ಸೆಂಟ್ರಲ್ ಫೈನಾನ್ಶಿಯಲ್ ಸೊಸೈಟಿಯ ಸುಳ್ಯ ಶಾಖೆ ಆರಂಭ

ಸುಳ್ಯ: ಸೆಂಟ್ರಲ್ ಫೈನಾನ್ಶಿಯಲ್ ಕ್ರೆಡಿಟ್ ಆ್ಯಂಡ್ ಇನ್ವೆಸ್ಟ್ಮೆಂಟ್ ಸೊಸೈಟಿಯ ಸುಳ್ಯ ಶಾಖೆಯು ಸುಳ್ಯದ ಶ್ರೀರಾಂಪೇಟೆಯ ಕಾನತ್ತಿಲ ಕಾಂಪ್ಲೆಕ್ಸ್ನಲ್ಲಿ ಉದ್ಘಾಟನೆಗೊಂಡಿತು.
ಸುಳ್ಯ ಶಾಸಕ ಎಸ್. ಅಂಗಾರ ಶಾಖೆಯನ್ನು ಉದ್ಘಾಟಿಸಿ, ದೇಶದಲ್ಲಿ ಯಾವ ರೀತಿ ಆರ್ಥಿಕ ಹೊಡೆತ ಇದ್ದಾಗಲೂ ನಮ್ಮ ಕೃಷಿ ಮೂಲ ಅದನ್ನು ಮೆಟ್ಟಿ ನಿಂತಿದೆ. ಹಾಗಾಗಿ ಕೃಷಿಗೆ ಇನ್ನಷ್ಟು ಒತ್ತು ನೀಡುವ ಸಹಕಾರಿ ಸಂಸ್ಥೆಗಳು ವಿಶ್ವಾಸಾರ್ಹತೆಯಿಂದ ಜನರ ಮೆಚ್ಚುಗೆ ಗಳಿಸಬೇಕು. ಸೌರ ವಿದ್ಯುತ್ಗೆ ಬೇಡಿಕೆಯಿರುವುದರಂದ ಸೊಸೈಟಿಯಿಂದ ಸಹಾಯಧನ ನೀಡುವ ವ್ಯವಸ್ಥೆ ಆಗಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ಪ್ರಕಾಶ್ ಹೆಗ್ಡೆ ಮಾತನಾಡಿ, ಉತ್ತಮ ಸೇವೆ ಮೂಲಕ ಸಂಸ್ಥೆ ಲಾಭದಾಯಕವಾಗಿ ಮುನ್ನಡೆಯಲಿ ಎಂದು ಹಾರೈಸಿದರು. ಮೊದಲ ಠೇವಣಿ ಪತ್ರವನ್ನು ಗುತ್ತಿಗೆದಾರ ಪಿ.ವಿ. ನೆಲ್ಸನ್ ಅವರಿಗೆ ಹಸ್ತಾಂತರಿಸಿ ಮಾತನಾಡಿದ ಗುತ್ತಿಗಾರು ರಬ್ಬರ್ ಬೆಳೆಗಾರರ ಸಹಕಾರಿ ಸಂಘದ ಅಧ್ಯಕ್ಷ ನಿತ್ಯಾನಂದ ಮುಂಡೋಡಿ , ಈಗಾಗಲೇ ಈ ಸೊಸೈಟಿಯ ಪ್ರಥಮ ಶಾಖೆ ಗುತ್ತಿಗಾರಿನ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಸಹಕಾರ ಕ್ಷೇತ್ರ ಗಟ್ಟಿಯಾಗಿರುವ ಈ ನೆಲದಲ್ಲಿ ಈ ಸಂಘವೂ ಯಶಸ್ವಿಯಾಗಲಿ ಎಂದು ಹಾರೈಸಿದರು. ಸಾಲಪತ್ರ ವಿತರಣೆ ಮಾಡಿದ ಮಾಜಿ ಜಿಲ್ಲಾ ಪಂ. ಸದಸ್ಯ ಭರತ್ ಮುಂಡೋಡಿ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆ ಸಹಕಾರಿ ಕಾಶಿ. ಸಹಕಾರ ತತ್ವದ ಬದ್ದತೆ ಇರುವ ಯಾವ ಸಂಸ್ಥೆಗಳು ಎಲ್ಲಿ ವಿಫಲವಾಗಿಲ್ಲ. ಈ ಸಾಲಿನಲ್ಲಿ ಈ ಸಂಸ್ಥೆ ಕೂಡ ಯಶಸ್ಸನ್ನು ಸಾಧಿಸಲಿ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಸೊಸೈಟಿಯ ಮಾಜಿ ಚೆಯರ್ಮ್ಯಾನ್ ಪಿ. ಎಸ್. ಮ್ಯಾಥ್ಯೂ ಕೃಷಿ ವಲಯಕ್ಕೆ ಆದ್ಯತೆ ನೀಡಿ ಅವರ ಸಮಸ್ಯೆಗಳಿಗೆ ಸ್ಪಂದಿಸುವ ಗುರಿ ನಮ್ಮದು . ಕೃಷಿ ಕ್ಷೇತ್ರ ಗಂಭೀರ ಪರಿಸ್ಥಿತಿ ಎದುರಿಸುತ್ತಿರುವ ಇಂದಿನ ದಿನಗಳಲ್ಲಿ ಅವರನ್ನು ಮೇಲೆತ್ತುವ ಪ್ರಯತ್ನಗಳು ಎಲ್ಲಾ ಕಡೆ ನಡೆಯಬೇಕು ಎಂದರು.
ಸಂಸ್ಥೆಯ ಆಡಳಿತ ನಿರ್ದೇಶಕ ಕೆ,ಜೆ. ಜೋಸೆಫ್ ಸ್ವಾಗತಿಸಿ ಪ್ರಸ್ತಾವನೆಗೈದರು. ಸಂಸ್ಥೆಯ ನಿರ್ದೇಶಕರಾದ ಸಿಬಿ ಮೋನ್ ಜೋಸ್, ಜೋಯಿ ಪಿ. ತೋಮಸ್. ಗುತ್ತಿಗಾರು ಶಾಖಾ ವ್ಯವಸ್ಥಾಪಕ ಜೀವನ್ ಮಲ್ಕಜೆ, ಸುಳ್ಯ ವ್ಯವಸ್ಥಾಪಕ ಸಂತೋಷ್ ಎ. ಉಪಸ್ಥಿತರಿದ್ದರು.







