ಜೆಎನ್ಯು ಹಗರಣ : ತಿರುಚಿದ ವೀಡಿಯೋ ಪ್ರಸಾರ ಮಾಡಿದ 3 ಟಿವಿ ವಾಹಿನಿಗಳ ವಿರುದ್ಧ ಕಾನೂನು ಕ್ರಮಕ್ಕೆ ದೆಹಲಿ ಸರಕಾರ ಆದೇಶ

ನವದೆಹಲಿ : ಜವಾಹರ್ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಫೆ. 9ರಂದು ನಡೆದ ಕಾರ್ಯಕ್ರಮವೊಂದರ ತಿರುಚಿದ ವೀಡಿಯೋಗಳನ್ನು ಪ್ರಸಾರಮಾಡಿದ ಝೀ ನ್ಯೂಸ್, ನ್ಯೂಸ್ ಎಕ್ಸ್ ಹಾಗೂಟೈಮ್ಸ್ ನೌ ಟೆಲಿವಿಷನ್ ಚಾನೆಲ್ಲುಗಳಿಳ ವಿರುದ್ಧ ಕ್ರಮ ಕೈಗೊಳ್ಳಲು ದೆಹಲಿಯ ಆಮ್ ಆದ್ಮಿ ಸರಕಾರ ಆದೇಶಿಸಿದೆ. ಈ ಹಿಂದೆ ಸರಕಾರವು ಈ ಮೂರು ಚಾನೆಲ್ಲುಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ಹೇಳಿತು. ಈ ವೀಡಿಯೋಗಳ ಆಧಾರದಲ್ಲಿ ದೆಹಲಿ ಪೊಲೀಸರು ಮೊದಲು ಕನ್ಹಯ್ಯಿನನ್ನು ಬಂಧಿಸಿದ್ದರೆ, ಹಲವು ದಿನಗಳ ನಂತರ ಇನ್ನಿಬ್ಬರು ಆರೋಪಿತ ವಿದ್ಯಾರ್ಥಿಗಳಾದ ಉಮರ್ ಖಾಲಿದ್ ಹಾಗೂ ಅನಿರ್ಬನ್ ಭಟ್ಟಾಚಾರ್ಯ ಶರಣಾಗತರಾಗಿದ್ದರು. ಅವರು ಮೂವರಲ್ಲಿ ಪ್ರಸ್ತುತ ಕನ್ಹಯ್ಯಾ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾನೆ.
ದೇಶದ್ರೋಹದ ಆರೋಪದ ಮೇಲೆ ಬಂಧಿತನಾಗಿದ್ದ ಕನ್ಹಯ್ಯೋ ಕುಮಾರ್ ಈ ಕಾರ್ಯಕ್ರಮದಲ್ಲಿ ದೇಶ ವಿರೋಧಿ ಘೋಷಣೆಗಳನ್ನು ಕೂಗಿದ್ದಾನೆಂಬುದಕ್ಕೆ ಯಾವುದೇ ಆಧಾರ ವನ್ನು ತಾನು ಕಂಡಿಲ್ಲವೆಂದು ಸರಕಾರ ಈ ಹಿಂದೆ ಹೇಳಿತ್ತು. ಸರಕಾರ ಈ ಪ್ರಕರಣದ ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶಿಸಿದ್ದರೆಈ ತನಿಖೆ ಕನ್ಹಯ್ಯನಿಗೆ ಕ್ಲೀನ್ ಚಿಟ್ ನೀಡಿತ್ತು.
ತಿರುಚಲಾಗಿತ್ತು ಎಂದು ಹೇಳಲಾದ ವೀಡಿಯೋಗಳನ್ನು ಕೇಜ್ರಿವಾಲ್ ಸರಕಾರ ಫೊರೆನ್ಸಿಕ್ ಪರೀಕ್ಷೆಗೂ ಕಳುಹಿಸಿತ್ತು. ಹೈದರಾಬಾದಿನ ಫೊರೆನ್ಸಿಕ್ ವರದಿಯ ಪ್ರಕಾರ ಕಾರ್ಯಕ್ರಮದ ಏಳು ವೀಡಿಯೋಗಳಲ್ಲಿ ಎರಡನ್ನು ತಿರುಚಲಾಗಿತ್ತೆಂದು ತಿಳಿದು ಬಂದಿತ್ತು.







