ಯುವಕನ ಅಪಹರಿಸಿ ದರೋಡೆ: ಆರೋಪಿಯ ಬಂಧನ
ಮಂಗಳೂರು, ಮಾ. 5: ನೀರುಮಾರ್ಗದಿಂದ ಯುವಕನೊಬ್ಬನನ್ನು ಅಪಹರಿಸಿ ಹಲ್ಲೆ ಮಾಡಿ ನಗದು ಹಣ ಹಾಗೂ ಮೊಬೈಲ್ ಫೋನ್ಗಳನ್ನು ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿಯೋರ್ವನನ್ನು ಇಂದು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.ಬಂಧಿತನನ್ನು ಬೋಳೂರು ಪರಪ್ಪು ನಿವಾಸಿ ಜಯಪ್ರಕಾಶ್ ಯಾನೆ ಜೆ.ಪಿ. (24) ಎಂದು ಗುರುತಿಸಲಾಗಿದೆ.ಈತ ಫೆಬ್ರವರಿ 13ರಂದು ಬೆಳಗ್ಗೆ ಮಂಗಳೂರು ನಗರದ ನೀರುಮಾರ್ಗ ಕೆಲರಾಯಿ ನಿವಾಸಿ ಅಕ್ಷಯ್ ಎಂಬಾತನನ್ನು ರಿಕ್ಷಾವೊಂದರಲ್ಲಿ ಬಲತ್ಕಾರವಾಗಿ ಅಪಹರಿಸಿಕೊಂಡು ಸುಲ್ತಾನ್ ಬತ್ತೇರಿ ಎಂಬಲ್ಲಿಗೆ ಕರೆದುಕೊಂಡು ಹೋಗಿ ಅಕ್ರಮ ಬಂಧನದಲ್ಲಿರಿಸಿ ಹಲ್ಲೆ ಮಾಡಿ ಆತನಲ್ಲಿದ್ದ ನಗದು ಹಣ ಹಾಗೂ ಮೊಬೈಲ್ ಫೋನ್ಗಳನ್ನು ಸುಲಿಗೆ ಮಾಡಿದ್ದು, ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಕೃತ್ಯ ನಡೆಸಿದ ಬಳಿಕ ಆರೋಪಿಗಳು ತಲೆಮರೆಸಿಕೊಂಡಿದ್ದರು.
ಆರೋಪಿಗಳ ಪೈಕಿ ಜಯಪ್ರಕಾಶ್ ಎಂಬಾತ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಹಳ್ಳಿ ಎಂಬಲ್ಲಿದ್ದಾನೆಂಬ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಇಂದು ಆತನನ್ನು ಶಿರಹಳ್ಳಿಯಿಂದ ಬಂಧಿಸಿದ್ದಾರೆ. ಈತನು ಅಪಹರಣ ಹಾಗೂ ಸುಲಿಗೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದು, ಈತನ ವಿರುದ್ಧ ಈ ಹಿಂದೆ 2015ನೆ ಇಸವಿಯಲ್ಲಿ ಬರ್ಕೆ ಪೊಲೀಸ್ ಠಾಣೆಯಲ್ಲಿ ದಿನರಾಜ್ ಎಂಬವರನ್ನು ಕೊಲೆ ನಡೆಸಲು ಯತ್ನಿಸಿದ ಪ್ರಕರಣ ಹಾಗೂ 2016ರಲ್ಲಿ ದುರ್ಗೇಶ್ ಎಂಬವರಿಗೆ ಹಲ್ಲೆ ನಡೆಸಿ ಬೆದರಿಕೆ ಹಾಕಿದ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಮುಂದಿನ ಕ್ರಮಕ್ಕಾಗಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.ಸಿಸಿಬಿ ಘಟಕದ ಇನ್ಸ್ಪೆಕ್ಟರ್ ವೆಲೆಂಟೈನ್ ಡಿಸೋಜ, ಪಿ.ಎಸ್.ಐ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.







