ಪೂಜಾರಿಯನ್ನು ಕಚ್ಚಿದ ಭಕ್ತ ಪೊಲೀಸರ ವಶ

ಹೊಸದಿಲ್ಲಿ,ಮಾರ್ಚ್.9: ಶಿವರಾತ್ರಿ ಹಬ್ಬ ನಡೆಯುತ್ತಿತ್ತು. ಮಂದಿರದಲ್ಲಿ ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದರು. ಭಕ್ತಿಮಯ ವಾತಾವರಣವಿತ್ತು. ಭಕ್ತರು ಒಬ್ಬೊಬ್ಬರಂತೆ ಜಯಕಾರದೊಂದಿಗೆ ದರ್ಶನ ಪಡೆಯುತ್ತಿದ್ದರು. ಅಷ್ಟರಲ್ಲಿ ಹಠಾತ್ತನೆ ಭಕ್ತಿಮಯ ವಾತಾವರಣ ಹಿಂಸೆಯಲ್ಲಿ ಬದಲಾಯಿತು. ವ್ಯಕ್ತಿಯೊಬ್ಬ ಮಂದಿರದ ಹಿರಿಯ ಪೂಜಾರಿಯ ಮೇಲೆ ಹಲ್ಲೆಎಸಗಿದನಲ್ಲದೆ ಪೂಜಾರಿಯ ಕಿವಿ ಮತ್ತು ಬೆರಳನ್ನು ಹಲ್ಲಿನಿಂದ ಕಚ್ಚಿಬಿಟ್ಟಿದ್ದಾನೆ. ಸರತಿ ಮುರಿದು ಮುಂದೆ ಬರುತ್ತಿರುವ ಭಕ್ತನನ್ನು ಪ್ರಶ್ನಿಸಿದ್ದೇ ಪೂಜಾರಿಗೆ ಮುಳುವಾಗಿತ್ತು. ಮಹಾರಾಷ್ಟ್ರದ ಥಾಣೆಯ ಶ್ರೀನಗರದ ಸ್ವಯಂಭೂ ಅಮರನಾಥ ಮಂದಿರದಲ್ಲಿ ಶಿವರಾತ್ರಿಯಂದು ಈ ಘಟನೆ ನಡೆದಿದ್ದು, ಭಕ್ತರೆಲ್ಲರೂ ಸರತಿ ಸಾಲಿನಂತೆ ದರ್ಶನಕ್ಕೆ ಬರುತ್ತಿದ್ದಾಗ ಸರತಿ ಮುರಿದು ಚಪ್ಪಲಿ ಧರಿಸಿ ಮುಂದೆ ಬಂದ ವ್ಯಕ್ತಿಯನ್ನು ಪೂಜಾರಿ ನೋಡಿದ್ದರು. ಅವನನ್ನು ತಡೆದಾಗ ಶಿವಾಜಿ ನಾನಾ ಸಾಲುಂಕೆ ಎಂಬಾತ ಪೂಜಾರಿ ಬಾಬೂರಾವ್ ಗಂಗಾರಾಮ್ ಪಾಟೀಲ್ ಎಂಬ ಎಪ್ಪತ್ತರ ಹರೆಯದ ವೃದ್ಧ ಪೂಜಾರಿಯ ಬೆರಳು ಮತ್ತು ಕೈಯನ್ನು ಕಚ್ಚಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ ಎಂದು ಮಿಡ್ಡೆ ಪತ್ರಿಕೆ ವರದಿಮಾಡಿದೆ.





