೂಸ್ ನ ಪೂರ್ವ ಯೋಜಿತ ಹುನ್ನಾರ ?
ವಿವಿಯ ಸುರಕ್ಷತಾ ಕಚೇರಿಯ ದಾಖಲೆಗಳಿಂದ ಬಯಲಾಯ್ತು ಸಂಚು

ಹೊಸದಿಲ್ಲಿ , ಮಾ. 2 : ಜೆ ಎನ್ ಯು ಪ್ರಕರಣದಲ್ಲಿ ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರ್ ಗೆ ಜಾಮೀನು ದೊರೆತ ಬೆನ್ನಲ್ಲೇ ಆ ಇಡೀ ಪ್ರಕರಣವನ್ನು ದೇಶದ್ರೋಹ ಪ್ರಕರಣವೆಂದು ಬಿಂಬಿಸಲು ಝೀ ನ್ಯೂಸ್ ಸುದ್ದಿ ವಾಹಿನಿ ಹಾಗು ಬಿಜೆಪಿಯ ವಿದ್ಯಾರ್ಥಿ ಘಟಕ ಎಬಿವಿಪಿ ಯೋಜನೆ ಹಾಕಿತ್ತು ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಜೆ ಎನ್ ಯು ಮುಖ್ಯ ದ್ವಾರದಲ್ಲಿ ಇರುವ ಎಂಟ್ರಿ ಶೀಟ್ ಗಳ ಪರಿಶೀಲನೆಯಲ್ಲಿ ಈ ವಿಷಯ ಬಹಿರಂಗವಾಗಿದೆ ಎಂದು ಇಂಡಿಯಾ ರೇಸಿಸ್ಟ್ಸ್ ಡಾಟ್ ಕಾಂ ವರದಿ ಮಾಡಿದೆ.
ಫೆಬ್ರವರಿ 9 ರಂದು ಜೆ ಎನ್ ಯು ನಲ್ಲಿ ಕಾರ್ಯಕ್ರಮ ನಡೆಯುವ ಒಂದು ಗಂಟೆ ಮೊದಲೇ ಝೀ ನ್ಯೂಸ್ ತಂಡ ವಿವಿಯೊಳಗೆ ಬಂದಿದೆ. " ಎ ಕಂಟ್ರಿ ವಿದೌಟ್ ಪೋಸ್ಟ್ ಆಫಿಸ್" ಹೆಸರಿನ ಕಾರ್ಯಕ್ರಮ ನಡೆಯುವ ಮೊದಲು ವಿವಿಯ ವಿದ್ಯಾರ್ಥಿ ಸಂಘದ ಜೊತೆ ಕಾರ್ಯದರ್ಶಿ ಸೌರಭ್ ಶರ್ಮ ( ಎಬಿವಿಪಿ) ಝೀ ನ್ಯೂಸ್ ಹಾಗು ಎ ಎನ್ ಐ ವರದಿಗಾರರನ್ನು ಒಳಗೆ ಬಿಡುವಂತೆ ಕೇಳಿಕೊಂಡಿದ್ದು ವಿವಿಯ ಸುರಕ್ಷತಾ ಕಚೇರಿಯ ದಾಖಲೆಗಳ ಮೂಲಕಬಯಲಾಗಿದೆ .
ಕೆಲವು ಸುದ್ದಿ ವಾಹಿನಿಗಳು ಹಠ ಕ್ಕೆ ಬಿದ್ದಂತೆ ತಿರುಚಿದ ವೀಡಿಯೋಗಳನ್ನು ನಿರಂತರ ಪ್ರಸಾರ ಮಾಡಿದ್ದಕ್ಕೂ ಈ ಇಬ್ಬರು ವರದಿಗಾರರು ಸಾಕಷ್ಟು ಮೊದಲೇ ವಿವಿಯೊಳಗೆ ಬಂದಿರುವುದಕ್ಕೂ ಸಂಬಂಧವಿರುವುದು ಕಂಡುಬರುತ್ತದೆ . ಇಡೀ ಪ್ರಕರಣ ಪೂರ್ವ ಯೋಜಿತವಾದದ್ದು ಎಂಬುದು ಇದರಿಂದ ಸಾಬೀತಾಗುತ್ತದೆ.
ವಿವಿಯ ಕಾರ್ಯಕ್ರಮದಲ್ಲಿ ದೇಶವಿರೋಧಿ ಘೋಷಣೆ ಕೂಗುತ್ತಾರೆ ಎಂದು ಎಬಿವಿಪಿಯ ಸೌರಭ್ ಶರ್ಮಗೆ ಮೊದಲೇ ಗೊತ್ತಾಗಿ ಟಿವಿ ವರದಿಗಾರರನ್ನು ಕರೆದದ್ದು ಹೇಗೆ ಎಂಬುದೇ ಈಗ ಉತ್ತರ ಸಿಗದೇ ಇರುವ ಪ್ರಶ್ನೆ . ಸಾಮಾನ್ಯವಾಗಿ ಕಾರ್ಯಕ್ರಮಗಳಲ್ಲಿ ಆಹ್ವಾನಿಸುವಂತೆ ಎಲ್ಲ ಮಾಧ್ಯಮದವರನ್ನು ಕರೆಯದೆ ಕೇವಲ ಎರಡು ನಿರ್ದಿಷ್ಟ ವಾಹಿನಿಯವರನ್ನು ಮಾತ್ರ ಕರೆದದ್ದು ಯಾಕೆ ? ವಿವಿಯ ಕಾರ್ಯಕ್ರಮ ವರದಿ ಮಾಡಲು ಬರುವಾಗ ವಿವಿಯ ರಿಜಿಸ್ಟ್ರಾರ್ ಹೆಸರು ಹೇಳಿ ಬರಬೇಕಾದ ವರದಿಗಾರರು ಎಬಿವಿಪಿ ನಾಯಕ ಸೌರಭ್ ಶರ್ಮ ಅವರ ಹೆಸರು ಹೇಳಿ ಬಂದದ್ದು ಯಾಕೆ ? ಈ ಎಲ್ಲ ಪ್ರಶ್ನೆಗಳು ಈ ಪ್ರಕರಣದ ಹಿಂದೆ ಎಬಿವಿಪಿ ಹಾಗು ಝೀ ನ್ಯೂಸ್ ವಾಹಿನಿಯ " ಜಂಟಿ ಹುನಾರದತ್ತ " ಬೊಟ್ಟು ಮಾಡುತ್ತವೆ.
courtesy : www.indiaresists.com







