ಶ್ರೀಲಂಕಾದ ವಿಶ್ವಕಪ್ ತಂಡದಲ್ಲಿ ಬದಲಾವಣೆ
ನಾಯಕನಾಗಿ ಆ್ಯಂಜೆಲೊ ಮ್ಯಾಥ್ಯೂಸ್ ಆಯ್ಕೆ
ಕೊಲಂಬೊ, ಮಾ.8: ಭಾರತದಲ್ಲಿ ನಡೆಯುತ್ತಿರುವ ಐಸಿಸಿ ಟ್ವೆಂಟಿ-20 ವಿಶ್ವಕಪ್ನಲ್ಲಿ ಆಲ್ರೌಂಡರ್ ಆ್ಯಂಜೆಲೊ ಮ್ಯಾಥ್ಯೂಸ್ ವೇಗದ ಬೌಲರ್ ಲಸಿತ್ ಮಾಲಿಂಗ ಬದಲಿಗೆ ಶ್ರೀಲಂಕಾ ತಂಡದ ನಾಯಕತ್ವವನ್ನು ವಹಿಸಿಕೊಳ್ಳಲಿದ್ದಾರೆ.
ಮಾಜಿ ನಾಯಕ ಅರವಿಂದ್ ಡಿ ಸಿಲ್ವಾ ಅಧ್ಯಕ್ಷತೆಯ ನೂತನ ಆಯ್ಕೆ ಸಮಿತಿ ವಿಶ್ವಕಪ್ ತಂಡವನ್ನು ಆಯ್ಕೆ ಮಾಡಿದೆ.
ನಿರಂತರವಾಗಿ ಕಾಡುತ್ತಿದ್ದ ಗಾಯದ ಸಮಸ್ಯೆಯಿಂದಾಗಿ ಮಾಲಿಂಗ ಸೋಮವಾರ ಶ್ರೀಲಂಕಾ ಟ್ವೆಂಟಿ-20 ತಂಡದ ನಾಯಕತ್ವವನ್ನು ತ್ಯಜಿಸಿದ್ದರು.
2014ರಲ್ಲಿ ಬಾಂಗ್ಲಾದೇಶದಲ್ಲಿ ನಡೆದಿದ್ದ ಟ್ವೆಂಟಿ-20 ವಿಶ್ವಕಪ್ನಲ್ಲಿ ಮಾಲಿಂಗ ನಾಯಕತ್ವದಲ್ಲಿ ಶ್ರೀಲಂಕಾ ಚಾಂಪಿಯನ್ ಆಗಿತ್ತು.
ವೇಗದ ಬೌಲರ್ ಸುರಂಗ ಲಕ್ಮಲ್ ಎಡಗೈ ದಾಂಡಿಗ ಲಹಿರು ತಿರಿಮನ್ನೆ ಅವರೊಂದಿಗೆ ತಂಡಕ್ಕೆ ವಾಪಸಾಗಿದ್ದಾರೆ. ಈ ಇಬ್ಬರು ಆಟಗಾರರು ಇತ್ತೀಚೆಗೆ ಕೊನೆಗೊಂಡಿರುವ ಏಷ್ಯಾಕಪ್ನಲ್ಲಿ ಆಡಿರಲಿಲ್ಲ.
ಶ್ರೀಲಂಕಾ ತಂಡ: ಆ್ಯಂಜೆಲೊ ಮ್ಯಾಥ್ಯೂಸ್(ನಾಯಕ), ದಿನೇಶ್ ಚಾಂಡಿಮಲ್(ಉಪ ನಾಯಕ), ತಿಲಕರತ್ನೆ ದಿಲ್ಶನ್, ಲಹಿರು ತಿರಿಮನ್ನೆ, ಶೆಹಾನ್ ಜಯಸೂರ್ಯ, ಮಿಲಿಂದ ಸಿರಿವರ್ದನೆ, ಚಾಮರ ಕಪುಗಡೆರಾ, ದಾಸುನ್ ಶನಕಾ, ತಿಸರಾ ಪೆರೇರ, ನುವಾನ್ ಕುಲಸೇಕರ, ದುಶ್ಮಂತ ಚಾಮೀರ, ರಂಗನ ಹೆರಾತ್, ಸುರಂಗ ಲಕ್ಮಲ್, ಸಚಿತ್ರಾ ಸೇನಾನಾಯಕೆ ಹಾಗೂ ಲಸಿತ ಮಾಲಿಂಗ.







