ಮಹಾರಾಷ್ಟ್ರ ನಿಮ್ಮಪ್ಪನ ಸೊತ್ತಲ್ಲ : ರಾಜ್ ಠಾಕ್ರೆಗೆ ಗುಡುಗಿದ ತೇಜಸ್ವಿ ಯಾದವ್
ಪಾಟ್ನಾ , ಮಾ. 10 : ಮುಂಬೈಯಲ್ಲಿ ಹೊಸ ಪರ್ಮಿಟ್ ಪಡೆದ ರಿಕ್ಷಾಗಳಿಗೆ ಬೆಂಕಿ ಕೊಡಿ ಎಂದು ಎಂ ಎನ್ ಎಸ್ ಪಕ್ಷದ ಅಧ್ಯಕ್ಷ ರಾಜ್ ಠಾಕ್ರೆ ನೀಡಿದ ಪ್ರಚೋದನಕಾರಿ ಕರೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಎಲ್ಲ ಪಕ್ಷಗಳ ಮುಖಂಡರು ರಾಜ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಆದೇಶಿಸಿದ್ದಾರೆ.
ಆದರೆ ರಾಜ್ ಗುರಿ ಮಾಡಿರುವ ಕಾರ್ಮಿಕರು ಹಾಗು ರಿಕ್ಷಾದವರಲ್ಲಿ ಹೆಚ್ಚಿನವರು ಬಂದಿರುವ ಬಿಹಾರದಲ್ಲಿ ರಾಜ್ ಗೆ ತಕ್ಕ ಪ್ರತಿಯುತ್ತರ ಬಂದಿದೆ. ಬೆಂಕಿ ಕೊಡುವ ರಾಜ್ ಹೇಳಿಕೆಗೆ ತಿರುಗೇಟು ನೀಡಿರುವ ಬಿಹಾರದ ಉಪಮುಖ್ಯಮಂತ್ರಿ ಹಾಗು ಲಾಲು ಪ್ರಸಾದ್ ಯಾದವ್ ಅವರ ಪುತ್ರ ತೇಜಸ್ವಿ ಯಾದವ್ " ಮಹಾರಾಷ್ಟ್ರ ಯಾರದ್ದೋ ಅಪ್ಪನ ಸೊತ್ತಲ್ಲ ( ಬಾಪ್ ಕಿ ಜಾಗೀರ್ ನಹಿ ). ಮಹಾರಾಷ್ಟ್ರ ಹಾಗು ಇಡೀ ದೇಶ ಇಲ್ಲಿನ ಎಲ್ಲರಿಗೂ ಸೇರಿದ್ದು ಎಂದು ಗುಡುಗಿದ್ದಾರೆ. ಈ ಮೂಲಕ ರಾಜ್ ಗೆ ಅವರದೇ ತೀಕ್ಷ್ಣ ಭಾಷೆಯಲ್ಲಿ ತೇಜಸ್ವಿ ಪ್ರತಿಕ್ರಿಯಿಸಿದ್ದಾರೆ.
ರಾಜ್ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಲು ಕಾಂಗ್ರೆಸ್ ಆಗ್ರಹಿಸಿದೆ. 2008 ರಿಂದ ಇಲ್ಲಿವರೆಗೆ ರಾಜ್ ಠಾಕ್ರೆ ವಿರುದ್ಧ 56 ದ್ವೇಷ ಭಾಷಣಗಳು ಹಾಗು 50 ಇತರ ಆರೋಪಗಳ ಪ್ರಕರಣಗಳು ದಾಖಲಾಗಿವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ (2014) ಅವರ ಪಕ್ಷಕ್ಕೆ ಕೇವಲ ಒಂದು ಸ್ಥಾನ ಸಿಕ್ಕಿತ್ತು.