ವಿಟ್ಲ: ಕಾರು - ಬೈಕ್ ಡಿಕ್ಕಿ, ಸವಾರರಿಬ್ಬರ ಸಾವು

ವಿಟ್ಲ: ಕಾರೊಂದು ಮೊಪೆಡ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ಸ್ಥಳದಲ್ಲಿ ಸಾವನ್ನಪ್ಪಿದ ಘಟನೆ ಕಲ್ಲಡ್ಕ-ಕಾಂಞಂಗಾಡು ಅಂತರಾಜ್ಯ ಹೆದ್ದಾರಿಯ ಕೇಪು ಗ್ರಾಮದ ಮೈರ ಎಂಬಲ್ಲಿ ಭಾನುವಾರ ನಡೆದಿದೆ.
ಬೈಕ್ ಸವಾರ ಕಾಟುಕುಕ್ಕೆ ಗ್ರಾಮದ ಪಾಂಡಿಗಾಯ ನಿವಾಸಿ ಉಮೇಶ್ ನಾಯ್ಕ (35), ಸಹ ಸವಾರ ಪುಣಚ ಗ್ರಾಮದ ಚೆಕ್ಕುತ್ತಿ ನಿವಾಸಿ ವಸಂತ ನಾಯ್ಕ(47) ಮೃತಪಟ್ಟ ದುರ್ದೈವಿಗಳು. ಉಮೇಶ್ ಹಾಗೂ ವಸಂತ ಅವರು ವಾಮಂಜೂರಿನ ಸಂಬಂಧಿಕರ ಮನೆಯಲ್ಲಿ ಸಮ್ಮಾನ ಕಾರ್ಯಕ್ರಮ ಮುಗಿಸಿಕೊಂಡು ಟಿವಿಎಸ್ಎಕ್ಸ್ಎಲ್ ಮೊಪೆಡ್ನಲ್ಲಿ ವಿಟ್ಲಯಿಂದ ಸಾರಡ್ಕ ಕಡೆಗೆ ತೆರಳುತ್ತಿದ್ದ ವೇಳೆ ಕಾಸರಗೋಡು ಕಡೆಯಿಂದ 5 ಮಂದಿ ಮಹಿಳೆಯರು ಹಾಗೂ 3 ಮಕ್ಕಳೊಂದಿಗೆ ಪುತ್ತೂರು ಕೂರ್ನಡ್ಕ ನಿವಾಸಿ ತಲ್ಲತ್ (30) ಎಂಬವರು ಪುತ್ತೂರು ಕಡೆಗೆ ಹೋಗುತ್ತಿದ್ದರು. ಮೈರ ಜಂಕ್ಷನ್ ಸಮೀಪದ ಕಿರಿದಾದ ತಿರುವಿನಲ್ಲಿಒಳಮುಖವಾಗಿ ಬಲ ಬದಿಯಲ್ಲಿ ಬಂದಕಾರು ಮೊಪೆಡ್ಗೆ ಡಿಕ್ಕಿ ಹೊಡೆದಿದೆ. ಸವಾರ ಸಹಿತವಾಗಿ ಮೊಪೆಡ್ ಅನ್ನು ಸುಮಾರು 20 ಅಡಿಯಷ್ಟು ದೂರಕ್ಕೆ ಎಳೆದುಕೊಂಡು ಹೋಗಿದೆ. ಡಿಕ್ಕಿಯ ತೀವ್ರತೆಗೆ ಸಹ ಸವಾರ ಬೈಕ್ ನಿಂದ ಪಕ್ಕದಲ್ಲಿದ್ದ 10 ಅಡಿ ಆಳದ ಪ್ರಪಾತಕ್ಕೆ ಎಸೆಯಲ್ಪಟ್ಟಿದ್ದಾರೆ. ಸವಾರನನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಕುತ್ತಿಗೆ ಹಾಗೂ ತಲೆತ ಭಾಗಕ್ಕೆ ಗಂಭೀರವಾಗಿ ಗಾಯವಾದ್ದರಿಂದ ಮೃತಪಟ್ಟಿದ್ದಾರೆ. ಸ್ಥಳದಲ್ಲಿ ಸಾರ್ವಜನಿಕರು ಸೇರಿದರಾದರೂ ಸಹ ಸವಾರ ಕಣಿವೆಯಲ್ಲಿ ಬಿದ್ದು ಗಾಯಗೊಂಡದ್ದು ತಿಳಿಯುವಷ್ಟರಲ್ಲಿ ಸುಮಾರು ಅರ್ಧ ತಾಸು ಕಳೆದಿದೆ ಎನ್ನಲಾಗಿದ್ದು, ತೀವ್ರವಾದ ರಕ್ತ ಸಾವ್ರದಿಂದ ಅವರೂ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಾಂಡಿಗಾಯ ನಿವಾಸಿ ಉಮೇಶ್ ನಾಯ್ಕ ಅವರಿಗೆ ವಿವಾಹವಾಗಿ 4 ವರ್ಷಗಳಾಗಿದ್ದು, ಪತ್ನಿ ಹಾಗೂ ಇಬ್ಬರು ಪುತ್ರಿಯರಿದ್ದಾರೆನ್ನಲಾಗಿದೆ. ಚೆಕ್ಕುತ್ತಿ ನಿವಾಸಿ ವಸಂತ ನಾಯ್ಕ ಪತ್ನಿ, ಇಬ್ಬರು ಪುತ್ರರು ಹಾಗೂ ಪುತ್ರಿ ಇದ್ದಾರೆ.





