‘ಎಂ-ಸ್ಯಾಂಡ್’ಗೆ ಸರಕಾರದಿಂದ ಅನುಮತಿ: ಸಚಿವ ವಿನಯ ಕುಲಕರ್ಣಿ

ಮಂಗಳೂರು, ಮಾ.6: ಸಮುದ್ರ ಮತ್ತು ನದಿಗಳಿಂದ ಅವ್ಯಾಹತ ಮರಳುಗಾರಿಕೆಯಿಂದ ಅಂತರ್ಜಲ ಕುಸಿತದ ಭೀತಿ ಇರುವು ದರಿಂದ ಖಾಸಗಿ ಅಥವಾ ಸರಕಾರಿ ಜಾಗದಲ್ಲಿ ಉತ್ಪಾದಿತ ಮರಳು ಗಾರಿಕೆಗೆ (ಮ್ಯಾನುಫ್ಯಾಕ್ಚರ್ಡ್ ಸ್ಯಾಂಡ್ ಅಥವಾ ಎಂ- ಸ್ಯಾಂಡ್) ಸರಕಾರ ಅನುಮತಿ ನೀಡಲಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ವಿನಯ ಕುಲಕರ್ಣಿ ಹೇಳಿದ್ದಾರೆ.
ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಇಂದು ಮಂಗಳೂರಿಗೆ ಆಗಮಿಸಿದ್ದ ಸಂದರ್ಭ ಅವರು ನಗರದ ಸರ್ಕ್ಯೂಟ್ ಹೌಸ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಮರಳುಗಾರಿಕೆ ವಿರುದ್ಧ ಕಾನೂನು ಕ್ರಮಗಳನ್ನು ಬಿಗಿ ಮಾಡಿರುವು ದರಿಂದ ರಾಜ್ಯದಲ್ಲಿ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ. ಮರಳಿನ ಬೇಡಿಕೆ ಯನ್ನು ಪೂರೈಸುವ ಜೊತೆಗೆ ಪ್ರಕೃತಿಯ ಸಮತೋಲನವನ್ನೂ ಕಾಯ್ದುಕೊಳ್ಳ ಬೇಕಾಗಿದೆ. ಕೋಲಾರದಲ್ಲಿ 2,000 ಅಡಿಗೆ ಅಂತರ್ಜಲ ಕುಸಿದಿದ್ದು, ಮಲೆನಾಡು ಪ್ರದೇಶದಲ್ಲೂ 400 ಅಡಿವರೆಗೆ ಅಂತರ್ಜಲ ಕುಸಿತಗೊಂಡಿದೆ. ಈ ಬಗ್ಗೆ ಭೂಗರ್ಭ ತಜ್ಞರೊಂದಿಗೆ ಸಮಾಲೋಚನೆ ನಡೆಸಲಾಗುವುದು. ಈ ಹಿನ್ನೆಲೆಯಲ್ಲಿ ‘ಎಂ ಸ್ಯಾಂಡ್’ಗೆ ಉತ್ತೇಜನ ನೀಡುವುದು ಅಗತ್ಯವಾಗಿದೆ. ರಾಜ್ಯದ ಕೆಲವೊಂದು ಪಟ್ಟಾ ಭೂಮಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮರಳು ಇದೆ.
ಅವನ್ನೆಲ್ಲಾ ಗುರುತಿಸಲಾಗಿದೆ. ಈ ಖಾಸಗಿ ಭೂಮಿಯವರು ಮುಂದೆ ಬಂದಲ್ಲಿ ಅವರಿಗೆ ಸಬ್ಸಿಡಿ, ರಿಯಾಯಿತಿ ಮೂಲಕ ಮರಳುಗಾರಿಕೆಗೆ ಪರವಾನಿಗೆ ಒದಗಿಸಲಾಗುವುದು ಎಂದು ಸಚಿವರು ವಿವರಿಸಿದರು. ರಾಜ್ಯದಲ್ಲಿ ವಾರ್ಷಿಕ 28 ಸಾವಿರ ಲಕ್ಷ ಮೆಟ್ರಿಕ್ ಟನ್ ಮರಳಿನ ಬೇಡಿಕೆ ಇದೆ. ಆದರೆ ಪ್ರಸ್ತುತ 10 ಸಾವಿರ ಲಕ್ಷ ಮೆಟ್ರಿಕ್ ಟನ್ ಮರಳು ಉತ್ಪಾದನೆ ಯಾಗುತ್ತಿದೆ. ರಾಜ್ಯದಲ್ಲಿ ಎಂ-ಮರಳುಗಾರಿಕೆಯ 86 ಘಟಕಗಳು ಇವೆ. ಬೆಂಗಳೂರಿನಲ್ಲಿ 40 ಘಟಕಗಳಿದ್ದು, ಒಂದು ಘಟಕದಲ್ಲಿ ವಾರ್ಷಿಕ 4ರಿಂದ 5 ಕೋ.ರೂ. ವಹಿವಾಟು ನಡೆಯುತ್ತಿದೆ. ಮರಳಿನ ಅಭಾವ ರಾಜ್ಯಾದ್ಯಂತ ಸಮಸ್ಯೆಯಾಗಿದ್ದು, ಇದರಿಂದ ಮನೆ ಮತ್ತಿತರ ನಿರ್ಮಾಣ ಕಾರ್ಯಗಳಿಗೆ ತೊಂದರೆಯಾಗಿದೆ. ಮುಂದಿನ ಆರು ತಿಂಗಳೊಳಗೆ ಮರಳಿನ ಪ್ರಸಕ್ತ ಉತ್ಪಾದನೆಯನ್ನು ದ್ವಿಗುಣಗೊಳಿಸಲಾಗುವುದು ಎಂದವರು ಭರವಸೆ ನೀಡಿದರು. ನದಿಯಿಂದ ತೆಗೆದಿರುವ ಹೂಳಿನಲ್ಲಿರುವ ಮರಳನ್ನು ಸೋಸಿಕೊಂಡು ಮರುಬಳಕೆ ಮಾಡಲು ಅವಕಾಶ ಇದೆ. ಮರಳು ಸಾಗಾಟ ಮಾಡುವ ವಾಹನ ಗಳಿಗೆ ಜಿಪಿಎಸ್, ಬಾರ್ಕೋಡ್ ಹೊಂದಿರುವ ಟ್ರಿಪ್ ಶೀಟ್ ಕಡ್ಡಾಯಗೊಳಿಸಲಾಗುವುದು ಎಂದು ಸಚಿವ ವಿನಯ ಕುಲಕರ್ಣಿ ತಿಳಿಸಿದರು.
ಆರೋಗ್ಯ ಸಚಿವ ಯು.ಟಿ.ಖಾದರ್, ಶಾಸಕರಾದ ಮೊಯ್ದಿನ್ ಬಾವ, ಜೆ.ಆರ್.ಲೋಬೊ, ಐವನ್ ಡಿಸೋಜ, ದ.ಕ. ಜಿಲ್ಲಾ ಎಸ್ಪಿ ಡಾ.ಶರಣಪ್ಪ ಎಸ್.ಡಿ., ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಟಿ.ಕೆ.ಸುಧೀರ್ ಮೊದಲಾದವರು ಉಪಸ್ಥಿತರಿದ್ದರು.
ದ.ಕ. ಜಿಲ್ಲೆಯ ಸಿಆರ್ಝಡೇತರದಲ್ಲಿ ಐವರಿಗೆ ಪರವಾನಿಗೆ
ಕರಾವಳಿಯ ಸಿಆರ್ಝಡ್ ವಲಯದಲ್ಲಿ ಮರಳುಗಾರಿ ಕೆಗೆ ಕೇಂದ್ರದ ಪರಿಸರ ಇಲಾಖೆಯಿಂದ ಅನುಮತಿ ದೊರೆಯಬೇಕಿದೆ. ಒಂದೆರಡು ತಿಂಗಳಲ್ಲಿ ಈ ಸಮಸ್ಯೆ ಬಗೆಹರಿಯಬಹುದು. ದ.ಕ.ಜಿಲ್ಲೆಯಲ್ಲಿ ಸಿಆರ್ಝಡೇ ತರ 38 ಬ್ಲಾಕ್ಗಳನ್ನು ಗುರುತಿಸಲಾಗಿದೆ. 23 ಬ್ಲಾಕ್ಗಳಿಗೆ ಟೆಂಡರ್ ಕರೆಯಲಾಗಿತ್ತು. ಅದರಲ್ಲಿ 11 ಬ್ಲಾಕ್ಗಳಿಗೆ ಟೆಂಡರ್ ಹಾಕಿದ್ದಾರೆ. 5 ಮಂದಿಗೆ ಪರವಾನಿಗೆ ನೀಡಲಾಗಿದೆ. ಮರಳುಗಾರಿಕೆ ನಡೆಸುವವರು ಸ್ವಂತ ವಾಹನ ಹೊಂದಿರಬೇಕು ಎಂಬ ಷರತ್ತಿನ ಹಿನ್ನೆಲೆಯಲ್ಲಿ ಟೆಂಡರ್ ಹಾಕಲು ಹೆಚ್ಚು ಮಂದಿ ಮುಂದೆ ಬಂದಿಲ್ಲ. ಹಾಗಾಗಿ ಎರಡನೆ ಬಾರಿ ಟೆಂಡರ್ ಕರೆಯುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
-ವಿನಯ ಕುಲಕರ್ಣಿ, ಸಚಿವರು.
ಸರಕಾರಿ ಇಲಾಖೆಗಳಿಗೆ ಪ್ರತ್ಯೇಕ ಮರಳು ಬ್ಲಾಕ್
ಸರಕಾರಿ ಇಲಾಖೆಗಳಿಗೆ ವಿವಿಧ ಕಾಮಗಾರಿಗಳಿಗೆ ತೊಡಕಾಗದಂತೆ ಮರಳುಗಾರಿಕೆಗೆ ಪ್ರತ್ಯೇಕ ಬ್ಲಾಕ್ ಗುರುತಿಸಲು ಉದ್ದೇಶಿಸಲಾಗಿದೆೆ. ಲೋಕೋಪಯೋಗಿ, ಜಿಪಂ ಹಾಗೂ ಮಹಾನಗರ ಪಾಲಿಕೆಗಳಲ್ಲಿ ನಿರಂತರ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವುದರಿಂದ ಮರಳಿನ ಕೊರತೆ ಬಾರದಂತೆ ಪ್ರತ್ಯೇಕ ಬ್ಲಾಕ್ಗಳನ್ನು ಗುರುತಿಸಲಾಗುವುದು. ಆ ಬ್ಲಾಕ್ಗಳಲ್ಲಿ ಮಾತ್ರ ಸಂಬಂಧಪಟ್ಟ ಇಲಾಖೆಗಳು ಮರಳುಗಾರಿಕೆ ನಡೆಸಬಹುದು.
-ಎ.ಬಿ.ಇಬ್ರಾಹೀಂ, ದ.ಕ. ಜಿಲ್ಲಾಧಿಕಾರಿ







