ಸುಳ್ಯ: ಅಧಿಕಾರಿಗಳಿಂದ ಮಾಹಿತಿ ಪಡೆದ ಐವನ್ ಡಿ ಸೋಜ ವಿಧಾನ ಪರಿಷತ್ತಿನಲ್ಲಿ ಸರ್ಕಾರದ ಗಮನಕ್ಕೆ ತರುವ ಭರವಸೆ
ಸುಳ್ಯ 110 ಕೆವಿ ವಿದ್ಯುತ್ ಮಾರ್ಗ
ಸುಳ್ಯ: ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ ಗುರುವಾರ ಸುಳ್ಯಕ್ಕೆ ಆಗಮಿಸಿ 110 ವಿದ್ಯುತ್ ಮಾರ್ಗದ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಹಳೆಯ 33 ಕೆವಿ ಮಾರ್ಗ ಇರುವಲ್ಲಿಯೇ 110 ಕೆವಿ ಮಾರ್ಗ ರಚನೆ ಮಾಡುವುದೋ ಅಥವ ಹೊಸದಾಗಿ 110 ಲೈನ್ಗೆ ಸರ್ವೆ ನಡೆದಲ್ಲಿ ರಚನೆ ಮಾಡುವುದೋ ಎಂಬ ಕುರಿತು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆ ನಡೆದಿದೆ. ಹೊಸ ಲೈನ್ಗೆ ಸರ್ವೆ ನಡೆದ ಪ್ರದೇಶದಿಂದ ಆಕ್ಷೇಪಣೆಗಳು ಬಂದಿದ್ದು, 11 ಜನರು ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಹಾಗೂ ಮೂವರು ಸಿವಿಲ್ ನ್ಯಾಯಾಲಯದಲ್ಲ ದಾವೆ ಹೂಡಿದ್ದಾರೆ. ಹಾಗಾಗಿ ಇನ್ನೂ ವಿವರವಾದ ಯೋಜನಾ ವರದಿ ನೀಡಲು ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ. ಇದೀಗ ಚರ್ಚೆ ರಾಜಕೀಯ ತಿರುವು ಪಡೆದಿದೆ. ಕಾಂಗ್ರೆಸ್ನವರು ಬಿಜೆಪಿ ವಿರುದ್ಧ ಹಾಗೂ ಬಿಜೆಪಿಯವರು ಕಾಂಗ್ರೆಸ್ ವಿರುದ್ಧ ಹೇಳಿಕೆಗಳನ್ನು ನೀಡುವ ಕೆಲಸಗಳು ನಡೆಯುತ್ತಿವೆ. ಆದರೆ ಇದು ಸಾಮಾಜಿಕ, ಮೂಲಭೂತ ಸೌಕರ್ಯ ಹಾಗೂ ಜನರ ಹಕ್ಕಿನ ವಿಷಯವಾಗಿರುವುದರಿಂದ ಯಾರೂ ರಾಜಕೀಯ ಮಾಡಬಾರದು. ಜನರಿಗೆ ಕೊರತೆ ಇಲ್ಲದಂತೆ ವಿದ್ಯುತ್ ಒದಗಿಸಲು ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಸರ್ಕಾರದ ಗಮನಕ್ಕೆ;
ಮುಂಬರುವ ಬಜೆಟ್ ಅಧಿವೇಶನದಲ್ಲಿ ಗಮನ ಸೆಳೆಯುವ ಪ್ರಶ್ನೆಯ ಮೂಲಕ ವಿಧಾನ ಪರಿಷತ್ತಿನಲ್ಲಿ ಸುಳ್ಯದ 110 ಕೆವಿ ವಿದ್ಯುತ್ ಮಾರ್ಗದ ಕುರಿತು ಸರ್ಕಾರದ ಗಮನ ಸೆಳೆಯುವುದಾಗಿ ಐವನ್ ಡಿ ಸೋಜ ಹೇಳಿದರು. ಮುಖ್ಯಮಂತ್ರಿ ಹಾಗೂ ಇಂಧನ ಸಚಿವರ ಗಮನಕ್ಕೆ ತರುವ ಯತ್ನ ಮಾಡುವುದಾಗಿ ತಿಳಿಸಿದರು. ಶುಕ್ರವಾರವೇ ಬೆಂಗಳೂರಿನಲ್ಲಿ ನಡೆಯುವ ಬಜೆಟ್ ಪೂರ್ವತಯಾರಿ ಸಭೆಗೆ ತೆರಳಲಿದ್ದು, ಈ ಸಂದರ್ಭ ಮುಖ್ಯಮಂತ್ರಿ ಮತ್ತು ಇಂಧನ ಸಚಿವರನ್ನು ಮುಖತಃ ಭೇಟಿ ಮಾಡಿ ಈ ಕುರಿತು ಒತ್ತಡ ಹಾಕುವುದಾಗಿ ಅವರು ತಿಳಿಸಿದರು. 110 ಕೆವಿ ಮಾರ್ಗ ರಚನೆಯೊಂದಿಗೆ ಸುಳ್ಯದಲ್ಲಿರುವ 10 ಎಂವಿಎ ಸ್ಟೇಶನ್ನನ್ನು 20ಎಂವಿಎ ಮತ್ತು 20ಎಂವಿಎ ಸೇರಿ 40 ಎಂವಿಎ ಸ್ಟೇಶನ್ಗೆ ಮೇಲ್ದರ್ಜೆಗೆ ಏರಿಸಬೇಕಾಗಿದೆ. ಹಾಗಾಗಿ ಕನಿಷ್ಠ 2 ವರ್ಷವಾದರೂ ಈ ಎಲ್ಲಾ ಕಾಮಗಾರಿಗಳಿಗೆ ಅಗತ್ಯವಿದೆ. ಈಗಿರುವ ಸ್ಥಿತಿಯಲ್ಲಿ ತಕ್ಷಣಕ್ಕೆ ವಿದ್ಯುತ್ ಗುಣಮಟ್ಟ ಸುಧಾರಿಸಲು ಕುಂಬ್ರದಿಂದ ಸುಳ್ಯಕ್ಕೆ ಬರುವ 33 ಕೆವಿ ಮಾರ್ಗದ ವಯರ್ಗಳನ್ನು ಬದಲಿಸಬೇಕಿದೆ. ಅದಕ್ಕೆ ಮೂರೂವರೆ ಕೋಟಿಯ ಟೆಂಡರ್ ಆಗಿದೆ. ಗುತ್ತಿಗೆ ಪಡೆದವರು ಒಟ್ಟು ಮೂರು ಕೆಲಸಗಳನ್ನು ಒಪ್ಪಿಕೊಂಡಿದ್ದು, ಈ ಕೆಲಸ ಮಾಡುತ್ತಿಲ್ಲ. ಇದನ್ನು ಮೊದಲು ಮುಗಿಸುವಂತೆ ಅಧಿಕಾರಿಗಳ ಮೂಲಕ ಅವರಿಗೆ ಸೂಚನೆ ನೀಡುವುದಾಗಿ ಅವರು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವೆಂಕಪ್ಪ ಗೌಡ, ದಿನೇಶ್ ಅಂಬೆಕಲ್ಲು, ಕೆ.ಎಂ.ಮುಸ್ತಫ, ಎಸ್.ಸಂಶುದ್ದೀನ್, ತೀರ್ಥರಾಮ ಜಾಲ್ಸೂರು, ಜೆ.ಕೆ.ಹಮೀದ್ ಮೊದಲಾದವರಿದ್ದರು.
ಮೆಸ್ಕಾಂ ಆವರಣದಲ್ಲಿ ಬಿಜೆಪಿ ಪ್ರತಿಭಟನಾ ಶಾಮಿಯಾನ
ವರದಿ ನೀಡಲು ಅಧಿಕಾರಿಗಳಿಗೆ ಸೂಚನೆ
ಮೆಸ್ಕಾಂ ಕಚೇರಿಯಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿಯವರು ಕಚೇರಿ ಆವರಣದೊಳಗೆ ಅನಧಿಕೃತವಾಗಿ ಶಾಮಿಯಾನ ಹಾಕಿದ್ದು, ಈ ಕುರಿತಂತೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾಗಿ ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ ಹೇಳಿದ್ದಾರೆ.
ಸರ್ಕಾರಿ ಕಚೇರಿಗಳ ಆವರಣದೊಳಗೆ ರಾಜಕೀಯ ಪಕ್ಷಗಳ ಚಟುವಟಿಕೆಗೆ ಅವಕಾಶ ನೀಡುವುದು ಸರಿಯಲ್ಲ. ಈ ಕುರಿತು ವರದಿ ನೀಡುವಂತೆ ಮೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾಗಿ ಅವರು ತಿಳಿಸಿದರು. 110 ವಿದ್ಯುತ್ ಮಾರ್ಗಕ್ಕೆ ಆಕ್ಷೇಪ ಸಲ್ಲಿಸಲು ಇರುವಷ್ಟು ಆಸಕ್ತಿಯನ್ನು ಸುಳ್ಯ ಶಾಸಕರು ಅದಕ್ಕೆ ಪರಿಹಾರ ಹುಡುಕಲು ವಹಿಸಬೇಕಿತ್ತು. ಆಕ್ಷೇಪ ಸಲ್ಲಿಸುವುದು ಮಾತ್ರ ಅವರ ಜವಾಬ್ದಾರಿ ಅಲ್ಲ, ಪರಿಹಾರ ಹುಡುಕುವುದೂ ಅವರ ಜವಾಬ್ದಾರಿ ಎಂದರು.







